
ಬೆಂಗಳೂರು(ಜ.29): ಖಾತೆ ಹಂಚಿಕೆಯಾದರೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್ ಅವರ ನಡೆ ಕುತೂಹಲಕರವಾಗಿದ್ದು, ಶುಕ್ರವಾರ ತಮ್ಮ ಮುಂದಿನ ನಡೆ ಘೋಷಿಸುವ ನಿರೀಕ್ಷೆಯಿದೆ.
ಮೂರು ಬಾರಿ ಖಾತೆ ಬದಲಾಗಿ ಅಂತಿಮವಾಗಿ ಇದೀಗ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆಯನ್ನು ಆನಂದ್ ಸಿಂಗ್ ಅವರಿಗೆ ನೀಡಲಾಗಿದೆ. ಮೂರು ದಿನಗಳಾದರೂ ಅವರು ಖಾತೆಯ ಅಧಿಕಾರ ಸ್ವೀಕರಿಸಿಲ್ಲ. ಗುರುವಾರ ವಿಧಾನಮಂಡಲದ ಅಧಿವೇಶನಕ್ಕೆ ಆಗಮಿಸಿದ ಅವರು ಸದನದ ಕಲಾಪದಲ್ಲಿ ಪಾಲ್ಗೊಂಡರೂ ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ. ನಿರ್ಗಮಿಸುವ ವೇಳೆ ಸುದ್ದಿಗಾರರು ಪ್ರಶ್ನಿಸಿದಾಗಲೂ ನಾಳೆ (ಶುಕ್ರವಾರ) ಪ್ರತಿಕ್ರಿಯೆ ನೀಡುತ್ತೇನೆ ಎಂದಷ್ಟೇ ಹೇಳಿ ಮುಂದೆ ಸಾಗಿದರು.
ಶೀಘ್ರವೇ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಆನಂದ್ ಸಿಂಗ್
ಹೀಗಾಗಿ, ಖಾತೆ ಹಂಚಿಕೆಗೆ ಬೇಸರ ವ್ಯಕ್ತಪಡಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಏನಾದರೂ ಘೋಷಣೆ ಮಾಡಲಿದ್ದಾರೆಯೇ ಎಂಬ ವದಂತಿ ಹಬ್ಬಿದೆ. ಆದರೆ, ಆಡಳಿತಾರೂಢ ಬಿಜೆಪಿ ಮೂಲಗಳು ಇದನ್ನು ನಿರಾಕರಿಸುತ್ತಿವೆ. ಖಾತೆ ಹಂಚಿಕೆ ಸಂಬಂಧ ಆನಂದ್ ಸಿಂಗ್ ಅವರಿಗೆ ಬೇಸರವಾಗಿರಬಹುದು. ರಾಜೀನಾಮೆ ನೀಡುವ ಪ್ರಸಂಗ ಏನೂ ಇಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ವಿಜಯನಗರ ನೂತನ ಜಿಲ್ಲೆ ರಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರು ಒತ್ತಡ ತಂತ್ರ ಅನುಸರಿಸುತ್ತಿರಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.