
ಬೆಂಗಳೂರು (ಫೆ.23): ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವ ಸಂಬಂಧ ಬರುವ ಮಾರ್ಚ್ 25ರವರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನಸಾಮಾನ್ಯರಿಂದ ಸಲಹೆ ಸ್ವೀಕರಿಸಲಾಗುವುದು ಎಂದು ಬಿಜೆಪಿಯ ಪ್ರಣಾಳಿಕೆ ಸಿದ್ಧತೆ ಸಮಿತಿಯ ಸಂಚಾಲಕರೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾಟ್ಸಾಪ್ ಸಂಖ್ಯೆ +91 8595158158ಕ್ಕೆ ಜನಸಾಮಾನ್ಯರು ಪ್ರಣಾಳಿಕೆ ಕುರಿತು ಸಲಹೆ ನೀಡಬಹುದು. ಕ್ಯೂಆರ್ ಕೋಡ್ ಮೂಲಕವೂ ಸಲಹೆ ನೀಡಬಹುದು. ಪ್ರತಿಯೊಂದು ಮಂಡಲದ ವಿವಿಧೆಡೆ 25 ಪೆಟ್ಟಿಗೆ ಸೇರಿ ಒಟ್ಟು ಎಂಟು ಸಾವಿರ ಸಲಹಾ ಪೆಟ್ಟಿಗೆಗಳನ್ನು ಇಡಲಾಗುವುದು. ಇದಕ್ಕಾಗಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರನ್ನು ತಲುಪುವ ಗುರಿ ಇದೆ ಎಂದು ಹೇಳಿದರು.
ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ
ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ. ಕನಿಷ್ಠ 50 ವಲಯವಾರು ಸಭೆಗಳನ್ನು ಮಾಡಲಾಗುವುದು. ತೋಟಗಾರಿಕೆ, ರೇಷ್ಮೆ ಸೇರಿ ಕೃಷಿ ವಲಯದ ಸಭೆ, ಕೈಗಾರಿಕೆ, ಸಣ್ಣ ಮಧ್ಯಮ, ಗುಡಿ ಕೈಗಾರಿಕೆ ಸಬಲೀಕರಣಕ್ಕೆ ತಂಡದ ಸಭೆ ನಡೆಸಲಾಗುವುದು. ಈ ವಲಯ ಸಭೆಗಳಲ್ಲಿ ಕೇಂದ್ರ ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ. ಬರುವ ಮಾರ್ಚ್ 25ರವರೆಗೆ 224 ಕ್ಷೇತ್ರಗಳಲ್ಲೂ ಸಭೆ ನಡೆಯಲಿದೆ. ಜೊತೆಗೆ ವಿಡಿಯೋ ವ್ಯಾನ್ ಪ್ರಗತಿ ರಥದಲ್ಲೂ ಸಲಹಾ ಪೆಟ್ಟಿಗೆ ಇರುತ್ತದೆ ಎಂದು ವಿವರಿಸಿದರು.
ಪ್ರತಿ ವರ್ಗದ ಜನರಿಗೆ ಅಭಿವೃದ್ಧಿಯ ಅಮೃತವನ್ನು ತಮ್ಮ ಬಜೆಚ್ ಮೂಲಕ ಮುಖ್ಯಮಂತ್ರಿಗಳು ನೀಡಿದ್ದಾರೆ. ಕಾಂಗ್ರೆಸ್ ಕೇವಲ 38 ಶೇ. ಭರವಸೆ ಅನುಷ್ಠಾನ ಮಾಡಿತ್ತು. ಕೋವಿಡ್, ಅತಿವೃಷ್ಟಿಯ ವಿಕೋಪ ಇದ್ದರೂ, ಆರ್ಥಿಕ ಹಿಂಜರಿತದ ನಡುವೆ ಇಷ್ಟುಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನಮಗೆ ಸ್ಪಷ್ಟಬಹುಮತವನ್ನು ಕೊಡಿ. ನೂರಕ್ಕೆ ನೂರು ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.
ಬಾದಾಮಿಯಲ್ಲಿ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್ವೈಗೆ ತಿರುಗೇಟು ನೀಡಿದ ಸಿದ್ದು
ಡಬಲ್ ಎಂಜಿನ್ ಸರ್ಕಾರವು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ. ರೈಲ್ವೆ ಸೇರಿ ಅನೇಕ ರಾಷ್ಟ್ರೀಯ ಯೋಜನೆಗಳಾಗಿವೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ- ರಾಜ್ಯ ಸರ್ಕಾರಗಳು ಶ್ರಮಿಸಿವೆ. ಡಬಲ್ ಎಂಜಿನ್ ಸರ್ಕಾರದ ಸಾಧನೆ ಏನು ಎಂದು ಕೇಳುವವರಿಗೆ ಇದು ತಕ್ಕ ಉತ್ತರ ಎಂದು ಸುಧಾಕರ್ ಹೇಳಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.