
ಬೆಂಗಳೂರು (ಜೂ.19): ರಾಜ್ಯ ಬಿಜೆಪಿ ನಾಯಕರಿಗೆ ಬಡವರ ಪರ ಕಾಳಜಿ ಇದ್ದರೆ, ಅಕ್ಕಿ ಕೊಡಲಾಗದಿದ್ದರೆ ಜನರಿಗೆ ಹಣವನ್ನೇ ಕೊಡಿ ಎಂದು ನಮಗೆ ಸಲಹೆ ನೀಡುವ ಬದಲು ರಾಜಕೀಯ ಬಿಟ್ಟು ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಅಕ್ಕಿ ಕೊಡಲು ಕೇಂದ್ರ ಸರ್ಕಾರದವರು ರಾಜಕೀಯ ಮಾಡುತ್ತಿದ್ದಾರೆ. ಭಾರತೀಯ ಆಹಾರ ನಿಗಮದವರು ಮೊದಲು ನಮ್ಮ ಪತ್ರವನ್ನು ಒಪ್ಪಿ ಅಕ್ಕಿ ಕೊಡುತ್ತೇವೆ ಎಂದವರು ನಂತರ ಕೇಂದ್ರ ಗ್ರಾಹಕರ ಇಲಾಖೆ ಹೇಳಿದೆ, ಅಕ್ಕಿ ಕೊಡಲಾಗಲ್ಲ ಅಂತ ಜೂ.14ರಂದು ಮತ್ತೊಂದು ಪತ್ರ ಬರೆಯುತ್ತಾರೆ. ಅಂದರೆ ಇದು ರಾಜಕೀಯ ಅಲ್ವಾ? ಈಗ ಬಿಜೆಪಿಯವರು ಕೇಂದ್ರ ಸಚಿವರ ಜೊತೆ ಚರ್ಚಿಸಬೇಕಿತ್ತು.
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತುಂಬಾ ದಿನ ಉಳಿಯಲ್ಲ: ಯಡಿಯೂರಪ್ಪ
ಅಕ್ಕಿ ಕೊಡಲಾಗದಿದ್ದರೆ ಜನರಿಗೆ ದುಡ್ಡೇ ಕೊಡಲಿ ಅಂತಿದ್ದಾರಲ್ಲಾ, ಜನರಿಗೆ ಅಕ್ಕಿ ಬದಲು ದುಡ್ಡು ಕೊಟ್ಟರೆ ದುಡ್ಡು ತಿನ್ನೋಕಾಗುತ್ತಾ? ಬಿಜೆಪಿಯವರು ಇಂತಹ ಸಲಹೆಗಳನ್ನು ನೀಡುವ ಬದಲು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ರಾಜಕೀಯ ಬಿಟ್ಟು ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಒತ್ತಾಯ ಮಾಡಲಿ. ನಮಗೆ ಅಕ್ಕಿ ಕೊಡುತ್ತಿದ್ದವರು ಎಫ್ಸಿಐನವರು. ಅವರು ಕೊಡಲಾಗಲ್ಲ ಅಂತ ಮೊದಲೇ ಹೇಳಿದ್ದರೆ ನಾವು ಕೇಂದ್ರ ಸಚಿವರ ಜೊತೆ ಮಾತನಾಡಬಹುದಿತ್ತು. ಈಗ ಮಾತನಾಡಲಿಲ್ಲ ಎನ್ನುವುದು ನೆಪ ಅಷ್ಟೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
‘ಅಕ್ಕಿಭಾಗ್ಯ’ದಲ್ಲಿ ಕಾಂಗ್ರೆಸ್ ಬಣ್ಣ ಬಯಲು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ರಾಜ್ಯದ ರೈತರಿಂದಲೇ ಅಕ್ಕಿ ಖರೀದಿಸಲಿ ಎಂದು ಬಿಜೆಪಿಯವರು ಆಗ್ರಹಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ರಾಯಚೂರಿನಲ್ಲಿ ಸೋನಾ ಮಸೂರಿ ಅಕ್ಕಿ ಬೆಳೆಯುತ್ತಾರೆ. ಅದರ ಬೆಲೆ ಕೆ.ಜಿ.ಗೆ 55 ರು. ಅದನ್ನು ಕೊಡೋಕಾಗುತ್ತಾ. ಎಫ್ಸಿಐನವರು ಸಾರಿಗೆ ವೆಚ್ಚವೂ ಸೇರಿ ಕೆಜಿಗೆ 36.60 ರು.ನಂತೆ ಅಕ್ಕಿ ಕೊಡಬೇಕು. ನಾವು ಹಣ ಕೊಡ್ತೀವಿ ಕೊಡಿ ಅಂದ್ರ ಕೊಡ್ತಿಲ್ಲ. ಆಂಧ್ರ ಪ್ರದೇಶದವರು, ತೆಲಂಗಾಣದವರನ್ನು ಕೇಳಿದ್ದೇವೆ ಆಗಲ್ಲ ಅಂದ್ರು. ಛತ್ತೀಸ್ ಘಡದವರು ಈಗ 1.5 ಲಕ್ಷ ಮೆ.ಟನ್ ಕೊಡ್ತೀವಿ ಎಂದು ಹೇಳಿದ್ದಾರೆ. ಆದರೆ, ಅವರ ಅಕ್ಕಿ ಬೆಲೆ ಜಾಸ್ತಿ ಆಗುತ್ತದೆ ನೋಡೋಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.