
ನವದೆಹಲಿ (ಮಾ.23): ಅಬಕಾರಿ ಹಗರಣದಲ್ಲಿ ಗುರುವಾರ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದಿಂದ ದೆಹಲಿ ಸೇರಿ ಇತರ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಮ್ ಆದ್ಮಿ ಪಕ್ಷ (ಎಎಪಿ) ಕೈಗೊಂಡಿರುವ ಪ್ರಚಾರಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಸಜ್ಜಾಗಿರುವ ಎಎಪಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ದೆಹಲಿ, ಹರಿಯಾಣ ಮತ್ತು ಗುಜರಾತ್ನಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದೆ. ಆದರೆ ಪ್ರಚಾರಕ್ಕೆ ಪಕ್ಷದ ತಾರಾ ಪ್ರಚಾರಕರಿಲ್ಲದೆ ಮಂಕಾಗಿದೆ. ಅಬಕಾರಿ ಹಗರಣದಲ್ಲಿ ಈಗಾಗಲೇ ಎಎಪಿಯ ಹಿರಿಯ ನಾಯಕರಾದ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಜೈಲು ಸೇರಿದ್ದಾರೆ. ಈಗ ಕೇಜ್ರಿವಾಲ್ ಬಂಧನವಾಗಿದೆ. ಇದರಿಂದ ಎಎಪಿ ಅತಂತ್ರ ಸ್ಥಿತಿಗೆ ತಲುಪಿದೆ.
ಇದಕ್ಕೂ ಮುನ್ನ ಯಾವಾಗ ಈ ಪ್ರಶ್ನೆ ಉದ್ಭವಿಸಿದರೂ, ಪಕ್ಷದ ಚಿಂತನಾ ಲಹರಿ ಬರಿದಾಗಿಲ್ಲ. ಸಮಸ್ಯೆ ಎದುರಿಸಲು ಹೋರಾಡುತ್ತೇವೆ ಎಂದು ಎಎಪಿ ಹೇಳುತ್ತಿತ್ತು. ದೆಹಲಿ, ಗುಜರಾತ್ನಲ್ಲಿ ಪ್ರಚಾರಕ್ಕೆ ಎಎಪಿ ಕೇಜ್ರಿವಾಲ್ ಅವರನ್ನೇ ಆಶ್ರಯಿಸಿತ್ತು. ಕೇಜ್ರಿವಾಲ್ ಹೆಸರಲ್ಲಿ ಪ್ರಚಾರ ನಡೆಸಿತ್ತು. ಪ್ರಚಾರದ ವೇಳೆ ಕೇಜ್ರಿವಾಲ್ ಅವರ ಪ್ರಶ್ನೆಗಳು ಬಿಜೆಪಿಗೆ ಅಹಿತಕರವಾಗಿದ್ದವು. ಈಗ ಬಂಧನದಿಂದ ಕೇಜ್ರಿವಾಲ್ ಗೈರು ಹಾಜರಿಯಲ್ಲಿ ಎಎಪಿ ಪ್ರಚಾರ ಹೇಗೆ ಮುಂದುವರಿಯುತ್ತದೆ ಎಂಬ ಪ್ರಶ್ನೆ ಮೂಡಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು
ಕೇಂದ್ರೀಯ ಸಂಸ್ಥೆ ದುರ್ಬಳಕೆ: ಚು. ಆಯೋಗಕ್ಕೆ ಇಂಡಿಯಾ ದೂರು:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದ ಮರುದಿನವೇ, ಇಂಡಿಯಾ ಬ್ಲಾಕ್ ಪಕ್ಷಗಳ ನಾಯಕರ ನಿಯೋಗವು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ವಿಪಕ್ಷಗಳನ್ನು ಹತ್ತಿಕ್ಕುತ್ತಿದೆ ಎಂದು ದೂರು ಸಲ್ಲಿಸಿದೆ.
ಇಂಡಿಯಾ ಅಂಗ ಪಕ್ಷದ ನಾಯಕರು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರೀಯ ಸಂಸ್ಥೆಗಳು ನಡೆಸಿರುವ ಇತ್ತೀಚಿನ ನಿದರ್ಶನಗಳ ಪಟ್ಟಿಯನ್ನು ಈ ವೇಖೆ ಸಲ್ಲಿಸಲಾಗಿದೆ ಹಾಗೂ ಚುನಾವಣೆಗೆ ಹೋಗಲು ನಿಷ್ಪಕ್ಷ ವೇದಿಕೆ ಇಲ್ಲವಾಗಿದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಚುನಾವಣಾ ಆಯೋಗವು ಬದಲಿಸಿ ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಇಂಡಿಯಾ ಕೂಟದ ನಿಯೋಗ ಆಗ್ರಹಿಸಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಆಪ್ ಆಡಳಿತ ಭ್ರಷ್ಟಾಚಾರಕ್ಕೆ ಬಳಸುತ್ತಿದೆ, ಕೇಜ್ರಿವಾಲ್ ಬಗ್ಗೆ ನನಗೆ ತೀವ್ರ ನಿರಾಶೆಯಾಗಿದೆ: ಸಂತೋಷ್ ಹೆಗ್ಡೆ
ಮೋದಿ ಪರಿವಾರ್, ಮೋದಿ ಕಿ ಗ್ಯಾರಂಟಿ ವಿರುದ್ಧ ಚು.ಆಯೋಗಕ್ಕೆ ದೂರು
ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿರುವಂತೆ ಪಕ್ಷಗಳು ಒಂದರ ಮೇಲೊಂದು ದೂರುಗಳನ್ನು ದಾಖಲಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಹಣದಿಂದ ‘ಮೋದಿ ಕಿ ಗ್ಯಾರಂಟಿ’ ಹಾಗೂ ‘ಮೋದಿ ಪರಿವಾರ್’ ಜಾಹೀರಾತುಗಳನ್ನು ಹಾಕುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಚುನಾವಣಾ ಆಯೋಗಕ್ಕೆ ತೆರಳಿದ ಕಾಂಗ್ರೆಸ್ ನಿಯೋಗ, ಹಲವು ದೂರು ಪ್ರತಿಗಳನ್ನು ಸಲ್ಲಿಸಿತು. ಅದರಲ್ಲಿ ‘ಬಿಜೆಪಿಯು ದಶಕಗಳ ಹಳೆಯ ಹಾಗೂ ನ್ಯಾಯಾಂಗದಿಂದ ಬಗೆಹರಿದ 2ಜಿ ಹಗರಣವನ್ನು ಮತ್ತೆ ತೆಗೆಯುತ್ತಿದೆ. ಅಲ್ಲದೇ ದುರುದ್ದೇಶ ಪೂರಿತವಾಗಿ ಜಾಹೀರಾತುಗಳನ್ನು ಅಳವಡಿಸುತ್ತಿದೆ. ಇವುಗಳನ್ನು ಕೂಡಲೇ ತೆಗೆಸಿ, ಅದನ್ನು ಹಾಕಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.