
ಕೆ.ಆರ್.ಪೇಟೆ (ಜು.02): ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಪಕ್ಷದವರಿಂದ ಹಣ ಪಡೆದು ಕೆಲ ಸ್ಥಳೀಯ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆನ್ನುವ ಆಡಿಯೋ ವೈರಲ್ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಆಡಿಯೋ ಬಗೆಗಿನ ಸತ್ಯಾಂಶ ಬಯಲುಗೊಳಿಸಲು ತನಿಖೆ ಚುರುಕುಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಸುದ್ಧಿಗಾರರೊಂದಿಗೆ ಮಾತನಾಡಿ, ಆಡಿಯೋ ವೈರಲ್ ಸತ್ಯಾಂಶ ಬಯಲಿನ ಅನಂತರ ನಮ್ಮ ಮುಖಂಡರು ಹಣ ಪಡೆದು ಪಕ್ಷ ದ್ರೋಹ ಚಟುವಟಿಕೆ ಮಾಡಿದ್ದಾರೆ ಅಂತಹ ನಾಯಕರ ವಿರುದ್ಧ ಪಕ್ಷದಿಂದ ತೀವ್ರ ಕ್ರಮ ಜರುಗಿಸಲಾಗುವುದು ಎಂದರು.
ಚುನಾವಣೆಯಲ್ಲಿ ಕೆಲವರು ಜೆಡಿಎಸ್ ಪಕ್ಷದಿಂದ ಹಣ ಪಡೆದಿದ್ದಾರೆಂಬ ಆಡಿಯೋ ಬಯಲಾಗಿದೆ. ಇದರಿಂದ ಸ್ಥಳೀಯ ಕಾರ್ಯಕರ್ತರಾದ ನಮಗೆ ಮುಜುಗರವಾಗುತ್ತಿದೆ. ಪಕ್ಷ ದ್ರೋಹಿ ಪತ್ತೆ ಹಚ್ಚಿ ಅವರನ್ನು ಪಕ್ಷದಿಂದ ದೂರವಿಡಬೇಕು ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವಂತೆ ಕೆಲವು ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರನ್ನು ಆಗ್ರಹಿಸಿದರು. ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಿದ ಸಚಿವರು, ವೈರಲ್ ಆಗಿರುವ ಆಡಿಯೋ ಬಗ್ಗೆ ಮುಖಂಡರುಗಳೇ ಪೊಲೀಸರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ. ತನಿಖೆಯ ಅನಂತರ ಸತ್ಯಾಂಶ ಬಯಲಾಗುತ್ತದೆ. ಆಡಿಯೋ ದುರುದ್ದೇಶದಿಂದ ಕೂಡಿದ್ದರೆ ಸುಳ್ಳು ಆರೋಪ ಮಾಡಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Chamarajanagar: ಬೆಳೆ ಹಾನಿ: ಸಮಗ್ರ ವರದಿ ನೀಡಲು ಸಚಿವ ವೆಂಕಟೇಶ್ ಸೂಚನೆ
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾತ್ರ ನಮ್ಮ ಅಭ್ಯರ್ಥಿ ಸೋತಿದ್ದಾರೆ. ಇದಕ್ಕೆ ಕಾರಣಗಳೇನು ಎನ್ನುವುದರ ಪರಾಮರ್ಶೆ ಮಾಡಬೇಕಾಗಿದೆ. ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸಿ ಕಾರ್ಯಕರ್ತರ ಆತ್ಮಾವಲೋಕನ ಸಭೆ ಕರೆದು ಕಾರ್ಯಕರ್ತರ ಕಷ್ಟಸುಖ ಆಲಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು. ಪ್ರತ್ಯೇಕವಾಗಿ ಮಾತನಾಡಬೇಕು ಎನ್ನುವವರು ಬೆಂಗಳೂರಿಗೆ ಬನ್ನಿ. ಕಳೆದ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡದೆ ಯಾವುದೇ ಮುಖಂಡರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಖಂಡಿತ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಉತ್ಸಾಹ ಕಳೆದುಕೊಳ್ಳಬಾರದು ಎಂದು ಹೇಳಿದರು.
ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು. ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರಿಸಲಾಗುವುದು. ಆದರೆ, ಅನವಶ್ಯಕ ಕಾಮಗಾರಿಗಳನ್ನು ತಡೆಹಿಡಿಯಲಾಗುವುದು ಎಂದರು. ಚುನಾವಣಾ ಪೂರ್ವ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಎಷ್ಟೇ ಕಷ್ಟವಾದರೂ ಸರಿಯೇ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ಸರ್ಕಾರ ಬದಲಾದಂತೆ ಅಧಿಕಾರಿಗಳು ಮತ್ತು ನೌಕರರ ಮನೋಭಾವನೆಯಲ್ಲೂ ಬದಲಾವಣೆಯಾಗುತ್ತದೆ.
ನೀರಿನ ಸಮಸ್ಯೆ ನೀಗಿಸಲು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಮುನಿಯಪ್ಪ
ಜನಪರ ನಿಲುವು ಪ್ರದರ್ಶಿಸದ ನೌಕರರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವರಾಜು, ಮುಖಂಡರಾದ ವಿಜಯ ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಮುಖಂಡರಾದ ಎಂ.ಡಿ.ಕೃಷ್ಣಮೂರ್ತಿ, ಕೋಡಿಮಾರನಹಳ್ಳಿ ದೇವರಾಜು ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಅನಂತರ ಇದೇ ಪ್ರಪ್ರಥಮವಾಗಿ ಪಟ್ಟಣಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪ್ರವಾಸಿ ಮಂದಿರ ವೃತ್ತದಲ್ಲಿ ಸಂಭ್ರಮದಿಂದ ಸ್ವಾಗತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.