
ತುಮಕೂರು (ಮಾ.23): ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ವಂಚಿತ ಹಿನ್ನೆಲೆಯಲ್ಲಿ ವರಿಷ್ಠರ ಜೊತೆ ಮುನಿಸಿಕೊಂಡಿದ್ದ ಮಾಧುಸ್ವಾಮಿ ಅವರನ್ನು ಖುದ್ದು ಮಾಜಿ ಸಿಎಂ ಯಡಿಯೂರಪ್ಪ ಅವರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಂ ಅವರ ತೋಟದ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ರೆಬೆಲ್ ಆಗಿದ್ದ ಮಾಧುಸ್ವಾಮಿ ಅವರ ನ್ನು ಯಡಿಯೂರಪ್ಪ ಸಮಾಧಾನಗೊಳಿಸಿದ್ದಾರೆ. ಟಿಕೆಟ್ ಸಿಗದ ಹಿನ್ನೆಲೆ ತೀವ್ರವಾಗಿ ಅಸಮಾಧಾನಗೊಂಡಿದ್ದ ಮಾಧುಸ್ವಾಮಿ ಅವರಿಗೆ ಖುದ್ದು ಯಡಿಯೂರಪ್ಪನವರೇ ಫೋನ್ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಖುದ್ದಾಗಿ ಯಡಿಯೂರಪ್ಪನವರೇ ಆಗಮಿಸಿ ಸಂಧಾನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಡಿಯೂರಪ್ಪನವರು ಸುಮಾರು 20 ನಿಮಿಷಗಳ ಕಾಲ ಮಾಧುಸ್ವಾಮಿ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದರು. ಈ ವೇಳೆ ಬೈರತಿ ಬಸವರಾಜು, ಗೋಪಾಲಯ್ಯ, ಮಸಾಲ ಜಯರಾಂ ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು ಭಾಗಿಯಾಗಿದ್ದ ರು. ಸಭೆ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು ಮಾಧುಸ್ವಾಮಿಯ ಮನವೊಲಿಸಿದ್ದೇನೆ. ಕೇವಲ ಪಕ್ಷದ ವಿಚಾರದ ಬಗ್ಗೆ ಮಾತ್ರ ಮಾತುಕತೆಯಾಗಿದ್ದು, ಚುನಾವಣೆಯಲ್ಲಿ ಸೋಮಣ್ಣ ಬೆಂಬಲಿಸುವ ಬಗ್ಗೆ ಮಾತುಕತೆಯಾಗಿಲ್ಲ. ಅವರಿಗೆ ಬೆಂಬಲ ನೀಡುವುದು, ಬಿಡುವುದು ಮಾಧುಸ್ವಾಮಿಗೆ ಬಿಟ್ಟ ವಿಚಾರ ಎಂದ ಅವರು ಅವರು ಪಕ್ಷ ಬಿಡದಂತೆ ಮನವೊಲಿಸಿದ್ದು, ಅವರು ಪಕ್ಷದಲ್ಲೇ ಉಳಿಯುತ್ತಾರೆ ಎಂದರು.
ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆ ವಾಪಸ್: ಏ.5ರಿಂದ ಹೈಕೋರ್ಟ್ ವಿಚಾರಣೆ
ಮುಂದೆ ಮಾಧುಸ್ವಾಮಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದ ಯಡಿಯೂರಪ್ಪ ಅವರು ಎಲ್ಲಾ ಸಮಸ್ಯೆ ಬಗೆಹರಿದಿದೆ. ಬೇಸರ ಮಾಡಿಕೊಂಡಿದ್ದ ಮಾಧುಸ್ವಾಮಿ ಅವರನ್ನು ಮನವೊಲಿಸಲು ಬಂದೆ. ಪಕ್ಷ ಬಿಡುವುದಿಲ್ಲ ಎಂದು ಅವರು ಕೂಡ ಹೇಳಿದ್ದಾರೆ. ಇದು ನನಗೆ ಖುಷಿ ಕೊಟ್ಟಿದೆ ಎಂದ ಅವರು ಟಿಕೆಟ್ ಕೊಟ್ಟಿದ್ದು ರಾಷ್ಟ್ರೀಯ ನಾಯಕರು ನಾನಲ್ಲ ಎಂದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ ಅವರು ಪಕ್ಷ ತೊರೆಯುವ ನಿರ್ಧಾರದಿಂದ ಮಾತ್ರ ಹಿಂದೆ ಸರಿದಿದ್ದೇನೆ. ಸೋಮಣ್ಣಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದರು.
ಯಡಿಯೂರಪ್ಪ ಅವರನ್ನು ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಹೋದವನು. ಅವರು ಹೇಳಿದಕ್ಕೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಯಡಿಯೂರಪ್ಪ ಅವರು ಪಕ್ಷ ಬಿಡುವುದು ಬೇಡ ಅಂದಿದ್ದಾರೆ. ಹೀಗಾಗಿ ನಾನು ಸುಮ್ಮನಾಗುತ್ತೇನೆ ಎಂದ ಅವರು ಪಕ್ಷ ಬಿಡುವ ಬಗ್ಗೆ ಯಡಿಯೂರಪ್ಪಗೂ ಹೇಳಿದ್ದೆ ಎಂದರು. ಈ ಚುನಾವಣೆ ಬಗ್ಗೆ ಒತ್ತಡ ಹಾಕಬೇಡಿ ಅಂತಾ ಯಡಿಯೂರಪ್ಪನವರಿಗೆ ಹೇಳಿದ್ದೇನೆ. ಅಲ್ಲದೇ ಸೋಮಣ್ಣನವರಿಗೆ ನಾಲ್ಕೈದು ದಿನ ಬಿಟ್ಟು ಬರುವಂತೆ ಹೇಳಿದ್ದೇನೆ. ಯಡಿಯೂರಪ್ಪ ನನಗೆ ದೂರವಾಣಿ ಕರೆ ಮಾಡಿರುವ ಬಗ್ಗೆ ಗೊತ್ತಿಲ್ಲ ಎಂದ ಅವರು ಯಡಿಯೂರಪ್ಪ ಕಾಲ್ ರಿಸಿವ್ ಮಾಡದ ಲೆವೆಲ್ ಗೆ ನಾನು ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರು. ಆಫರ್: ಸಿಎಂ ಸಿದ್ದರಾಮಯ್ಯ
ಲೋಕಸಭಾ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ. ಚರ್ಚೆಯಾಗಿರುವುದು ಪಕ್ಷದ ವಿಚಾರದ ಬಗ್ಗೆ ಎಂದ ಅವರು ನಾನು ಕಾಂಗ್ರೆಸ್ಗೆ ಹೋಗಬೇಕು ಅಂತಾ ಇದಿನಿ ಅಂತಾನೂ ಯಡಿಯೂರಪ್ಪನವರಿಗೆ ಹೇಳಿದ್ದೆ. ಈ ಪರಿಸ್ಥಿತಿಯಲ್ಲಿ ಬೇಡ ಅಂತಾ ಹೇಳಿದ್ದಾಗಿ ತಿಳಿಸಿದರು. ಸದ್ಯಕ್ಕೆ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಸೋಮಣ್ಣರಿಗೆ ಬೆಂಬಲ ಬಗ್ಗೆ ಚಿಂತಿಸಿಲ್ಲ. ಅವರಿಗೆ ನನ್ನ ಒಂದು ವೋಟ್ನಲ್ಲಿ ಏನಾಗುತ್ತೆ ಬಿಡಿ ಎಂದು ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.