ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha NewsFirst Published Dec 10, 2023, 1:00 AM IST
Highlights

ಇಡೀ ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂಬುದು ಇತ್ತೀಚೆಗೆ ಪ್ರಕಟವಾದ ಪಂಚರಾಜ್ಯ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ವಿಶ್ವೇಶ್ವರ ಹೆಗಡೆ ಕಾಗೇರಿ ಭವಿಷ್ಯ ನುಡಿದರು.
 

ಅಂಕೋಲಾ (ಡಿ.10): ಇಡೀ ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂಬುದು ಇತ್ತೀಚೆಗೆ ಪ್ರಕಟವಾದ ಪಂಚರಾಜ್ಯ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ವಿಶ್ವೇಶ್ವರ ಹೆಗಡೆ ಕಾಗೇರಿ ಭವಿಷ್ಯ ನುಡಿದರು. ಬಿಜೆಪಿ ಕುರಿತಂತೆ ಜನರ ವಿಶ್ವಾಸ ದಿನೇ ದಿನ ಹೆಚ್ಚುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡಗಳ ಗೆಲುವು ಜನರ ವಿಶ್ವಾಸದ ಪ್ರತೀಕವಾಗಿದೆ, ತೆಲಂಗಾಣದಲ್ಲೂ ಬಿಜೆಪಿ ಶಾಸಕರ ಸಂಖ್ಯೆ, ಮತ ಗಳಿಕೆ ಪ್ರಮಾಣ ಹೆಚ್ಚಿದೆ. ಜನ ನಿರೀಕ್ಷಿಸಿರುವ ಉತ್ತಮ ಆಡಳಿತ ಬಿಜೆಪಿ ನೀಡುತ್ತಾ ಬಂದಿದ್ದು ಜನರು ತೋರಿರುವ ವಿಶ್ವಾಸ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ತೆಲಂಗಾಣ ಕಾಂಗ್ರೆಸ್ ಗೆಲುವನ್ನು ರಾಜ್ಯ ಕಾಂಗ್ರೆಸ್ ನಾಯಕರು ಇಡೀ ದೇಶ ಗೆದ್ದ ಹಾಗೆ ಸಂಭ್ರಮಿಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿಯ ಸೋಲಲ್ಲ ಎಂಬುದನ್ನು ಕಾಂಗ್ರೆಸ್ಸಿಗರು ಅರಿಯಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಗೆಲುವು ಸಾಧಿಸಲಿದ್ದಾರೆ ಎಂದರು. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡುವ ಸಾಧ್ಯತೆಗಳಿವೆಯೇ ಎನ್ನುವ ಪ್ರಶ್ನೆಗೆ, ಸುದೀರ್ಘವಾಗಿ ರಾಜ್ಯ ರಾಜಕಾರಣದಲ್ಲಿ ಇದ್ದು ಹಲವು ರೀತಿಯ ಜವಾಬ್ದಾರಿ ನಿರ್ವಹಿಸಿದ್ದೇನೆ. ಮುಂದೆ ಏನು ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದು ಅವರ ತೀರ್ಮಾನಕ್ಕೆ ಬದ್ಧರಾಗಿ ನಡೆಯುವುದಾಗಿ ತಿಳಿಸಿದರು.

ಸರ್ಕಾರದಿಂದ ಅನುದಾನ ತಂದು ಕೊಟ್ಟ ಮಾತಿನಂತೆ ನಡೆದಿದ್ದೇನೆ: ಶಾಸಕ ಎಚ್.ವೈ.ಮೇಟಿ

ಎನ್‌ಇಪಿಗೆ ಕೋಟಿ ಸಹಿ ಸಂಗ್ರಹ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದನ್ನು ಖಂಡಿಸಿ ಶಿಕ್ಷಣ ಪ್ರೇಮಿಗಳು, ತಜ್ಞರು ಒಂದಾಗಿ ಜನರ ಬಳಿ ತೆರಳಿ ಜನಾಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡುತ್ತಿದ್ದು ಅದರ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ವೀಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಹಿಮಾಲಯ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ವಿಭಾಗದಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸುವಂತೆ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪರಿಣಿತರ ಸಲಹೆ-ಸೂಚನೆ ಪಡೆಯದೇ ಮನಸ್ಸಿಗೆ ಬಂದ ಹಾಗೆ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಪ್ರಯೋಗ ಶಾಲೆ ಮಾಡಲು ಹೊರಟ ರಾಜ್ಯ ಸರ್ಕಾರದ ಧೋರಣೆ ಖಂಡನೀಯವಾಗಿದೆ ಎಂದರು.

ಮೌಲ್ವಿ ಹಾಶ್ಮಿ ಜತೆ ನನಗೆ ಬಿಸಿನೆಸ್‌ ಇಲ್ಲ: ಶಾಸಕ ಬಸನಗೌಡ ಯತ್ನಾಳ್‌

ವಿದ್ಯಾರ್ಥಿಗಳಲ್ಲಿ ಜಗತ್ತಿನ ವೇಗಕ್ಕೆ ತಕ್ಕ ಹಾಗೆ ತಮ್ಮ ವ್ಯಕ್ತಿತ್ವ ಮತ್ತು ಸಾಮರ್ಥ್ಯ ಹೆಚ್ಚಿಸುವ ಶಿಕ್ಷಣವನ್ನು ಎನ್‌ಇಪಿ ಹೊಂದಿದ್ದು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ರಾಜ್ಯ ಸರ್ಕಾರ ಅನ್ಯಾಯ ಎಸಗಿದೆ ಎಂದು ದೂರಿದರು, ರಾಷ್ಟ್ರೀಯಪರ ವಿಚಾರಧಾರೆ, ದೇಶದ ಸಂಸ್ಕೃತಿ ಶಿಕ್ಷಣದಲ್ಲಿದ್ದರೆ ತಪ್ಪೇನಿದೆ ಎಂದ ಅವರು, ಬ್ರಿಟಿಷರ ಮತ್ತು ಮೊಘಲರ ಗುಲಾಮಿತನದ ಶಿಕ್ಷಣವನ್ನು ನಾವು ಒಪ್ಪುವುದಿಲ್ಲ. ಯುವಕರಲ್ಲಿ ದೇಶ ಮೊದಲು ಎಂಬ ಭಾವನೆ ಬರಬೇಕು, ದೇಶದ ಸನಾತನ ಸಂಸ್ಕೃತಿ ಶ್ರೇಷ್ಠ ಎಂದು ನಮಗೆ ಅನಿಸಿದಾಗ ಮಾತ್ರ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸಬಹುದು. ಅದನ್ನು ಶಿಕ್ಷಣದಿಂದ ಪಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

click me!