MLC Election: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ಕುಟುಂಬ ಕಲ್ಯಾಣ

By Suvarna NewsFirst Published Nov 23, 2021, 4:22 PM IST
Highlights

* ಕರ್ನಾಟಕದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣೆ
* ಅಭ್ಯರ್ಥಿಗಳನ್ನ ಘೋಷಿಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌
* ಮೂರು ಪಕ್ಷಗಳಿಂದ ಕುಟುಂಬ ರಾಜಕಾರಣಕ್ಕೆ ಮಣೆ 

ಬೆಂಗಳೂರು, (ನ.23):  ಬುದ್ದಿವಂತರ ಸದನ, ಚಿಂತಕರ ಚಾವಡಿ ಎಂದೆಲ್ಲಾ ಕರೆಯುತ್ತಿದ್ದ ವಿಧಾನಪರಿಷತ್‍ನ ಚುನಾವಣೆ (MLC Elections) ಈ ಬಾರಿ ಕುಟುಂಬ ರಾಜಕಾರಣವಾಗಿದೆ(Family Politics). .ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ.

ಹೌದು...ಅಣ್ಣ- ತಮ್ಮ, ಮಕ್ಕಳು, ಸಂಬಂಕರು, ರಕ್ತ ಸಂಬಂಧಿಗಳು, ದೂರದ ಸಂಬಂಧಿಕರು ಹೀಗೆ ಕುಟುಂಬ ರಾಜಕಾರಣಕ್ಕೆ ಪರಿಷತ್ ಚುನಾವಣೆ ಮುನ್ನುಡಿ ಬರೆಯುವಂತಿದೆ.

MLC Election | KPCC ಕಚೇರಿ ಸಾಮಾನ್ಯ ಸಿಬ್ಬಂದಿಗೆ ಕಾಂಗ್ರೆಸ್ ಟಿಕೆಟ್‌ : ಅಚ್ಚರಿ ಬೆಳವಣಿಗೆ

ಮೂರು ಪಕ್ಷಗಳಿಂದ ಕುಟುಂಬ ಕಲ್ಯಾಣ
ಕುಟುಂಬ ರಾಜಕಾರಣಕ್ಕೆ ಅನ್ವರ್ಥ ನಾಮ ಎನ್ನುವಂತಿರುವ ಜೆಡಿಎಸ್ (JDS) ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಪ್ರವೇಶಿಸಿದೆ. ಜೆಡಿಎಸ್ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ಸಂಬಂಧಿಕರು, ಮಕ್ಕಳು, ಸಹೋದರರಿಗೆ ಮಣೆ ಹಾಕಲಾಗಿದೆ.

ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಬಿಜೆಪಿ (BJP) ಕೂಡ ಇತರೆ ಪಕ್ಷಗಳಿಗಿಂತ ವಿಭಿನ್ನವಾಗಿಲ್ಲ. ಇಲ್ಲಿಯೂ ಕೂಡ ಮತ್ತೆ ಕುಟುಂಬದವರಿಗೆ ಮಣೆ ಹಾಕಲಾಗಿದೆ. ನಾವು ಇತರೆ ಪಕ್ಷಗಳಿಗಿಂತ ವಿಭಿನ್ನ ಎಂದು ವಿರೋಧಿಗಳನ್ನು ಟೀಕಿಸುತ್ತಿದ್ದ ಕೇಸರಿ ಪಡೆಯೇ ಕುಟುಂಬ ಕಲ್ಯಾಣ ಎಂದಿದೆ.

ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ 

ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತದೆ ಎನ್ನುವ ಕಳಂಕ ಇದ್ರು ಸಹ ಪಕ್ಷದ ವರಿಷ್ಠ ಎಚ್‌.ಡಿ ದೇವೇಗೌಡ, ಈ ಗ ಎದುರಾಗಿರುವ ಪರಿಷತ್ ಚುನಾವಣೆಗೂ ತಮ್ಮ ಕುಟುಂಬದ ಮತ್ತೊಂದು ಕುಡಿಯನ್ನು ಕಣಕ್ಕಿಳಿಸಿದ್ದಾರೆ. ಹಾಸನ ಜಿಲ್ಲಾಯಿಂದ ಈ ಪರಿಷತ್ ಚುನಾವಣೆಗೆ ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಸೂರಾಜ್ ರೇವಣ್ಣ ಸ್ಪರ್ಧೆ ಮಾಡಿದ್ದಾರೆ. ವಿಶೇಷವೆಂದರೆ ಈಗಾಗಲೇ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಮೊದಲು ರೇವಣ್ಣನವರ ಪತ್ನಿ ಭವನಿ ಅವರಿಗೆ ಟಿಕೆಟ್ ನೀಡಬೇಕೆನ್ನುವ ಮಾತುಗಳು ಕೇಳಿಬಂದಿದ್ದವು. ಅಂತಿಮವಾಗಿ ಪುತ್ರ ಸೂರಜ್‌ ರೇವಣ್ಣಗೆ ಟಿಕೆಟ್ ಲಭಿಸಿದೆ,

ಬಿಜೆಪಿಯಿಂದಲೂ ಕುಟುಂಬ ರಾಜಕಾರಣ

ನಾವು ಇತರೆ ಪಕ್ಷಗಳಿಗಿಂತ ವಿಭಿನ್ನ. ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಆದ್ಯತೆ ಎನ್ನುತ್ತಿದ್ದ ಬಿಜೆಪಿ ಸಹ ಪರಿಷತ್ ಚುನಾವಣೆಯಲ್ಲಿ ಕುಟುಂಬ ಕಲ್ಯಾಣಕ್ಕೆ ಮಣೆ ಹಾಕಿದೆ.

* ದ್ವಿಸದಸ್ಯ ಕ್ಷೇತ್ರವನ್ನು ಹೊಂದಿರುವ ಧಾರವಾಡದಿಂದ ಎರಡನೇ ಬಾರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರನ್ನ ಕಣಕ್ಕಿಳಿಸಲಾಗಿದೆ.

* ಇನ್ನು  ಶಿವಮೊಗ್ಗದಲ್ಲಿ ಹಿರಿಯ ಬಿಜೆಪಿ ನಾಯಕ ಡಿಹೆಚ್ ಶಂಕರ ಮೂರ್ತಿ ಅವರ ಪುತ್ರ ಡಿಎಸ್ ಅರುಣ್ ಮುಂಬರುವ ಎಂಎಲ್ ಸಿ ಚುನಾವಣೆಗೆ ನಾಮಪತ್ರ ಸಲ್ಲಿಕೆ 

ಕಾಂಗ್ರೆಸ್ ಫ್ಯಾಮಿಲಿ ಪಾಲಿಟಿಕ್ಸ್

ಮೊದಲಿನಿಂದಳು ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತ ಬಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಪರಿಷತ್ ಚುನಾವಣೆಯಲ್ಲೂ ಅದನ್ನೇ ಮುಂದುವರೆಸಿದೆ.

* ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಲಾಗಿದೆ.

* ಕೊಡಗಿನಿಂದ ಮಾಜಿ ಸಚಿವ ಎ.ಮಂಜು ಪುತ್ರ ಮಂಥರ್ ಗೌಡ ಅವರನ್ನ ಕಾಂಗ್ರೆಸ್ ಕಣಕ್ಕಿಳಿಸಿದೆ. ವಿಶೇಷವೆಂದರೆ  ಎ ಮಂಜು ಮಾಜಿ ಕಾಂಗ್ರೆಸ್ ನಾಯಕ. ಈ ಅವರು ಬಿಜೆಪಿಯಲ್ಲಿದ್ದಾರೆ. 

* ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಬಂಧಿ ಎಸ್.ರವಿ ಅವರಿಗೆ ಮಣೆ ಹಾಕಲಾಗಿದೆ.

* ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಸಹೋದರ ಸುನೀಲ್‍ಗೌಡ ಪಾಟೀಲ್ ಅವರಿಗೆ ಬಿಜಾಪುರ, ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದ ಕೈ ಅಭ್ಯರ್ಥಿಯಾಗಿದ್ದಾರೆ. 

* ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಆರ್ ರಾಜೇಂದ್ರ ಅವರು ಕೆ. ಎನ್ ರಾಜಣ್ಣ ಅವರ ಪುತ್ರರಾಗಿದ್ದಾರೆ.
* ರಾಯಚೂರು-ಕೊಪ್ಪಳದಿಂದ ಅಖಾಡಕ್ಕಿಳಿದಿರುವ ಶರಣಗೌಡ ಪಾಟೀಲ್ ಅವರು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಪುತ್ರ.
* ಬೀದರ್‌ನಿಂದ ಕಣಕ್ಕಿಳಿದಿರುವ ಭೀಮರಾವ್ ಪಾಟೀಲ್ ಅವರು ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಹೋದರ,

ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ. ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. 

ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.

click me!