
ಬೆಂಗಳೂರು(ಮೇ.27): ರಾಜ್ಯ ಸಚಿವ ಸಂಪುಟ ರಚನೆಗೆ ಹಗ್ಗಾಜಗ್ಗಾಟ ನಡೆದಿರುವ ಹೊತ್ತಿನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಯಸ್ಸು ಲೋಕಸಭಾ ಚುನಾವಣೆವರೆಗೆ ಮಾತ್ರವಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರಮುಖ ನಾಯಕರು ಶುಕ್ರವಾರ ಭವಿಷ್ಯ ನುಡಿದಿರುವುದು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು, ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕಾರಣದ ದಿಕ್ಕು ಬದಲಾಗಲಿದೆ. ದುರಂಹಕಾರದ ಕಾಂಗ್ರೆಸ್ ಸರ್ಕಾರದ ಆಯಸ್ಸು ಸಹ ಮುಗಿಯಲಿದೆ ಎಂದಿದ್ದಾರೆ.
KARNATAKA CABINET EXPANSION: ಲಕ್ಷ್ಮಣ ಸವದಿ, ರಾಯರೆಡ್ಡಿಗೆ ತಪ್ಪಿದ ಸಚಿವ ಸ್ಥಾನ!
ರಾಜ್ಯದಲ್ಲಿ ಸರ್ಕಾರ ರಚನೆಯಾದ ಕೂಡಲೇ ಕಾಂಗ್ರೆಸ್ ನಾಯಕರು ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿದ್ದಾರೆ. ಈ ದ್ವೇಷದ ರಾಜಕಾರಣವನ್ನು ಸಮರ್ಥವಾಗಿ ಎದುರಿಸುತ್ತೇವೆ. ಈ ದುರಹಂಕಾರ ಹಾಗೂ ದ್ವೇಷ ಆಡಳಿತದ ಆಯಸ್ಸು ಮುಂದಿನ ಲೋಕಸಭಾ ಚುನಾವಣೆವರೆಗೆ ಮಾತ್ರ ಇರಲಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.
ರಾಜ್ಯ ಸರ್ಕಾರದಲ್ಲಿ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯವಿದೆ. ಮೊದಲ ಹಂತದ ಮಂತ್ರಿಮಂಡಲಕ್ಕೆ ರಾತ್ರಿ ಮೂರೂವರೆಗೂ ಇರುವ ಹಗ್ಗಜಗ್ಗಾಟ ಮಾಡಿದರು. ಈಗ ಎರಡನೇ ಹಂತದ ಪೈಪೋಟಿ ನಡೆದಿದೆ. ಇದನ್ನೆಲ್ಲ ನೋಡಿದರೆ ಇದು ಸಮ್ಮಿಶ್ರ ಸರ್ಕಾರ ಇದ್ದಂತಿದೆ. ಕಳೆದ ಬಾರಿ ಎರಡು ಪಕ್ಷಗಳಿಂದ ಸಮ್ಮಿಶ್ರ ಸರ್ಕಾರ ಇತ್ತು. ಆ ಸರ್ಕಾರದ ಅಧಿಕಾರ ಕಳೆದ ಲೋಕಸಭೆವರೆಗೂ ಇತ್ತು. ಹಾಗೇ ಈಗಿನ ಒಂದೇ ಪಕ್ಷ ಇದ್ದರೂ, ಎರಡು ಪಕ್ಷಗಳ ರೀತಿ ಸಮ್ಮಿಶ್ರ ಸರ್ಕಾರ ಇದೆ. ಇದರ ಆಯಸ್ಸು ಕೂಡ ಬರುವ ಲೋಕಸಭೆ ಚುನಾವಣೆವರೆಗೆ ಇರುತ್ತದೆ ಎಂದು ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
Karnataka Cabinet Expansion: 24 ನೂತನ ಸಚಿವರ ಪಟ್ಟಿ ಬಿಡುಗಡೆ, 7 ಲಿಂಗಾಯತರಿಗೆ ಸ್ಥಾನ
ಸರ್ಕಾರ ಹೆಚ್ಚು ದಿನ ಇರಲ್ಲ-ಕುಮಾರಸ್ವಾಮಿ:
ಇನ್ನೊಂದೆಡೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 2024, 2025 ಹಾಗೂ 2028ರಲ್ಲಿ ಯಾವಾಗ ಬೇಕಾದರೂ ವಿಧಾನಸಭಾ ಚುನಾವಣೆ ಬರಬಹುದು. ನಾನು ಈಗಲೇ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನನ್ನ ಮಾತುಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ ಪಕ್ಷ ಸಂಘಟನೆಗೆ ಬದ್ಧರಾಗಿ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ನಡವಳಿಕೆ ನೋಡಿದರೆ ಸರ್ಕಾರವು ಪೂರ್ಣಾವಧಿ ಮುಗಿಸುತ್ತದೆ ಎಂಬುದು ಖಾತ್ರಿಯಾಗುತ್ತಿಲ್ಲ ಎಂದರು. ನನಗೆ ಮುಂದಿನ ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಎಂತಹ ಬದಲಾವಣೆಯಾಗಲಿದೆ ಎಂಬುದು ಗೊತ್ತಿದೆ. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಆಟ ನಡೆಯಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.