Assembly election: ವಿಧಾನ ಸಭಾ ಚುನಾವಣೆ : ಸಾಮಾಜಿಕ ಜಾಲತಾಣಗಳಲ್ಲಿ ಜೋರು ಪ್ರಚಾರ

By Kannadaprabha NewsFirst Published Jan 3, 2023, 12:24 PM IST
Highlights

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ತಯಾರಿ ನಡೆಯುತ್ತಿದೆ. ಚುನಾವಣೆ ದಿನ ಘೋಷಣೆ ಹಾಗೂ ಟಿಕೆಟ್‌ ಹಂಚಿಕೆಯಾಗದಿದ್ದರೂ ವಿವಿಧ ಪಕ್ಷಗಳ ಆಕಾಂಕ್ಷಿಗಳಿಂದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಜಾಲತಾಣಗಳಲ್ಲಿ ಪ್ರಮೋಷನ್‌ ಜೋರಾಗಿ ನಡೆಯುತ್ತಿದೆ.

ವಿಘ್ನೇಶ್ ಎಂ. ಭೂತನಕಾಡು

 ಮಡಿಕೇರಿ (ಜ.3) : ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ತಯಾರಿ ನಡೆಯುತ್ತಿದೆ. ಚುನಾವಣೆ ದಿನ ಘೋಷಣೆ ಹಾಗೂ ಟಿಕೆಟ್‌ ಹಂಚಿಕೆಯಾಗದಿದ್ದರೂ ವಿವಿಧ ಪಕ್ಷಗಳ ಆಕಾಂಕ್ಷಿಗಳಿಂದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಜಾಲತಾಣಗಳಲ್ಲಿ ಪ್ರಮೋಷನ್‌ ಜೋರಾಗಿ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರಿಂದ ಟಿಕೆಟ್‌ಗಾಗಿ ಕಸರತ್ತು ಆರಂಭವಾಗಿದೆ.

ಮಡಿಕೇರಿ(Madikeri) ಕ್ಷೇತ್ರದಲ್ಲಿ ಹಾಲಿ ಶಾಸಕ ಅಪ್ಪಚ್ಚು ರಂಜನ್‌(Appachhu ranjan) ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಕೆ.ಜಿ. ಬೋಪಯ್ಯ(KG Bopaiah)ಅವರು ಈ ಬಾರಿಯೂ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ತೋರಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಚುನಾವಣೆಗೆ ರೆಡಿ ಎಂದು ಸೂಚನೆ ನೀಡಿದ್ದಾರೆ.

ಉಪಚುನಾವಣೆ ಕದನ: ಮನೆ ಮನೆ ಪ್ರಚಾರ ಜೋರು

ಮಾಜಿ ಸಚಿವ ಎ. ಮಂಜು ಅವರ ಪುತ್ರ ಡಾ. ಮಂಥರ್‌ ಗೌಡ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ನಡೆದಿದ್ದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡುವಲ್ಲಿ ಸಫಲರಾಗಿದ್ದ ಮಂಥರ್‌ ಗೌಡ, ಈ ಬಾರಿ ಎಂಎಲ…ಎ ಸ್ಥಾನಕ್ಕೆ ಅಭ್ಯರ್ಥಿಯಾಗಬಯಸಿದ್ದು, ಪ್ರಚಾರ ಆರಂಭಿಸಿದಾರೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಷನ್‌ ಮಾಡುವ ಮೂಲಕ ಈಗಿನಿಂದಲೇ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಇತ್ತ ಕಡೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿರುವ ಎ.ಎಸ್‌. ಪೊನ್ನಣ್ಣ ಕೂಡ ಹಲವು ಸಮಾಜಮುಖಿ ಕೆಲಸ ಮಾಡುವ ಮೂಲನ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮಾಜಿ ಎಂಎಲ್ಸಿ ವೀಣಾ ಅಚಯ್ಯ ಕೂಡ ವಿರಾಜಪೇಟೆ ಕ್ಷೇತ್ರದಲ್ಲಿ ಸಂಚಾರ ಮಾಡುವ ಮೂಲಕ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಹಲವು ಚುನಾವಣೆಗಳನ್ನು ಎದುರಿಸಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಕೂಡ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು, ತಮ್ಮ ಈ ಹಿಂದಿನ ಬೆಂಬಲಿಗರನ್ನು ಸಂಪರ್ಕಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಚಂದ್ರಮೌಳಿ ಕೂಡ ಎಲ್ಲ ಕಡೆಗಳಲ್ಲಿ ಸಂಪರ್ಕದಲ್ಲಿದ್ದಾರೆ. ಹರಪಳ್ಳಿ ರವೀಂದ್ರ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ತಂಡವನ್ನು ಬಲಪಡಿಸುವಲ್ಲಿ ನಿರತರಾಗಿದ್ದಾರೆ.

ಜೆಡಿಎಸ್‌(JDS party) ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೊಂಡಿರುವ ನಾಪಂಡ ಮುತ್ತಪ್ಪ ಅವರ ಹಲವು ಕಟೌಟ್‌ಗಳು ರಾಜ್ಯ ಸೇರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾರಾಜಿಸುತ್ತಿದ್ದು, ಸದ್ದಿಲ್ಲದೇ ಪ್ರಚಾರದಲ್ಲಿ ತೊಡಗಿದ್ದಾರೆ. ಇದಲ್ಲದೆ ವಿರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಪಕ್ಷದಲ್ಲಿ ತೇಲಪಂಡ ಶಿವಕುಮಾರ್‌ ನಾಣಯ್ಯ, ಶಾಂತೆಯಂಡ ರವಿ ಕುಶಾಲಪ್ಪ ಮತ್ತಿತರು ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಭಾರತೀಶ್‌ ಆಕಾಂಕ್ಷಿಯಾಗಿದ್ದಾರೆ.

ಕೆಲವು ರಾಜಕೀಯ ಸನ್ನಿವೇಶದಲ್ಲಿ ಕಡೆಯ ಕ್ಷಣದಲ್ಲಿ ಅಂದರೆ ಚುನಾವಣೆಗೆ ಹತ್ತಿರ ಇರುವಾಗ ಅಭ್ಯರ್ಥಿಗಳಿಗೆ ಬಿ. ಫಾಮ್‌ರ್‍ ನೀಡಬಹುದು. ಇದರಿಂದ ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳು ತಾವೇ ಅಭ್ಯರ್ಥಿ ಎಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಚುನಾವಣೆಗೆ ಅನುಕೂಲವಾಗುವಂತೆ ತಮ್ಮನ್ನು ಬಿಂಬಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

Kodagu: ಅನೈತಿಕ ಚಟುವಟಿಕೆ ತಾಣವಾಯ್ತಾ ಗಾಂಧಿ ಭವನ, ಕಾಮಗಾರಿ ಮುಗಿದರೂ ಉದ್ಘಾಟನೆಯಿಲ್ಲ

ಚುನಾವಣೆಗೆ ಭರವಸೆಯೂ ರೆಡಿ!

ಈಗಾಗಲೇ ವಿವಿಧ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದು, ಭರವಸೆಯನ್ನು ಕೂಡ ನೀಡುತ್ತಿದ್ದಾರೆ. ಕೊಡಗಿನ ಅಭಿವೃದ್ಧಿ ಬಗ್ಗೆ ಕಾಳಜಿಯ ವ್ಯಾಖ್ಯಾನಗಳನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

click me!