ಸಂವಿಧಾನ ಬದಲಿಸಲು ಬಿಜೆಪಿ ಯತ್ನ: ರಾಹುಲ್ ಗಾಂಧಿ

By Kannadaprabha NewsFirst Published Apr 27, 2024, 7:59 AM IST
Highlights

ಮೋದಿಜಿ ಅವರು ಕಳೆದ 10 ವರ್ಷಗಳಲ್ಲಿ 25 ಜನರನ್ನು ಅರಬ್ ಪತಿಗಳನ್ನಾಗಿ ಮಾಡಿದ್ದಾರೆ. ಭಾರತದ ಸಂಪತ್ತು, ಎಲ್ಲ ಲಾಭವನ್ನು ಅದಾನಿದಂತಹ ಜನರಿಗೆ ನೀಡಿದ್ದಾರೆ. ಭಾರತ ಸೌರಶಕ್ತಿ, ಪವನಶಕ್ತಿ, ವಿಮಾನ ನಿಲ್ದಾಣ ಮೊದಲಾದವುಗಳೆಲ್ಲವೂ ಅದಾನಿಯಂತಹ ಉದ್ಯಮಪತಿಗಳ ಹಿಡಿತಕ್ಕೆ ನೀಡಿರುವುದು ದುರ್ದೈವ ಎಂದು ಕಿಡಿಕಾರಿದ ರಾಹುಲ್‌ ಗಾಂಧಿ 

ವಿಜಯಪುರ(ಏ.27):  ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ದೇಶದ ಸಂವಿಧಾನ ಬದಲಿಸಿ, ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಸಂವಿಧಾನ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹೇಳಿದರು.

ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ಪಕ್ಷಗಳು ಭಾರತೀಯ ಸಂವಿಧಾನ ಹಾಗೂ ಅಣ್ಣ ಬಸವಣ್ಣನ ಆಶಯ ಹಾಗೂ ವಿಚಾರಧಾರೆ ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಮೋದಿಜಿ ಅವರು ಕಳೆದ ೧೦ ವರ್ಷಗಳಲ್ಲಿ ೨೫ ಜನರನ್ನು ಅರಬ್ ಪತಿಗಳನ್ನಾಗಿ ಮಾಡಿದ್ದಾರೆ. ಭಾರತದ ಸಂಪತ್ತು, ಎಲ್ಲ ಲಾಭವನ್ನು ಅದಾನಿದಂತಹ ಜನರಿಗೆ ನೀಡಿದ್ದಾರೆ. ಭಾರತ ಸೌರಶಕ್ತಿ, ಪವನಶಕ್ತಿ, ವಿಮಾನ ನಿಲ್ದಾಣ ಮೊದಲಾದವುಗಳೆಲ್ಲವೂ ಅದಾನಿಯಂತಹ ಉದ್ಯಮಪತಿಗಳ ಹಿಡಿತಕ್ಕೆ ನೀಡಿರುವುದು ದುರ್ದೈವ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಬುದ್ಧಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ ಇಂಥವನಿಗೆ ದೇಶ ಕೊಡ್ತೀರಾ? ಯತ್ನಾಳ್ ವಾಗ್ದಾಳಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬಡವರಿಗೆ ಏನೂ ದೊರೆತಿಲ್ಲ. ನಾವು ಪಂಚ ಗ್ಯಾರಂಟಿಗಳನ್ನು ನೀಡಿದ ಫಲವಾಗಿ ಬಡವರಿಗೆ ದೊಡ್ಡ ವರವಾಗಿದೆ. ಅವರು ಕೇವಲ ೨೫ ಜನ ಅರಬ್‌ ಪತಿಗಳನ್ನು ಸೃಷ್ಟಿ ಮಾಡಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟವು ಲಕ್ಷ ಲಕ್ಷ ಜನರಿಗೆ ಕೋಟ್ಯಧಿಪತಿಗಳನ್ನಾಗಿ ಮಾಡುವ ಸಂಕಲ್ಪ ಮಾಡಿದೆ ಎಂದು ಹೇಳಿದರು.

ಗಾಬರಿಯಾಗಿರುವ ಮೋದಿ:

ಇಂದು ಮೋದಿಜಿ ಅವರು ಸಂಪೂರ್ಣ ಭಯ, ಗಾಬರಿಯಾಗಿದ್ದಾರೆ. ಕೆಲವೇ ದಿನದಲ್ಲಿ ವೇದಿಕೆಯಲ್ಲಿಯೇ ಕಣ್ಣೀರು ಸುರಿಸುತ್ತಾರೆ. ವೇದಿಕೆ ಮೇಲೆ ಪಾಕಿಸ್ತಾನ, ತಾಲಿಬಾನ್, ಚೈನಾ ಬಗ್ಗೆ ಮಾತು ಆಡಬಹುದು. ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಇಲ್ಲವೇ ಚಪ್ಪಾಳೆ ಹೊಡೆಯಿರಿ ಎಂದು ಹೇಳುವ ದಿನ ದೂರವಿಲ್ಲ. ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಕೆಲಸ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಇಂದು ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿಗೊಳಿಸಲಾಗಿದೆ. ಕರ್ನಾಟಕ ಸರ್ಕಾರ ಜಿಎಸ್‌ಟಿ ರೂಪದಲ್ಲಿ ₹೧೦೦ ಕೊಟ್ಟರೆ ನಿಮಗೆ ₹೧೩ ಮಾತ್ರ ಕೇಂದ್ರ ಸರ್ಕಾರ ವಾಪಸ್‌ ನೀಡುತ್ತಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ಈ ಅನ್ಯಾಯವನ್ನು ಇಂಡಿಯಾ ಒಕ್ಕೂಟದ ಅಧಿಕಾರಕ್ಕೆ ಬಂದರೆ ಸರಿಪಡಿಸಲು ನಾವು ಬದ್ಧ ಎಂದು ಪ್ರಕಟಿಸಿದರು. ಹಿಂದಿನ ಚುನಾವಣೆ ಮತ್ತು ಈಗ ಚುನಾವಣೆ ತುಂಬಾ ವ್ಯತ್ಯಾಸ ಇದೆ. ಭಾರತ ಇತಿಹಾಸದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಸಾಮಾನ್ಯವಾದ ಚುನಾವಣೆಯಲ್ಲ ಎಂದರು.

ಮಹಿಳೆಯರಿಗೆ ಅಭಯ ತುಂಬಿದ ಗೃಹಲಕ್ಷ್ಮೀ:

ಗೃಹಲಕ್ಷ್ಮೀ ಜಾರಿಯಾದರೆ ಕರ್ನಾಟಕ ಆರ್ಥಿಕ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಏನೂ ಆಗಲಿಲ್ಲ. ರಾಜ್ಯದ ೧ ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ದೊರೆಯುತ್ತಿದೆ. ಪುರುಷರು ೮ ತಾಸು ದುಡಿದರೆ, ಮಹಿಳೆಯರು ೧೬ ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿ ಮಹಿಳೆಯರಿಗೆ ಅಭಯ ತುಂಬುವ ರೂಪವಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಇಂದು ಯುವಕರು ಉದ್ಯೋಗಕ್ಕಾಗಿ ಅಲೆಯುವ ಸ್ಥಿತಿ ಇದೆ. ಆದರೂ ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ನಾವು ಖಾಸಗಿ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವೇ ಯುವಕರಿಗೆ ಅಪ್ರೆಂಟಿಸ್ ತರಬೇತಿ ನೀಡುವ ದೊಡ್ಡ ಮಹತ್ವಾಕಾಂಕ್ಷೆಯನ್ನು ಇಂಡಿಯಾ ಒಕ್ಕೂಟ ಹೊಂದಿದೆ ಎಂದು ವಿವರಿಸಿದರು.

ಮೋದಿ ನೋಡಿ ವೋಟ್‌ ಹಾಕಲು ಅವರೇನು ಮಾಡಿದ್ದಾರೆ?: ಸಚಿವ ಎಂ.ಬಿ.ಪಾಟೀಲ್‌

ರೈತರ ಸಾಲಮನ್ನಾ ಮಾಡುವೆವು:

ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಒಂದೇ ಒಂದು ರು. ರೈತರ ಸಾಲಮನ್ನಾ ಮಾಡಿಲ್ಲ. ಎಂಎಸ್‌ಪಿ ಆಧರಿಸಿದ ದರ ನೀಡಿಲ್ಲ. ಆದರೆ ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬಂದ ತಕ್ಷಣವೇ ರೈತರ ಸಾಲಮನ್ನಾ ಮಾಡಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಆಧರಿಸಿದ ದರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಅಧಿಕಾರಕ್ಕೆ ಬಂದರೆ ಅಗ್ನಿವೀರ ರದ್ದು:

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ದ್ವಿಗುಣ ಹಾಗೂ ನರೇಗಾ ಗೌರವಧನವನ್ನು ₹೪೦೦ಗಳಿಗೆ ಏರಿಕೆ ಮಾಡುವ ಗುರಿ ಇದೆ. ಹಾಗೆಯೇ ಅಗ್ನಿವೀರ ಯೋಜನೆ ಭಾರತೀಯ ಸೇನೆಗೆ ಮಾಡುವ ಅಪಮಾನ. ಹೀಗಾಗಿ ಈ ಯೋಜನೆಯನ್ನು ನಾವು ರದ್ದುಗೊಳಿಸುತ್ತೇವೆ. ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ವಿಂಗಡನೆ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದರು.

click me!