
ಒಡಿಶಾ(ಮೇ.12): ಸ್ಪೀಕರ್ ಬಿಕ್ರನ್ ಕೇಶಾರಿ ಅರುಖಾ, ಸಚಿವರಾದ ಶ್ರೀಕಾಂತ್ ಸಾಹು ಹಾಗೂ ಸಮೀರ್ ರಂಜನ್ ದಾಶ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಒಡಿಶಾದಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸದ್ದಿಲ್ಲದೆ ಸಚಿವ ಸಂಪುಟ ಪುನಾರಚನೆಗೆ ಎಲ್ಲಾ ಸಿದ್ದತೆ ಮಾಡಿರುವುದು ಈ ದಿಢೀರ್ ರಾಜೀನಾಮೆಯಿಂದ ಸ್ಪಷ್ಟವಾಗಿದೆ. ಸಮೀರನ್ ರಂಜನ್ ದಾಶ್ ಶಿಕ್ಷಣ ಸಚಿವರಾಗಿದ್ದರೆ, ಶ್ರೀಕಾಂತ್ ಸಾಹು ಕಾರ್ಮಿಕ ಸಚಿವರಾಗಿದ್ದರು. 2000ನೇ ಇಸವಿಯಿಂದ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಅಧಿಕಾರದಲ್ಲಿದೆ. ಹಲವು ಬಾರಿ ಸಂಪುಟ ಪುನರ್ ರಚನೆ, ವಿಂಗಡೆ ಮಾಡಿ ಯಶಸ್ವಿಯಾಗಿರುವ ಪಟ್ನಾಯಕ್ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಈ ವಾರದಲ್ಲಿ ಸಿಎಂ ನವೀನ್ ಪಟ್ನಾಯಕ್ ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ ಜಪಾನ್ಗೆ ಭೇಟಿ ನೀಡಿದ್ದರು. ಈ ವೇಳೆ ಜಪಾನ್ನ ಕ್ಯೋಟೋದಿಂದಲೇ ರಾಜ್ಯ ಸಚಿವ ಸಂಪುಟದ ಸಭೆ ನಡೆಸಿದ್ದರು. ಈ ಮಹತ್ವದ ಸಭೆಯಲ್ಲಿ ಸಚಿವ ಸಂಪುಟಕ್ಕೆ ಮಹತ್ವದ ಸಂದೇಶ ರವಾನಿಸಿದ್ದರು. ಒಡಿಶಾ ರಾಜಧಾನಿ ಭುವನೇಶ್ವರದಿಂದ 6000 ಕಿ.ಮೀ ದೂರದ ಜಪಾನ್ನಿಂದ ವಚ್ರ್ಯುವಲ್ ಆಗಿ ಭಾಗವಹಿಸಿದ್ದ ಪಟ್ನಾಯಕ್ ತಮ್ಮ ಸಂಪುಟ ಸಹದ್ಯೋಗಿಗಳ ಜೊತೆ ಕುಳಿತು ಸಭೆ ನಡೆಸಿದ್ದರು. ವಿದೇಶವೊಂದರಲ್ಲಿ ಕುಳಿತು ಸಂಪುಟ ಸಭೆ ನಡೆಸಿದೆ ಮೊದಲ ಉದಾಹರಣೆ ಇದು ಎನ್ನಲಾಗಿದೆ. ಹೊಸ ತಂತ್ರಜ್ಞಾನ ಬಳಕೆಯಲ್ಲಿ ನಾವು ಮುಂಚೂಣಿ. ಇಂದು ಅದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪಟ್ನಾಯಕ್ ಹೇಳಿದ್ದರು.
ತೃತೀಯ ರಂಗ ಸೇರಲ್ಲ... ಮೋದಿ ಭೇಟಿ ಬಳಿಕ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿಕೆ!
2022ರ ಜೂನ್ ತಿಂಗಳಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಚಿವರ ಸಂಪುಟ ಪುನಾರಚನೆ ಮಾಡಿದ್ದರು. ಈ ವೇಳೆ 21 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಇವರಲ್ಲಿ 13 ಶಾಸಕರಿಗೆ ಸಂಪುಟ ದರ್ಜೆ ನೀಡಲಾಗಿತ್ತು. ಉಳಿದವರಿಗೆ ರಾಜ್ಯ ದರ್ಜೆ (ಸ್ವತಂತ್ರ ನಿರ್ವಹಣೆ) ನೀಡಲಾಗಿತ್ತು. ಇವರಲ್ಲಿ 12 ಹೊಸ ಮುಖಗಳು ಹಾಗೂ 5 ಮಹಿಳೆಯರು ಸೇರಿದ್ದರು. ಈ ವೇಳೆಯೂ ಸ್ಪೀಕರ್ ರಾಜೀನಾಮೆ ಸಲ್ಲಿಸಿದ್ದರು. ಅಂದು ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಎನ್.ಪಾತ್ರೋ ದಿಢೀರ್ ರಾಜೀನಾಮೆ ಸಲ್ಲಿಸಿದ್ದರು.
PM Modi Security Breach: ಪ್ರಧಾನ ಮಂತ್ರಿ ಘನತೆ ಕಾಪಾಡುವುದು ಪ್ರತಿ ಸರ್ಕಾರದ ಕರ್ತವ್ಯ: ಪಟ್ನಾಯಕ್
ಕಳೆದ ಸಂಪುಟ ಪುನಾರಚನೆ ಯಲ್ಲಿ ಪ್ರಮಿಳಾ ಮಲ್ಲಿಕ್, ಉಷಾ ದೇವಿ ಮತ್ತು ತುಕುನಿ ಸಾಹು ಅವರಿಗೆ ಸಂಪುಟದ ದರ್ಜೆ ನೀಡಲಾಗಿತ್ತು. ಹಾಗೆಯೇ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ನಾಯಕರಿಗೂ ಸಂಪುಟದಲ್ಲಿ ಸ್ಥಾನ ಸಿಗುವಂತೆ ಪುನಾರಚನೆ ಮಾಡಲಾಗಿತ್ತು. ಬಿಜೆಡಿಯ ಶಾಸಕರಾದ ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ ಮತ್ತು ಆರ್.ಪಿ.ಸ್ವೈನ್ ಅವರಿಗೆ ಮೊದಲಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.