ಗಾಳಿಗೂ ಬಿಜೆಪಿ ಜಿಸ್‌ಟಿ ಹಾಕಬಹುದು: ಮಲ್ಲಿಕಾರ್ಜುನ ಖರ್ಗೆ

By Kannadaprabha NewsFirst Published Apr 29, 2023, 5:56 AM IST
Highlights

ಈಗಾಗಲೇ ಮಕ್ಕಳು ಬಳಸುವ ವಸ್ತುಗಳು, ಹಾಲು-ಮೊಸರಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮುಂದೆ ಗಾಳಿಗೂ ಜಿಎಸ್‌ಟಿ ವಿಧಿಸಬಹುದು. ಹೀಗಾಗಿ ಅಭಿವೃದ್ದಿ ಪರ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು(ಏ.29):  ಬಸವನಗುಡಿ ಜನರು ಹೆಚ್ಚು ಆರೋಗ್ಯ ಕಾಳಜಿ ಉಳ್ಳವರಾಗಿದ್ದು ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರ ಮಾಡುತ್ತಾರೆ. ಬಿಜೆಪಿಯವರು ಮುಂದೊಂದು ದಿನ ವಾಕಿಂಗ್‌ ವೇಳೆ ಉಸಿರಾಡುವ ಆಮ್ಲಜನಕಕ್ಕೂ ಜಿಎಸ್‌ಟಿ ವಿಧಿಸುವ ಕಾಲ ದೂರವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಬಸನಗುಡಿಯಲ್ಲಿ ರೋಡ್‌ ಶೋ ಬಳಿಕ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮಕ್ಕಳು ಬಳಸುವ ವಸ್ತುಗಳು, ಹಾಲು-ಮೊಸರಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮುಂದೆ ಗಾಳಿಗೂ ಜಿಎಸ್‌ಟಿ ವಿಧಿಸಬಹುದು. ಹೀಗಾಗಿ ಅಭಿವೃದ್ದಿ ಪರ ಇರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.

ಕಾಂಗ್ರೆ​ಸ್‌​ನಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಹೀರೋ ಅಲ್ಲ, ವಿಲ​ನ್‌: ಕೆ.ಎಸ್‌.ಈಶ್ವರಪ್ಪ

ಬಿಜೆಪಿಯು ನೀಡಿರುವ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಬದಲಿಗೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ರಾಜ್ಯ ಮಾನ ಹರಾಜು ಹಾಕಿದೆ. 40 ಪರ್ಸೆಂಟ್‌ ಭ್ರಷ್ಟಾಚಾರದ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ನೀವೆಲ್ಲರೂ ಈ ಭ್ರಷ್ಟಸರ್ಕಾರವನ್ನು ಕಿತ್ತೊಗೆದು ಭ್ರಷ್ಟಾಚಾರ ರಹಿತ, ಪಾರದರ್ಶಕ ಹಾಗೂ ಅಭಿವೃದ್ಧಿ ಪರ ಆಡಳಿತ ನೀಡುವ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸೋನಿಯಾಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆದಿದ್ದಾರೆ. ಅಂತಹವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ಅಂತಹವರು ಹೇಳಿಕೆ ನೀಡಿದ್ದರೆ ಪ್ರತಿಕ್ರಿಯೆ ನೀಡುತ್ತಿದ್ದೆ. ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯೆ ವ್ಯರ್ಥ ಎಂದರು.

ಬಿಜೆಪಿ ಭದ್ರಕೋಟೆ ಛಿದ್ರ: ಯು.ಬಿ. ವೆಂಕಟೇಶ್‌ ವಿಶ್ವಾಸ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವನಗುಡಿ ಕಾಂಗ್ರೆಸ್‌ ಅಭ್ಯರ್ಥಿ ಯು.ಬಿ. ವೆಂಕಟೇಶ್‌, ಬಸವನಗುಡಿಯಲ್ಲಿ ಪಕ್ಷಕ್ಕೆ ವಾತಾವರಣ ಚೆನ್ನಾಗಿದೆ. ಬಿಜೆಪಿಯವರು ಕೇವಲ ಭರವಸೆ ನೀಡಿದರೆ ನಾವು ಅಭಿವೃದ್ಧಿ ಮಾಡಿ ತೋರಿಸಿದ್ದೇವೆ. ಮೇ 13 ರಂದು ಬಿಜೆಪಿಯ ಭದ್ರಕೋಟೆ ಛಿದ್ರವಾಗುತ್ತದೆ. ಅಪ್ಪ ಶಾಸಕ, ಮಗ ಸಂಸದನಾಗಿರುವ ಡಬ್ಬಲ್‌ ಡೆಕ್ಕರ್‌ ಆಡಳಿತಕ್ಕೆ ಜನರೇ ವಿದಾಯ ಹೇಳಲಿದ್ದಾರೆ ಎಂದು ಹೇಳಿದರು.

Party Rounds: ಮೋದಿ ವಿಷಸರ್ಪ: ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರು ಕೆಂಡಾಮಂಡಲ

ಕಲ್ಲೆಸೆತ, ಹೆದರಿಕೆ ರಾಜಕಾರಣ ಒಳ್ಳೆಯದಲ್ಲ: ಖರ್ಗೆ

ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮೇಲಿನ ಕಲ್ಲು ಎಸೆತ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜನ ಖಗೆ, ‘ಒಬ್ಬ ಅಭ್ಯರ್ಥಿಗೆ ಕಲ್ಲು ಎಸೆಯುವುದು, ಹೆದರಿಸುವುದು, ಭಾಷಣಕ್ಕೆ ಅಡ್ಡಿ ಪಡಿಸುವುದನ್ನು ನಾನು ಖಂಡಿಸುತ್ತೇನೆ. ಮತದಾರರು ಚಾಣಾಕ್ಷರಾಗಿದ್ದು, ಈ ರೀತಿ ನಡೆದುಕೊಂಡರೆ ಅವರಿಗೆ ಮತದಾರರು ಒಲಿಯುವುದಿಲ್ಲ ಎಂದು ಹೇಳಿದರು.

ಪರಮೇಶ್ವರ್‌ ಅವರನ್ನು ಜನರು ಈ ಬಾರಿ ಬಹುಮತದಿಂದ ಗೆಲ್ಲಿಸಲಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗಲಭೆ ಆಗುತ್ತೆ ಎಂಬ ಅಮಿತ್‌ ಶಾ ಹೇಳಿಕೆ ವಿಚಾರ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಇಂತಹ ಹೇಳಿಕೆಗಳು ಸರಿಯಲ್ಲ ಎಂದರು.

click me!