ಸರ್ವಧರ್ಮ ಸಮಭಾವ ಹಾಗೂ ಸಹಿಷ್ಣತೆಯನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿಯೇ ಇಂದು ಭಾರತದಲ್ಲಿ ಏಕತೆ ಉಳಿದುಕೊಂಡಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.
ಮಂಗಳೂರು (ಡಿ.10): ಸರ್ವಧರ್ಮ ಸಮಭಾವ ಹಾಗೂ ಸಹಿಷ್ಣತೆಯನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿಯೇ ಇಂದು ಭಾರತದಲ್ಲಿ ಏಕತೆ ಉಳಿದುಕೊಂಡಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ಅವರ 68ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಅಂಬೇಡ್ಕರ್ ಬೆಂಬಲಿಸಿದ್ದು ಜನಸಂಘ: ಕಾಂಗ್ರೆಸ್ನವರು ಅಂಬೇಡ್ಕರ್ರನ್ನು ಎರಡು ಬಾರಿ ಸೋಲಿಸಿದ್ದರು. ಹೀಗಿರುವಾಗ ಯಾವ ಮುಖ ಇರಿಸಿಕೊಂಡು ಕಾಂಗ್ರೆಸ್ನವರು ಅಂಬೇಡ್ಕರ್ ಸ್ಮರಣೆ ಮಾಡುತ್ತಾರೋ ಗೊತ್ತಿಲ್ಲ. ಆಗ ಅಂಬೇಡ್ಕರ್ ಬೆನ್ನಿಗೆ ನಿಂತದ್ದು ಜನಸಂಘ. ಹಾಗಾಗಿ ದೇಶಭಕ್ತ ಅಂಬೇಡ್ಕರ್ರ ವೈಚಾರಿಕ ವಾರಸುದಾರರು ನಾವು ಬಿಜೆಪಿಯವರು ಎಂದರು.
ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಕ್ರಿಮಿನಲ್ ಕೇಸ್ ಹಾಕಿಸಿ: ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈಗ ಕಾಂಗ್ರೆಸಿಗರು ಬಿಜೆಪಿ ಗೆದ್ದಲ್ಲಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ನಿಷ್ಪಕ್ಷಪಾತ ಚುನಾವಣೆಗೆ ಎಸಗುವ ಅಪಚಾರವಾಗಿದೆ. ಇಂತಹ ಅಪನಂಬಿಕೆ ಮೂಡಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಮುಂದೆ ಚುನಾವಣೆಗೆ ಸ್ಪರ್ಧಿಸದಂತೆ ನಿಬಂಧನೆ ವಿಧಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು. ಮೂರು ರಾಜ್ಯಗಳ ಚುನಾವಣಾ ಜನಾದೇಶ ಬಿಜೆಪಿಗೆ ಸೆಮಿ ಫೈನಲ್ ಗೆಲವು ಮಾತ್ರವಲ್ಲ, ಫೈನಲ್ ಗೆಲವು ಕೂಡ ನಮ್ಮದೇ ಎಂದರು.
ಶೆಟ್ಟರ್ ಡಿಎನ್ಎ ಸಂಘ ಪರಿವಾರದ್ದು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಡಿಎನ್ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್ ನದ್ದಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಜನ ಸಂಘ ದಿಂದ ಗೆದ್ದಿದ್ದರು. ಶೆಟ್ಟರ್ ಸಹ ಬಿಜೆಪಿಯಿಂದಲೇ ಗೆದ್ದು ಅಧಿಕಾರ ಅನುಭವಿಸಿದವರು. ಈಗ ಕಾಂಗ್ರೆಸ್ ಸೇರಿಕೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ರಿಪೇರಿ ಮಾಡಲು ಸಾಧ್ಯವಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ ಅವರು, ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್ ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ ಇನ್ನು ಕೆಲವೊಮ್ಮೆ ಸೆಕೆಂಡ್ ಕ್ವಾಲಿಟಿ ಬರುತ್ತವೆ. ಪ್ರೊಡಕ್ಷನ್ ಯೂನಿಟ್ ಎಲ್ಲಿವರೆಗೂ ಚೆನ್ನಾಗಿರುತ್ತದೆಯೋ ಅಲ್ಲಿಯವರೆಗೂ ಬಿಜೆಪಿಯನ್ನು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಹೊಸದಾಗಿ ಮತಾಂತರಗೊಂಡವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಏನೇನೋ ಮಾಡುತ್ತಾರೆ, ಅದೇ ರೀತಿ ಶೆಟ್ಟರ್ ಸಹ ಏನೇನೋ ಹೇಳಿಕೆ ನೀಡುತ್ತಿದ್ದಾರೆ.
ಬಡ್ತಿಗೆ ಶಿಕ್ಷಕರೇ ಪರೀಕ್ಷೆ ಬರೆಯುವ ನಿಯಮ ರದ್ದು: ಸಚಿವ ಮಧು ಬಂಗಾರಪ್ಪ
ಆದರೆ ಅವರಿಗೆ ಬಿಜೆಪಿ ಸೈದ್ಧಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಹೀಗಿರುವಾಗ ಬಿಜೆಪಿಗೆ ಬೈದರೆ ಕಾಂಗ್ರೆಸ್ ನವರು ನನ್ನನ್ನು ನಂಬುತ್ತಾರೆ ಎಂದು ಭಾವಿಸಿದ್ದಾರೆ. ಒಟ್ಟಾರೆಯಾಗಿ ಜಗದೀಶ್ ಶೆಟ್ಟರ್ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು. ಜಗದೀಶ್ ಶೆಟ್ಟರ್ ಪಕ್ಷ ಬದಲು ಮಾಡಿರಬಹುದು ಆದರೆ ಅವರ ರಕ್ತವನ್ನು ಬದಲು ಮಾಡಲು ಸಾಧ್ಯ ವಾಗುತ್ತದೆಯೇ ? ಜಗದೀಶ್ ಶೆಟ್ಟರ್ ಅವರ ರಕ್ತ ಜನಸಂಘದಿಂದ ಬಂದಂತಹ ಬಿಜೆಪಿ ರಕ್ತ ಎಂದು ತಿವಿದರು.