ಪುರುಷರಿಗೂ ಫ್ರೀ ಪ್ರಯಾಣ ಅವಕಾಶ ಕೊಡಿ: ವಾಟಾಳ್‌ ನಾಗರಾಜ್‌

Published : Jun 19, 2023, 04:48 AM IST
ಪುರುಷರಿಗೂ ಫ್ರೀ ಪ್ರಯಾಣ ಅವಕಾಶ ಕೊಡಿ: ವಾಟಾಳ್‌ ನಾಗರಾಜ್‌

ಸಾರಾಂಶ

ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರದಲ್ಲೇ ಭಾರಿ ಸ್ಪಂದನೆ ಕಂಡಿರುವ ಬೆನ್ನಲ್ಲೇ ಇದೀಗ ಮಹಿಳೆಯರಷ್ಟೇ ಯಾಕೆ? ಪುರುಷರಿಗೂ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಎಂದು ಪುರುಷರ ಪರವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಕಲಬುರಗಿ (ಜೂ.19): ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರ ಉಚಿತ ಪ್ರಯಾಣಕ್ಕೆ ವಾರದಲ್ಲೇ ಭಾರಿ ಸ್ಪಂದನೆ ಕಂಡಿರುವ ಬೆನ್ನಲ್ಲೇ ಇದೀಗ ಮಹಿಳೆಯರಷ್ಟೇ ಯಾಕೆ? ಪುರುಷರಿಗೂ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಎಂದು ಪುರುಷರ ಪರವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡೋದಕ್ಕೆ ತಾವು ಆಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಲೇ ಪುರುಷರೇನು ತಪ್ಪು ಮಾಡಿದ್ದಾರೆ? ಮನೆಯಲ್ಲಿದ್ದ ಹೆಣ್ಮಕ್ಕಳೆಲ್ಲರೂ ಗುಡಿ- ಗುಂಡಾರ ಸುತ್ತಾಡುತ್ತಿರೋವಾಗ ಪುರುಷರು ಮನೆಯಲ್ಲಿರಬೇಕೆ? ಅವರಿಗೂ ಬಸ್‌ ಪ್ರಯಾಣ ಉಚಿತ ಮಾಡಿ. ಎಲ್ಲರೂ ಸುತ್ತಾಡಿ ಬರಲಿ ಎಂದರು.

ಪುರುಷರಿಗೂ ಬಸ್‌ ಪ್ರಯಾಣ ಉಚಿತವಾಗಲಿ ಎಂಬ ವಿಷಯವಾಗಿ ಗಮನ ಸೆಳೆಯಲು ತಾವು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿ ಆಗ್ರಹಿಸುವುದಾಗಿಯೂ ಹೇಳಿದರು. ನಿರುದ್ಯೋಗಿಗಳಿಗೆ 3 ಸಾವಿರ ಯುವನಿಧಿ ಕೊಡೋದಕ್ಕಿಂತ ಸರ್ಕಾರ ಕಾಲಿ ಹುದ್ದೆ ಭರ್ತಿಗೆ ಯೋಜನೆ ರೂಪಿಸಲಿ ಎಂದರಲ್ಲದೆ ವಿದ್ಯುತ್‌ ದರ ವಿಪರೀತ ಹೆಚ್ಚಿಗೆ ಮಾಡಿ ಇತ್ತ 200 ಯೂನಿಟ್‌ ಉಚಿತ ಎನ್ನುವ ಸರ್ಕಾರದ ಗೃಹಜ್ಯೋತಿ ಯೋಜನೆಯನ್ನು ಟೀಕಿಸಿದರು. ದೇಶದಲ್ಲಿ ಚುನಾವಣೆ ವ್ಯಸ್ಥೆಯಲ್ಲಿ ಸುಧಾರಣೆ ಬರಬೇಕಿದೆ. ಇಲ್ಲದೆ ಹೋದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿರಿವಂತರೇ ಅರ್ಹರಾಗುವ ದಿನಗಳು ಬಂದು ಬಿಟ್ಟಿವೆ. 

ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ತುಂಬಾ ದಿನ ಉಳಿಯಲ್ಲ: ಯಡಿಯೂರಪ್ಪ

ಅಭ್ಯರ್ಥಿಗಳ ಸುಳ್ಳು ಲೆಕ್ಕ ನಂಬುತ್ತಿರುವ ಆಯೋಗ ಯಾವ ವಿಚಾರದಲ್ಲೂ ಆಕ್ಷೇಪ ಎತ್ತುತ್ತಿಲ್ಲ. ಹೀಗಾಗಿ ಹಣವಂತರೇ ಹೆಚ್ಚು ಕಣಕ್ಕಿಳಿಯುತ್ತಿದ್ದಾರೆ. ಸೇವಾ ಭಾವನೆ ಇರುವವರಿಗೆ ಚುನಾವಣೆ ಗಗನ ಕುಸುಮವಾಗಿದೆ ಎಂದರು. ಮತಕ್ಕೆ ಬೆಲೆ ಕಟ್ಟಲಾಗುತ್ತಿದೆ. ಕೋಟಿಗಟ್ಟಲೇ ಹಣ ಹಂಚಿ ಗೆಲ್ಲುತ್ತಿದ್ದರೂ ಆಯೋಗ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಚುನಾವಣೆ ವ್ಯವಸ್ಥೆ ಮೇಲೆಯೇ ಜನ ನಂಬಿಕೆ ಕಳೆದುಕೊಳ್ಳುವ ದಿನಗಳು ದೂರವೇನಿಲ್ಲ. ಈಗಲೇ ರಿಪೇರಿಯಾಗಬೇಕು. ಚುನಾವಣೆ ಸುಧಾರಣೆಗೆ ಆಗ್ರಹಿಸಿ ತಾವು ಶೀಘ್ರದಲ್ಲೇ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯಾದ್ಯಂತ ಅಭಿಯಾನ ಮಾಡೋದಾಗಿ ಹೇಳಿದರು.

‘ಅಕ್ಕಿಭಾಗ್ಯ​’ದಲ್ಲಿ ಕಾಂಗ್ರೆಸ್‌ ಬಣ್ಣ ಬಯ​ಲು: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ

ಈಚೆಗೆ ಕಲಬುರಗಿಯಲ್ಲಿ ಮರಳು ಮಾಫಿಯಾಕ್ಕೆ ಬಲಿಯಾದ ಪೇದೆಯ ಕುಟುಂಬಕ್ಕೆ ಸಾಂತ್ವನ ಹೇಳಿದ ವಾಟಾಳ್‌ ನಾಗರಾಜ್‌ ನೊಂದ ಕುಟುಂಬಕ್ಕೆ ಸರ್ಕಾರ 1 ಕೋಟಿ ರುಪಾಯಿ ಪರಿಹಾರ ನೀಡಲಿ ಎಂದರು. ಮಾಫಿಯಾ ಮಟ್ಟಹಾಕುವ ಪೊಲೀಸರಿಗೆ ದುರುಳರು ಬಲಿ ಪಡೆಯುತ್ತಾರೆಂದರೆ ಪರಿಸ್ಥಿತಿ ಹದಗೆಟ್ಟಿರೋ ಲಕ್ಷಣ ಇದು. ರಾಜ್ಯದಲ್ಲಿ ಸರ್ಕಾರ ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಬೇಕೆಂದು ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. ಕನ್ನಡ ಸೈನ್ಯದ ಸೋಮನಾಥ ಕಟ್ಟೀಮನಿ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!