
ಉಡುಪಿ (ಸೆ. 10): ದೇಶ ಮುರಿದವರು ಭಾರತ ಜೋಡೋ ಹೇಗೆ ಮಾಡುತ್ತಾರೆ. ದೇಶ ಮುರಿದವರಿಗೆ ಭಾರತ್ ಜೋಡೋ ಮಾಡುವ ನೈತಿಕತೆ ಇಲ್ಲ, ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ ಮೊದಲು ಕಾಂಗ್ರೆಸ್ ಜೋಡೋ ಮಾಡಲಿ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ಜೋಡೋ ಕಾರ್ಯಕ್ರಮಕದ ಬಗ್ಗೆ ವ್ಯಂಗ್ಯ ವಾಡಿದರು. ಅವರು ಶನಿವಾರ ಉಡುಪಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ದಕ್ಷಿಣದಲ್ಲಿ ಕಾಂಗ್ರೆಸ್ ಜೋಡೋ ನಡೆಯುತ್ತಿದ್ದರೆ, ಉತ್ತರದಲ್ಲಿ ಹಿರಿಯ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ದಕ್ಷಿಣದವರು ಯಾತ್ರೆ ಮುಗಿಸಿ ಉತ್ತರ ತಲುಪುವಾಗ ಅಲ್ಲಿ ಕಾಂಗ್ರೆಸ್ ಇರಲ್ಲ, ಒಬ್ಬರೇ ಏಕಾಂಗಿಯಾಗಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬರಬಹುದು, ಮಧ್ಯಪ್ರದೇಶ ದಾಟುತ್ತಿದ್ದಂತೆ ವಿಚಿತ್ರ ಪರಿಸ್ಥಿತಿ ಎದುರಾಗಬಹುದು, ಪಾದಯಾತ್ರೆ ಮೊಟಕುಗೊಳಿಸಿ ಕಾಂಗ್ರೆಸ್ ಉಳಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ನಾನು ಡಿಕೆಶಿಗೆ ಸವಾಲು ಹಾಕಿಲ್ಲ ಅವರೇ ಸವಾಲು ಹಾಕಿರುವುದು. ಈ ಚರ್ಚೆ ನಾನು ಪ್ರಾರಂಭಿಸಿದ್ದಲ್ಲ, ಡಿಕೆಶಿ ಹಾಕಿದ ಸವಾಲು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದೇನು, ಡಿಕೆಶಿ ವಿರುದ್ಧ ಯಾವ ರೀತಿ ತನಿಖೆ ಎಂದು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ. ಸರ್ಕಾರಿ ಹಂತದಲ್ಲಿ ತನಿಖೆ ಆಗುವಾಗ ಎಲ್ಲರಿಗೂ ಗೊತ್ತಾಗಲಿದೆ ಎಂದರು
ನಾರಾಯಣ ಗುರು ಜಯಂತಿ ದ.ಕ ಜಿಲ್ಲೆಯಲ್ಲಿ ವಿವಾದ ವಿಚಾರ
ಮಹಾಪುರುಷರ ಜಯಂತಿ ಆಚರಿಸಲು ಆರು ತಿಂಗಳ ಹಿಂದೆಯೇ ಸರ್ಕಾರ ನಿರ್ಧರಿಸಿತ್ತು, ಕೇವಲ ಬೆಂಗಳೂರು ಕೇಂದ್ರೀಕೃತವಾಗಿ ಯಾವುದೇ ಆಚರಣೆ ನಡೆಯಬಾರದು ಎಂಬ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯನ್ನು ಕೇಂದ್ರೀಕರಿಸುವುದು ನಮ್ಮ ಉದ್ದೇಶವಾಗಿದೆ. ಮಹಾಪುರುಷರು, ದಾರ್ಶನಿಕರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು, ಎಲ್ಲಾ ಸಮುದಾಯದವರು ಒಂದೊಂದು ಜಯಂತಿ ಆಚರಿಸಬೇಕು.ಈವರೆಗೆ ನಮ್ಮಲ್ಲಿ ಮಹಾಪುರುಷರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಲಾಗಿತ್ತು, ಮಹಾಪುರುಷರ ಆದರ್ಶ ಒಂದು ವ್ಯವಸ್ಥೆಗೆ ಸೀಮಿತವಾಗಿತ್ತು. ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡಬೇಕು ಅನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದರು
ಬೆಂಗಳೂರು ಮಹಾನೆರೆ ಸರಕಾರ ವೈಫಲ್ಯ ವಿಚಾರ
ಅಕಾಲಿಕವಾಗಿ ಸುರಿದ ಮಳೆ ಯಿಂದ ನೆರೆ ಉಂಟಾಗಿದ್ದು, ನೂರಿನ್ನೂರು ವರ್ಷಗಳ ಬಳಿಕ ಈ ಪ್ರಮಾಣದ ಮಳೆಯಾಗಿದೆ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಏಕಕಾಲದಲ್ಲಿ ಮಳೆ ಸುರಿದರೆ ಪ್ರವಾಹ ಬಂದೇ ಬರುತ್ತದೆ, ನೆರೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಅನ್ನುವುದು ಜನ ಮಾನಸದ ಅಭಿಪ್ರಾಯ. ನಾವು ಜನರ ಭಾವನೆಗಳನ್ನು ಗೌರವಿಸುತ್ತೇವೆ, ರಾಜ್ಯ ಸರ್ಕಾರ ಕೈ ಕಟ್ಟಿಕೊಂಡು ಕುಳಿತಿಲ್ಲ. 1500 ವಿದ್ಯುತ್ ಕಂಬಗಳನ್ನು ಇಂಧನ ಇಲಾಖೆ 48 ಗಂಟೆಗಳಲ್ಲಿ ಸರಿಪಡಿಸಿದೆ, ಎಲ್ಲಾ ಇಲಾಖೆಗಳು ತ್ವರಿತವಾಗಿ ಕೆಲಸ ಮಾಡಿದೆ.
ಬೆಂಗಳೂರಿನಲ್ಲಿ ನೆರೆ ಉಂಟಾದ್ದರಿಂದ ವಿಚಾರಕ್ಕೆ ಮಹತ್ವ ದೊರಕಿದ್ದು, ಪ್ರಕೃತಿಯ ಮುಂದೆ ನಾವೆಲ್ಲರೂ ತಲೆಬಾಗಲೇಬೇಕು. ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಂಬುದು ಅರಿವಾಗಿದೆ, ಮುಖ್ಯಮಂತ್ರಿಗಳು ಮತ್ತು ಅಲ್ಲಿನ ಎಲ್ಲ ಜನಪ್ರತಿನಿಧಿಗಳು ತಕ್ಷಣದ ಕ್ರಮ ಕೈಗೊಂಡಿದ್ದಾರೆ ಎಂದವರು ಹೇಳಿದರು
Rahul Gandhi T Shirt: 41 ಸಾವಿರ ರೂಪಾಯಿ ಟಿ-ಶರ್ಟ್ ಧರಿಸಿ ರಾಹುಲ್ ಯಾತ್ರೆ, ಬಿಜೆಪಿಯ ಟೀಕೆ!
ಕರಾವಳಿ ಭಾಗದಲ್ಲಿ ಕೇಂದ್ರ ಅಧ್ಯಯನ ತಂಡ ಭೇಟಿ ವಿಚಾರ
ಕರಾವಳಿ ಭಾಗದಲ್ಲಿ ನಾಲ್ಕು ತಂಡಗಳು ನೆರೆ ಹಾನಿ ಸಮೀಕ್ಷೆ ಮಾಡಿದ್ದು, ಇಷ್ಟು ತ್ವರಿತವಾಗಿ ನೆರೆ ಅಧ್ಯಯನವಾಗುತ್ತಿರುವುದೇ ಮೊದಲ ಬಾರಿಗೆ. ರಾಜ್ಯ ಸರಕಾರದ ವಿನಂತಿಯ ಮೇರೆಗೆ ಕೇಂದ್ರದ ತಂಡ ತಕ್ಷಣ ಬಂದಿದೆ,ಮೂಲಭೂತ ಸೌಕರ್ಯ ಮತ್ತು ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ. ತಂಡ ಸಮೀಕ್ಷೆ ಬಳಿಕ ವರದಿ ಸಲ್ಲಿಸಲಿದ್ದು ಹೆಚ್ಚಿನ ಅನುದಾನ ದೊರಕಲಿದೆ ಎಂದರು.
Bharat Jodo Yatra: ರಾಹುಲ್ ಜತೆ 60 ಕಂಟೇನರ್ಗಳ ಯಾತ್ರೆ, ತಂಗಲು ಮಂಚ, ಸ್ನಾನಗೃಹ, ಎಸಿ ವ್ಯವಸ್ಥೆ..!
ಜನಸ್ಪಂದನ ಕಾರ್ಯಕ್ರಮ ವಿಚಾರ
ದೊಡ್ಡಬಳ್ಳಾಪುರದಲ್ಲಿ ಮೂರು ಜಿಲ್ಲೆಗೆ ಸೀಮಿತವಾಗಿಟ್ಟುಕೊಂಡು ಜನ ಸ್ಪಂದನ ನಡೆಸುತ್ತಿದ್ದೇವೆ. 3 ಲಕ್ಷ ಜನರನ್ನು ಸೀಮಿತಗೊಳಿಸಿ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಜನಸ್ಪಂದನ ಕಾರ್ಯಕ್ರಮ ವಿಸ್ತರಿಸುತ್ತೇವೆ ಎಂದು ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.