
ರಾಮನಗರ (ಅ.02): ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಪಕ್ಷದ ವರಿಷ್ಠರ ಜೊತೆ ನಾಯಕರು ವ್ಯಕ್ತಪಡಿಸಿರುವ ಭಾವನೆಗಳು ಹಾಗೂ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗುವುದು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಜೊತೆ ಆಕಸ್ಮಿಕವಾಗಿ ಮೈತ್ರಿ ಆಗಿತ್ತು.ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರವರು ಮೈತ್ರಿ ಬಗ್ಗೆ ತೀರ್ಮಾನ ಮಾಡಿದ್ದಾರೆ. ದೇವೇಗೌಡರು ನಮ್ಮ ಜೊತೆ ಇರಬೇಕು ಎಂಬುದು ಮೋದಿಯವರ ಅಪೇಕ್ಷೆ. ನಮ್ಮನ್ನ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ ಹಣ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಹಂಚಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ. ಕಂದಕೂರ್ ಅವರ ಜೊತೆ ಮಾತನಾಡಿದ್ದೇವೆ. ಮೊನ್ನೆ ಅವರು ಒಂದಷ್ಟು ಸಲಹೆ ಸೂಚನೆ ನೀಡಿದ್ದು, ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅದರ ಹೊರತಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಿಸ್ಟರ್ ಡಿಕೆಶಿ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ: ದೇವೇಗೌಡ
ಜೆಡಿಎಸ್ ಹಿಂದುತ್ವದ ಅಜೆಂಡಾಗೆ ಶಿಫ್ಟ್ ಆಗಲ್ಲ: ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕಂಡಾಕ್ಷಣಕ್ಕೆ ಜೆಡಿಎಸ್ ಹಿಂದುತ್ವದ ಅಜೆಂಡಾಗೆ ಶಿಫ್ಟ್ ಆಗಲ್ಲ. ಪಕ್ಷವು ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗಲು ಬಿಡದೆ ಅವರ ಸಮಸ್ಯೆಗಳು ಮತ್ತು ಹಿತರಕ್ಷಣೆಗೆ ಬದ್ಧವಾಗಿರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಮುಸ್ಲಿಂ ಸಮುದಾಯಕ್ಕೆ ಏನು ಕೆಟ್ಟದಾಗಲಿಲ್ಲ. ಸಾರ್ವಜನಿಕವಾಗಿ ಸೌಹಾರ್ದಯುತ ವಾತಾವರಣ ಇರಬೇಕು. ನಮ್ಮ ಆಚಾರ ವಿಚಾರಗಳಿಗೆ ಧಕ್ಕೆ ಬಂದಾಗ ನಾವು ಖಂಡಿಸ್ತೀವಿ ಎಂದರು.
ಬಿಜೆಪಿ ಜೊತೆ ಶಿವಸೇನೆ, ಶರತ್ ಪವಾರ್, ನಿತೀಶ್ ಕುಮಾರ್ ಕೂಡಾ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಮ್ಮ ಜಮೀರ್ ಗೆ ಮಂತ್ರಿ ಸ್ಥಾನ ಕೊಡಲಾಗಿತ್ತು. ಈಗಲೂ ಮೈತ್ರಿಯಿಂದ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು. ಮೈತ್ರಿ ವಿರುದ್ಧ ಅಲ್ಪಸಂಖ್ಯಾತರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಪ್ರಶ್ನೆಗೆ ಉತ್ತರಿಸಿದ ಫಾರೂಕ್ , ಜೆಡಿಎಸ್ ನಿಂದ ಅಲ್ಪಸಂಖ್ಯಾತರು ದೂರ ಆಗುತ್ತಿಲ್ಲ. ನಾನು ಇಲ್ಲೇ ಇದೀನಲ್ಲ.ಮೈತ್ರಿಯ ಪ್ರತಿ ಹಂತದಲ್ಲೂ ಇಬ್ರಾಹಿಂ ಅವರನ್ನು ವಿಶ್ವಾಸಕ್ಕೆ ಪಡೆದು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜೊತೆಗಿನ ಹೊಂದಾಣಿಕೆ ಕುರಿತು ಜೆಡಿಎಸ್ ಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡಲಾಗಿದೆ. ಸಿ.ಎಂ.ಇಬ್ರಾಹಿಂ ಅವರು ನಿನ್ನೆ ಕಾಲೇಜು ಮೈದಾನದಲ್ಲಿ ನಡೆದ ಸಭೆಯಲ್ಲೇ ಮೈತ್ರಿ ಆಗಬೇಕಾದರೆ ಬಹಳ ಚರ್ಚೆ ಮಾಡಬೇಕು ಎಂದಿದ್ದಾರೆ. ಅಲ್ಲದೆ, ದೇವೇಗೌಡರು ಏನೇ ನಿರ್ಧಾರ ತೆಗೆದುಕೊಂಡರು ಅದನ್ನು ಒಪ್ಪುತ್ತೇವೆ ಎಂದಿದ್ದರು. ನಮ್ಮ ಕೋರ್ ಕಮಿಟಿಯಲ್ಲಿ ದೇವೇಗೌಡರ ಎಲ್ಲ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ. ಹಾಗಾಗಿ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಜೊತೆ ಮುಂದಿನ ಚುನಾವಣೆ ಎದುರಿಸುತ್ತೇವೆ.
- ಜಿ.ಟಿ.ದೇವೇಗೌಡ, ಶಾಸಕರು, ಚಾಮುಂಡೇಶ್ವರಿ ಕ್ಷೇತ್ರ
ಚುನಾವಣೆಗಳಲ್ಲಿ ಯಾರು ಕೂಡ ಕೇವಲ ಒಂದು ಜಾತಿ, ಒಂದು ಸಮುದಾಯದಿಂದ ಆಯ್ಕೆಯಾಗಲು ಸಾಧ್ಯವಿಲ್ಲ.ಮುಸ್ಲಿಂ ಮತದಾರರು ನಮ್ಮಿಂದ ದೂರ ಆಗಿಲ್ಲ.ಮುಸ್ಲಿಂ ಮತಗಳು ದೂರವಾಗಿದ್ದರೆ ಕಲ್ಬುರ್ಗಿಯಲ್ಲಿ ಏಕೆ ಜೆಡಿಎಸ್ ಸೇರುತ್ತಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷರು ದೇವೆಗೌಡರ ತೀರ್ಮಾನಕ್ಕೆ ಬದ್ದ ಅಂತ ಹೇಳಿದ್ದರು. ಸದ್ಯ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.
-ವೆಂಕಟ್ರಾವ್ ನಾಡಗೌಡ, ಮಾಜಿ ಶಾಸಕರು
ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್
ನಾನು ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದವನು. ಈ ಹಿಂದೆ ದಾಸರಹಳ್ಳಿ ಕ್ಷೇತ್ರದಲ್ಲಿ ಆಗಿದ್ದ ಅನ್ಯಾಯಕ್ಕೆ ಬೇಸತ್ತು ಜನ ನನ್ನನ್ನು ಆಯ್ಕೆ ಮಾಡಿದ್ದರು. ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ತಿ ಬಗ್ಗೆ ಚರ್ಚೆ ಮಾಡಲಾಗಿದೆ. ನಮ್ಮ ಕ್ಷೇತ್ರದ ಒಂದಷ್ಟು ಸಮಸ್ಯೆಗಳಿವೆ. ನಮ್ಮ ನಾಯಕರಿಗೆ ಹೇಳಿದ್ದೇವೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ದೊಡ್ಡವರು ಏನೇ ಹೇಳಿದರೂ ನಾವು ಅದಕ್ಕೆ ಬದ್ದವಾಗಿರುತ್ತೇವೆ.
-ಮಂಜುನಾಥ್, ಮಾಜಿ ಶಾಸಕ, ದಾಸರಹಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.