
ವಿಜಯಪುರ(ಜ.22): ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ತಾಲೀಮು ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ಶನಿವಾರ ಮತ್ತೊಂದು ಬೃಹತ್ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿತು. ‘ವಿಜಯ ಸಂಕಲ್ಪ’ ಹೆಸರಿನ ಈ ಅಭಿಯಾನಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅದ್ಧೂರಿ ಚಾಲನೆ ನೀಡಿದರು. ಇದೇ ವೇಳೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ‘ವಿಜಯ ಸಂಕಲ್ಪ’ ಅಭಿಯಾನಕ್ಕೆ ಪಕ್ಷದ ಹಿರಿಯ ನಾಯಕರು, ಸಚಿವರು ಹಾಗೂ ಶಾಸಕರು ಚಾಲನೆ ನೀಡಿದರು. ರಾಜ್ಯದ 2 ಕೋಟಿ ಮತದಾರರ ಮನೆಗಳಿಗೆ ಭೇಟಿ ನೀಡುವುದು ಹಾಗೂ ಮಿಲ್ಡ್ ಕಾಲ್ ಮೂಲಕ ಸದಸ್ಯತ್ವ ಸ್ವೀಕಾರ ಮಾಡುವ ನಿಟ್ಟಿನಲ್ಲಿ ಶನಿವಾರ ಆರಂಭವಾಗಿರುವ ಈ ಅಭಿಯಾನ ಇದೇ ತಿಂಗಳ 29ರವರೆಗೆ ನಿರಂತರವಾಗಿ ನಡೆಯಲಿದೆ.
ನಡ್ಡಾ ಚಾಲನೆ:
ವಿಜಯಪುರ ಹಾಗೂ ನಾಗಠಾಣಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೊಬೈಲ್ ಮೂಲಕ ಮಿಸ್ಡ್ ಕಾಲ್ ನೀಡಿ, ಅಭಿಯಾನದ ಅಂಗವಾಗಿ ನಡೆಯಲಿರುವ ಸದಸ್ಯತ್ವ ಅಭಿಯಾನಕ್ಕೆ ನಡ್ಡಾ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ, ಮನೆ ಮನೆಗೆ ತೆರಳಿ ಮನೆಗಳ ಕಾಂಪೌಂಡ್ ಗೋಡೆಗಳಿಗೆ ‘ಕಮಲ’ ಚಿಹ್ನೆಯ ಭಿತ್ತಿಚಿತ್ರ ಅಂಟಿಸಿ, ಪಕ್ಷದ ಕರ ಪತ್ರಗಳನ್ನು ಹಂಚಿದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಕೂಡ ಈ ವೇಳೆ ಉಪಸ್ಥಿತರಿದ್ದು, ಪಕ್ಷದ ಪರ ಪ್ರಚಾರದಲ್ಲಿ ಪಾಲ್ಗೊಂಡರು.
ಬಿಜೆಪಿಯಿಂದ ಯುವಕರ ದಾರಿ ತಪ್ಪಿಸುವ ಕೆಲಸ: ಎಚ್.ಡಿ. ಕುಮಾರಸ್ವಾಮಿ
ತುಮಕೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್, ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನವರಿ ತಿಂಗಳಲ್ಲಿಯೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಜ.12ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ, ಜ.19ರಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಅವರು ಚಾಲನೆ ನೀಡಿದ್ದರು. ಇದಕ್ಕೂ ಮೊದಲು, 2022ರ ನವೆಂಬರ್ ತಿಂಗಳಲ್ಲಿ ಬಿಜೆಪಿಯಿಂದ ‘ಜನ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಈಗ ‘ವಿಜಯ ಸಂಕಲ್ಪ’ ಯಾತ್ರೆ ಮೂಲಕ ಮತ್ತೊಂದು ಬೃಹತ್ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ.
ಬಿಜೆಪಿಯಿಂದ ಸ್ಪರ್ಧಿಸಲು ರೆಡಿ, ಟಿಕೆಟ್ ನೀಡೋದು ಹೈಕಮಾಂಡ್ ನಿರ್ಧಾರ: ಡಾ.ಗೋಪಾಲ ಕಾರಜೋಳ
21-29ರವರೆಗೆ ಅಭಿಯಾನ:
ಶನಿವಾರದಿಂದ ಆರಂಭವಾಗಿರುವ ಈ ಅಭಿಯಾನ, ಜ.29ರವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಬೂತ್, ಮಂಡಲಗಳಲ್ಲಿ ಬಿಜೆಪಿ ಪರ ಪ್ರಚಾರ ರಾರಯಲಿ ನಡೆಯಲಿದೆ. ಅಭಿಯಾನದ ಅಂಗವಾಗಿ ಸಚಿವರು, ಶಾಸಕರು, ಬಿಜೆಪಿ ಕಾರ್ಯಕರ್ತರು 2 ಕೋಟಿಗೂ ಹೆಚ್ಚು ಮತದಾರರನ್ನು ಸಂಪರ್ಕ ಮಾಡಿ, ಅವರ ಮನೆಗಳಿಗೆ ತೆರಳಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತಾದ ಕರಪತ್ರಗಳನ್ನು ಹಂಚಿಕೆ ಮಾಡಲಿದ್ದಾರೆ.
ಕಿಸಾನ್ ಸಮ್ಮಾನ್, ಉಜ್ವಲ, ಮುದ್ರಾ ಸೇರಿದಂತೆ ಸರ್ಕಾರ ಜಾರಿಗೊಳಿಸಿದ ಹತ್ತಾರು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ. 1 ಕೋಟಿಗೂ ಹೆಚ್ಚು ಸರ್ಕಾರದ ವಿವಿಧ ಫಲಾನುಭವಿಗಳನ್ನು ಮಾತನಾಡಿಸಿ, ಬಿಜೆಪಿ ಸರ್ಕಾರದ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದ್ದರ ಬಗ್ಗೆ ತಿಳಿ ಹೇಳಲಿದ್ದಾರೆ. ವಾಹನಗಳ ಮೇಲೆ ಸ್ಟಿಕರ್ ಅಂಟಿಸುವ ಮೂಲಕ, ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬಿಜೆಪಿ ಕಚೇರಿಗಳಲ್ಲಿ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.