ಬಿಜೆಪಿ ಬಿಡಲು ಈಶ್ವರಪ್ಪ ಹೊಣೆ ಆಯನೂರು ಮಂಜುನಾಥ್ ಗಂಭೀರ ಆರೋಪ, ಜೆಡಿಎಸ್‌ ಸೇರ್ಪಡೆಗೆ ವೇದಿಕೆ ಸಿದ್ಧ

By Gowthami KFirst Published Apr 19, 2023, 1:11 PM IST
Highlights

ಸಂಸದ ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್‌ ಬೈ ಹೇಳಿ ಜೆಡಿಎಸ್ ಸೇರುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು (ಏ.19): ಚುನಾವಣಾ ಕಾವು ರಂಗೇರುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಸಂಸದ ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್‌ ಬೈ ಹೇಳಿ ಜೆಡಿಎಸ್ ಸೇರುತ್ತಿದ್ದಾರೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ  ಅಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಗೆ ಯಾಕೆ ರಾಜೀನಾಮೆ ಕೊಟ್ಟಿದ್ದೇನೆ ಎಂಬುದಕ್ಕೆ ವಿವರಣೆ ನೀಡಿದ ಆಯನೂರು ಮಂಜುನಾಥ್ ಹರಿವ ನೀರಿಗೆ ಅಡ್ಡ ಬಂದಾಗ ಹೇಗೆ ಬೇರೆ ಮಾರ್ಗ ಹುಡುಕುತ್ತದೆ ಅದೇ ರೀತಿ ರಾಜಕಾರಣದ ಈ ಹರಿವಿನಲ್ಲೂ ಬೇರೆ ಮಾರ್ಗ ಹುಡುಕುತ್ತಿದ್ದೇನೆ. ನಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೆ. ನಾನು ಕೂಡ ಯಾವ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರೆ ತಾಂತ್ರಿಕವಾಗಿ ನಾನು ಇಂದೇ ರಾಜೀನಾಮೆ ಕೊಡಬೇಕು. ರಾಜೀನಾಮೆ ಸಲ್ಲಿಕೆ ಆಗದೆ ನಾನು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರೂ  ಪಕ್ಷಾಂತರ ನಿಷೇಧ ಕಾಯ್ದೆ ಅಡಿ ನನ್ನ ಸದಸ್ಯತ್ವ ರದ್ದಾಗುತ್ತದೆ ಎಂದಿದ್ದಾರೆ.

ಬಿಜೆಪಿ ಪಕ್ಷದ ಟಿಕೆಟ್ ಘೋಷಣೆ ಆಗದ ಬಗ್ಗೆ ಮಾತನಾಡಿದ ಅವರು, ಹೆರಿಗೆ ವಾರ್ಡ್ ನಿಂದ ಈಗ ಮಾಹಿತಿ ಬರಬಹುದು ಎಂದು ಕಾದಂತೆ ಇನ್ನು ಡೆಲಿವರಿ ಆಗಿಯೇ ಇಲ್ಲ ಎಂದು ಲೇವಡಿ ಮಾಡಿದರು. ಜಗದೀಶ್ ಶೆಟ್ಟರ್ ನಿಲುವು ಬೇರೆ ಕಾರಣಕ್ಕಾಗಿ ನನ್ನ ನಿಲುವು ಬೇರೆ ಕಾರಣಕ್ಕಾಗಿ. ಈಶ್ವರಪ್ಪ ಅಥವಾ ಅವರ ಕುಟುಂಬದಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದರು ಎಂಬ ಹಿನ್ನೆಲೆಯಲ್ಲಿ ಅವನು ಯಾವ ಲೆಕ್ಕ ಎಂದು ಹೇಳಿದ್ದಕ್ಕೆ ಉತ್ತರ ಕೊಟ್ಟಿದ್ದೇನೆ ಎಂದರು

Latest Videos

ನಾನು ಅತ್ಯಂತ ಸಂತೋಷದಿಂದ ನೆಮ್ಮದಿಯಿಂದ ನನ್ನ ಗುರಿಯ ಕಡೆಗೆ ಹೋಗುತ್ತಿದ್ದೇನೆ. ನಾನು ಬಂದ ಕೂಡಲೇ  ರಾಮರಾಜ್ಯ ಆಗುತ್ತೆ ಎಂದು ಅಲ್ಲ.  ಶಿವಮೊಗ್ಗ ನಗರದಲ್ಲಿರುವ ಪ್ರಕ್ಷುಬ್ಧತೆಯನ್ನು ನಿಯಂತ್ರಣ ಮಾಡಿ ಅದು ಮತ್ತಷ್ಟು ಉಲ್ಬಣವಾಗದಂತೆ ನೋಡಿಕೊಳ್ಳಬೇಕಿದೆ. ಮಾಜಿ ಸಿಎಂ ಬಿಎಸ್‍ವೈ ಅಪಮಾನ ಆದಾಗ ಅದನ್ನು ಡಿಫೆಂಡ್ ಮಾಡಿಕೊಳ್ಳಲಿಲ್ಲ. ಅದಕ್ಕೆ ಉತ್ತರ ಕೊಟ್ಟ ಏಕೈಕ ಶಾಸಕ ನಾನು. ಬಿಜೆಪಿ ಪಕ್ಷದವರು ನನ್ನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಅಶಿಸ್ತು ಎಂದು ಕೋಟ್ ಮಾಡಲಿ.  ಶಿವಮೊಗ್ಗದ ಪ್ರಕ್ಷುಬ್ದತೆ ಹಾಳಾದಾಗ ಯಾವ ರೀತಿ ಸರಿ ಮಾಡಲು ನೋಟಿಸ್ ಕೊಟ್ಟಿದ್ದೀರಾ?  ಕಾರ್ಪೊರೇಷನ್ ಬ್ರಷ್ಟಾಚಾರದ ಬಗ್ಗೆ ನೋಟಿಸ್ ಹೋಗಿದೆಯಾ? ಪರ್ಸೆಂಟೇಜ್ ಆರೋಪಗಳು ಕೇಳಿ ಬಂದಾಗ ನೋಟಿಸ್ ಹೋಗಿದೆಯಾ? ನಿಮ್ಮಿಂದ ಒಂದು ಕುಟುಂಬ ನಾಶವಾಗಿದೆ ಎಂಬ ಕಾರಣಕ್ಕೆ ಯಾರಾದರೂ ಅವರಿಗೆ ನೋಟಿಸ್ ನೀಡಿದ್ದಾರಾ? ಸನ್ಮಾನ್ಯ ಮೋದಿಯವರ ಹೆಸರು ಹೇಳುವ ಜನತೆ ನೀವು ಹೊಂದಿಲ್ಲ ಎಂದು ಅವರಿಗೆ ನೋಟಿಸ್ ನೀಡಿದ್ದಾರಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಬಿಜೆಪಿಯಿಂದ ನನಗೆ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ ಆದರೆ ಅಧಿಕೃತವಾಗಿ ಯಾವುದು ಬಂದಿಲ್ಲ. ಯಾವಾಗ ನೋಟಿಸ್ ಕಳಿಸಿದರೂ ಅದಕ್ಕೆ ಸಮಂಜಸ ಉತ್ತರ ಕೊಡುತ್ತೇನೆ. ಪಕ್ಷದ ಸಿದ್ಧಾಂತಗಳ ಸಂಘರ್ಷಕ್ಕಾಗಿ ನಾನು ರಾಜೀನಾಮೆ ನೀಡುತ್ತಿಲ್ಲ. ಯಾವುದೇ ಪಕ್ಷದ ಮ್ಯಾನಿಫೆಸ್ಟ್ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಕಾರ್ಮಿಕರ ಕೂಲಿಕಾರರ ಬಡಜನರ ನೈಜ ಪ್ರತಿನಿಧಿಯಾಗಲು ಹೊರಟಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾರವರು ನನ್ನನ್ನು ಕರೆದು ಮಾತನಾಡಿಸುವಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಈ ಕ್ಷಣದವರೆಗೂ ನನ್ನನ್ನು ಸಂಪರ್ಕ ಮಾಡಿಲ್ಲ. ಯಾರೋ ಮಾತನಾಡಿಸಿದ ತಕ್ಷಣ ನನ್ನ ನಿರ್ಧಾರವನ್ನು ಬದಲಿಸಿಕೊಳ್ಳುವ ಅಪ್ರಬುದ್ಧತೆ   ಇಲ್ಲ. ನನ್ನಿಂದಾಗಿ ಬಿಜೆಪಿ ಟಿಕೆಟ್ ಘೋಷಣೆ ತಡವಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಬಿಜೆಪಿಯವರು ಏನೇ ಹೇಳಲಿ ಲಗೇಜ್ ಪ್ಯಾಕ್ ಮಾಡಿ ಬಸ್ಟ್ಯಾಂಡಿಗೆ ಬಂದಿದ್ದೇನೆ ಬಸ್ಸಿನ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದರು.

ನನಗೆ ಸಂತೋಷ್ ಜಿ ಸೇರಿದಂತೆ ಯಾವುದೇ ನಾಯಕರ ಮೇಲೆ ನನ್ನ  ಆಪಾದನೆ ಇಲ್ಲ. ನನ್ನ ಆಪಾದನೆ ಏನಿದ್ದರೂ ಈಶ್ವರಪ್ಪನವರ ಮೇಲೆ ಮಾತ್ರ. ಜಗದೀಶ್ ಶೆಟ್ಟರ್ ಅವರ ಅನುಭವ ನನ್ನ ಅನುಭವ ಆಗಿರಬೇಕಿಲ್ಲ. ನಾನು ಹುಟ್ಟಿರುವುದೇ ದೀಪಾವಳಿಯ ಅಮಾವಾಸ್ಯೆಯ ದಿನ ಹಾಗಾಗಿ ನಾನು ಅಮಾವಾಸ್ಯೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಎಲ್ಲಾ ಅಮಾವಾಸ್ಯೆ ದಿನಗಳು ಒಳ್ಳೆಯ ದಿನಗಳು ಎಂದು ನಂಬಿದ್ದೇನೆ. ಹಾಗಾಗಿ ನಾಳೆ ಅಮವಾಸ್ಯೆ ದಿನ ಇದ್ದರೂ ನಾನು ನಾಮಪತ್ರ ಸಲ್ಲಿಸುತ್ತೇನೆ.  

ಸಂತೋಷ್ ಪಾಟೀಲ್ ವರ್ಷಾಂತಿಕ ದಿನದಂದು ಈಶ್ವರಪ್ಪ ತಮ್ಮ ಚುನಾವಣಾ ನಿವೃತ್ತಿಯನ್ನು  ಘೋಷಣೆ ಮಾಡಿದ ದಿನ. ಬಹಳ ದೇವರು ನಂಬುವ ಈಶ್ವರಪ್ಪ ಯಾವುದಾದರೂ ಪಾಪ ನನಗೆ ತಗಲಿತ್ತಾ ಎಂದು ನೋಡಿಕೊಳ್ಳಬೇಕು. ದಿಢೀರಾಗಿ ಅಂದೇ ಅವರು ತಮ್ಮ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ್ದಕ್ಕೆ ಕಾರಣ ಏನು ಹೇಳಬೇಕು. ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ನಾಮಪತ್ರ ಸಲ್ಲಿಸುತ್ತಿದ್ದು ವಿಜಯೇಂದ್ರ ಕರೆ ಮಾಡಿ ಅಹ್ವಾನ ನೀಡಿದ್ದರು.

ಆಯನೂರು ಮಂಜುನಾಥ್ ಇಂದೇ ರಾಜೀನಾಮೆ:
ವಿಧಾನಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಗೆ ಇಂದೇ  ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ. ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಖಚಿತ ಈ ಬಗ್ಗೆ ಮಧ್ಯಾಹ್ನ ಪ್ರಕಟಣೆ ಹೊರಬೀಳಲಿದೆ. ಎಂಎಲ್ಸಿಯಾಗಿ ಸಮರ್ಥವಾಗಿ ಕಾರ್ಮಿಕರು ಸೇರಿದಂತೆ ಬಡಜನರ ಪರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಮೂಲಕ ರಾಜಕೀಯ ಮಾಡಲು ನಿಧರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ.

ಸಿದ್ದರಾಮನಹುಂಡಿಗೆ ಭೇಟಿ ಕೊಟ್ಟ ಸಿದ್ದು, ಸೊಸೆ-ಮೊಮ್ಮಗನ ಜತೆ ಸೆಲ್ಫಿಗೆ ಮುಗಿಬಿದ್ದ ಜನ!

ಕುಬೇರ ಎದುರಿಗೆ ನನ್ನ ಸ್ಪರ್ಧೆ:
ಶಿವಮೊಗ್ಗದಲ್ಲಿ ಮೃದ ಮನಸ್ಸುಗಳನ್ನು ಜೋಡಿಸಬೇಕಿದೆ. ಶಿವಮೊಗ್ಗ ನಗರ ಅಶಾಂತಿಯ ನಗರ ಎಂಬ ಕಾರಣಕ್ಕೆ ಗ್ಲೋಬಲ್ ಇನ್ವೆಸ್ಟರ್ ಮೀಟ್  ನಡೆದರೂ ಆಯ್ಕೆ ಮಾಡಿಕೊಳ್ಳಲಿಲ್ಲ. ಗಲಭೆಯ ಸಂದರ್ಭದಲ್ಲಿ ಕೂಲಿಕಾರ್ಮಿಕರು ಬಡವರು ಉಪವಾಸ ಇರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಶಾಂತಿ ನೆಲೆಸಬೇಕಿದೆ. ನಾನು ಸಾಮಾನ್ಯರ ಎದುರಿಗೆ ಸ್ಪರ್ಧೆ ಮಾಡುತ್ತಿಲ್ಲ ಕುಬೇರ ಎದುರಿಗೆ ಲಕ್ಷ್ಮಿಪುತ್ರ ಎದುರುಗಡೆ ಕಾರ್ಮಿಕರ ಬಡವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲ ಜನತೆಯದು ಇಂದು ಭಾವಿಸಿದ್ದೇನೆ. ಜನತೆಯ ಮೇಲೆ ಭರವಸೆ ಇಟ್ಟು ಯಾವುದೇ ಹಣದ ಅಸಹ ಇಲ್ಲದೆ ಜಾತಿಯ ಹಿನ್ನೆಲೆಯಲ್ಲಿ ಚುನಾವಣೆ ಮಾಡದೆ ನೈಜ ಪ್ರತಿನಿಧಿಯಾಗುವ ಪ್ರಯತ್ನ ನಡೆಸುತ್ತಿದ್ದೇನೆ.

ಶೆಟ್ಟರ್‌ ಸೇರಿ ಏಳು ಮಂದಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ: 3 ಹೊಸಬರಿಗೆ ಮಣೆ

ಪಕ್ಷೇತರವಾಗಿ ಸ್ಪರ್ಧೆ ಮಾಡಲ್ಲ:
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಪದವೀಧರ ಕ್ಷೇತ್ರದ ಮತದಾರರು ಕೂಡ ನನ್ನನ್ನು ಬೆಂಬಲಿಸಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಹುಬ್ಬಳ್ಳಿ ಪ್ರಯಾಣ ಮಾಡಿ ಪರಿಷತ್ ಸ್ಪೀಕರ್ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನಾಳೆ  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಪಕ್ಷೇತವಾಗಿ ಸ್ಪರ್ಧೆ ಮಾಡಲ್ಲ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷದಿಂದ ಎಂಬುದನ್ನು ರಾಜ್ಯ ನಾಯಕನ ಜೊತೆ ಚರ್ಚೆ ನಡೆಸಿ ಅವರ ಒಪ್ಪಿಗೆ ಪಡೆದು ಘೋಷಣೆ ಮಾಡುತ್ತೇನೆ. ಇಂದು ಮಧ್ಯಾಹ್ನ ನನ್ನದು ಯಾವ ಪಕ್ಷದಿಂದ ಸ್ಪರ್ಧೆ ಎಂಬುದು ನಿರ್ಧಾರ ಆಗುತ್ತದೆ ಎಂದು ಹೇಳಿದರು.\

click me!