Karnataka Assembly Elections 2023: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆ ಶುರು

By Govindaraj SFirst Published Dec 10, 2022, 7:45 AM IST
Highlights

ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆಗಳನ್ನು ಕೇಂದ್ರ ಚುನಾವಣಾ ಆಯೋಗವು ಪ್ರಾರಂಭಿಸಿದ್ದು, ಚುನಾವಣೆಗೆ ನೇರವಾಗಿ ಸಂಬಂಧಪಡುವ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರು (ಡಿ.10): ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಪ್ರಕ್ರಿಯೆಗಳನ್ನು ಕೇಂದ್ರ ಚುನಾವಣಾ ಆಯೋಗವು ಪ್ರಾರಂಭಿಸಿದ್ದು, ಚುನಾವಣೆಗೆ ನೇರವಾಗಿ ಸಂಬಂಧಪಡುವ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಸಂಬಂಧ ಮಾರ್ಗಸೂಚಿಗಳನ್ನು ನೀಡಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದಿದೆ. ಪ್ರಸ್ತುತ ಕಾರ್ಯಾವಧಿಯಲ್ಲಿರುವ ರಾಜ್ಯ ವಿಧಾನಸಭೆಯ ಅವಧಿಯು 2023ರ ಮೇ 24ಕ್ಕೆ ಮುಕ್ತಾಯಗೊಳ್ಳಲಿದೆ. 

ಚುನಾವಣೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಬೇಕಿರುವ ಹಿನ್ನೆಲೆಯಲ್ಲಿ ನೇರವಾಗಿ ಚುನಾವಣೆಗೆ ಸಂಬಂಧಪಡುವ ಅಧಿಕಾರಿಗಳನ್ನು ತವರು ಜಿಲ್ಲೆಗೆ ನಿಯೋಜನೆ ಮಾಡುವಂತಿಲ್ಲ ಮತ್ತು ಒಂದೇ ಸ್ಥಳದಲ್ಲಿ ಮೂರು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಒಂದು ವೇಳೆ ಒಂದೇ ಸ್ಥಳದಲ್ಲಿ ಅಧಿಕಾರಿಗಳನ್ನು ಮುಂದುವರಿಸಬೇಕಾದರೆ ಮತ್ತು ಅಧಿಕಾರಿಗಳನ್ನು ತವರು ಜಿಲ್ಲೆಗೆ ನಿಯೋಜನೆ ಮಾಡಬೇಕಾದರೆ ಸಮರ್ಪಕವಾದ ಸ್ಪಷ್ಟನೆಯನ್ನು ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಆಯೋಗಕ್ಕೆ ಸ್ಪಷ್ಟವಾಗಿ ತಿಳಿಸಬೇಕು. ಚುನಾವಣೆಗೆ ಸಂಬಂಧಪಡದ ಸಿಬ್ಬಂದಿಯ ವರ್ಗಾವಣೆ, ನಿಯೋಜನೆಗೆ ಆಯೋಗದಿಂದ ಯಾವುದೇ ತಕರಾರು ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಎತ್ತಿನಹೊಳೆ ವೆಚ್ಚ ಡಬಲ್‌: ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ

ಚುನಾವಣಾಧಿಕಾರಿಗಳು, ಜಿಲ್ಲಾ, ತಾಲೂಕು ಚುನಾವಣಾಧಿಕಾರಿಗಳು ಸೇರಿದಂತೆ ನೊಡೇಲ್‌ ಅಧಿಕಾರಿಗಳಾಗಿ ನಿಯೋಜನೆಯಾಗುವವರನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಬೇಕು. ಪೊಲೀಸ್‌ ಇಲಾಖೆಯಲ್ಲಿಯೂ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಹಿರಿಯ ಅಧಿಕಾರಿಗಳ ವೃಂದದವರೆಗೂ ಸಹ ವರ್ಗಾವಣೆಗೆ ಸರ್ಕಾರವು ಕ್ರಮ ಕೈಗೊಳ್ಳಬೇಕು. ಕಂಪ್ಯೂಟರ್‌, ತರಬೇತಿ ಸೇರಿದಂತೆ ಇತರೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್‌ ಇಲಾಖೆಯ ಸಿಬ್ಬಂದಿಗೆ ಇದು ಅನ್ವಯವಾಗುವುದಿಲ್ಲ. ಚುನಾವಣಾ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯು ಕಾರ್ಯನಿರ್ವಹಿಸಲಿದ್ದಾರೆ. ಹಾಗಂತ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡುವ ಅಗತ್ಯವಿಲ್ಲ. 

ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್‌ ಠಾಣೆ: ಸಿಎಂ ಬೊಮ್ಮಾಯಿ

ಸರ್ಕಾರದ ಆಡಳಿತ ಯಂತ್ರಕ್ಕೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದಂತೆ ವರ್ಗಾವಣೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಪ್ರಧಾನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮತ್ತು ವೈದ್ಯರು, ಶಿಕ್ಷಕರು ಅವರಂತಹ ಸರ್ಕಾರಿ ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಪಾತ ಮಾಡುವಂತಹ ಅಧಿಕಾರಿ ವಿರುದ್ಧ ದೂರುಗಳಿದ್ದರೆ ಅಂತಹವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆ ಮಾಡುವ ಅಗತ್ಯ ಇಲ್ಲ. ಚುನಾವಣೆಗೆ ನಿಯೋಜನೆಯಾಗುವ ಸಿಬ್ಬಂದಿಯ ಮೇಲೆ ನಿಗಾವಹಿಸಬೇಕಾಗಿದೆ. ಮುಂದಿನ ಆರು ತಿಂಗಳಲ್ಲಿ ನಿವೃತ್ತಿಯಾಗುವ ಅಧಿಕಾರಿಗಳಿಗೆ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದೆ.

click me!