
ಆಮ್ ಆದ್ಮಿ ಪಕ್ಷದ ಸಂಸದ, ನಟಿ ಪರಿಣೀತಿ ಚೋಪ್ರಾ ಪತಿ, ರಾಘವ್ ಚಡ್ಡಾ ಇದಾಗಲೇ AAP ತೊರೆದು ಬಿಜೆಪಿ ಸೇರಿದ್ದಾರೆ. ತಮ್ಮ ಜೊತೆ, ಆರು APP ಸಂಸದರನ್ನೂ ಅವರು ಕರೆದುಕೊಂಡು ಹೋಗಿ ಆಪ್ಗೆ ಭಾರಿ ಶಾಕ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಪಕ್ಷಾಂತರ ಮಾಡಿರುವ ಚಡ್ಡಾ ಸೇರಿದಂತೆ ಎಲ್ಲಾ ಏಳು ಸಂಸದರ ರಾಜ್ಯಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಸಭಾಪತಿಗಳಿಗೆ ಪಕ್ಷ ಮನವಿ ಮಾಡಿದೆ. ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಲ್ ಅವರ ಸಲಹೆ ಪಡೆದು, ಪಕ್ಷಾಂತರ ಮಾಡುತ್ತಿರುವ ಸಂಸದರ ಸದಸ್ಯತ್ವ ರದ್ದುಗೊಳಿಸುವಂತೆ ಉಪರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪಕ್ಷ ಇದಾಗಲೇ ತಿಳಿಸಿದೆ. ದ್ರೋಹ ಮಾಡಿರುವ ಏಳು ಸಂಸದರ ಸದಸ್ಯತ್ವ ರದ್ದಗೊಳಿಸುವಂತೆ ಕೋರಿ ನಾವು ರಾಜ್ಯಭಾ ಸಭಾಪತಿಗಳಿಗೆ ಪತ್ರ ಬರೆದಿದ್ದೇವೆ. ಈ ಸಂಬಂಧ ತಜ್ಞರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪಕ್ಷ ತಿಳಿಸಿದೆ.
ಇದರ ಬೆನ್ನಲ್ಲೇ ರಾಘವ್ ಚಡ್ಡಾ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದು ಅದರಲ್ಲಿ ಉಲ್ಲೇಖವಾಗಿದೆ. ಅದನ್ನು ನೋಡಿದವರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಅವರು ಹೊಸ ಪಕ್ಷದ ಹೆಸರು ಹೇಳಿದಾಗ ಹಲವರಿಗೆ ಅಸಲಿಯತ್ತು ಏನೆಂದು ತಿಳಿದಿದೆ. ಏಕೆಂದರೆ ಆ ಪಕ್ಷದ ಹೆಸರು ಯಾರಿಗೂ ಗೊತ್ತೇ ಇಲ್ವಲ್ಲಾ ಅದಕ್ಕೇನೇ.
ಅಷ್ಟಕ್ಕೂ ಹೇಳಿಕೇಳಿ ಇದು ಎಐ ಯುಗ. ಯಾರ ಬಾಯಲ್ಲಿ, ಏನು ಬೇಕಾದರೂ ಹೇಳಿಸಬಹುದು, ಯಾರಿಂದ ಏನು ಬೇಕಾದರೂ ಮಾಡಿಸಬಹುದು. ಅಸಲಿ ವಿಡಿಯೋ ಯಾವುದು, ನಕಲಿ ವಿಡಿಯೋ ಯಾವುದು ಎಂದು ತಿಳಿಯುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಈ ನಕಲಿ ವಿಡಿಯೋಗಳು ಇರುತ್ತವೆ. ಕೆಲವೊಮ್ಮೆ ಇದು ಎಐ ವಿಡಿಯೋ ಎಂದು ತಿಳಿದಿದ್ದರೂ ಅಂಥ ರಾಜಕಾರಣಿ ಅಥವಾ ಸೆಲೆಬ್ರಿಟಿ ವಿರೋಧಿಗಳು ದುರುದ್ದೇಶಪೂರ್ವಕವಾಗಿ ಆ ವಿಡಿಯೋ ಹರಿಬಿಟ್ಟು ಅದನ್ನು ನಿಜ ಎಂದು ನಂಬಿಸುವ ಪ್ರಯತ್ನವನ್ನೂ ಮಾಡುವುದನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರಬಹುದು.
ಆದರೆ,, ಇಲ್ಲಿ ರಾಘವ್ ಚಡ್ಡಾ ಅವರ ಈ ರೀತಿ ಹೇಳಿಕೆಯ ವಿಡಿಯೋ ವೈರಲ್ ಮಾಡಿದ್ದು, ಭಾರತದ ಪ್ರಸಿದ್ಧ ಒಂದು ಭಾರತೀಯ ಆನ್ಲೈನ್ ಶೈಕ್ಷಣಿಕ ವೇದಿಕೆ. ಪ್ರಾಥಮಿಕವಾಗಿ MBA (CAT) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಹೆಸರುವಾಸಿಯಾಗಿರುವ ಈ ವೇದಿಕೆ ಇಂಥ ಕಿತಾಪತಿ ಮಾಡಿದೆ. ಬಿಜೆಪಿ ಬಿಟ್ಟು ಈ ಶಿಕ್ಷಣ ಸಂಸ್ಥೆಯನ್ನು ನಾನು ಸೇರುತ್ತಿದ್ದೇನೆ. ಏಕೆಂದರೆ, ಎಲ್ಲರಿಗೂ ಅರ್ಹ ಶಿಕ್ಷಣ ಸಿಗಬೇಕು, ಎಲ್ಲರೂ ಉನ್ನತ ಶಿಕ್ಷಣ ಪಡೆದು ಮುಂದೆ ಬರಬೇಕು, ಅದಕ್ಕಾಗಿ ನಾನು ಇದನ್ನು ಸೇರುತ್ತಿದ್ದೇನೆ ಎಂದು ಚಡ್ಡಾ ಹೇಳಿದಂತೆ ಎಐ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ನೋಡಿದ ಕೆಲವು ಶಿಕ್ಷಣ ಸಂಸ್ಥೆಗಳು ನಮಗೂ ಹೀಗೆಯೇ ಮಾಡಿಕೊಡಿ ಎಂದು ಕಮೆಂಟ್ನಲ್ಲಿ ಹಾಕುತ್ತಿದ್ದರೆ, ನಾವು ರೆಡಿ ಅದಕ್ಕೆ ದುಡ್ಡು ಎಷ್ಟು ಕೊಡುತ್ತಿದ್ದೀರಿ ಎಂದು ಕಮೆಂಟ್ಸ್ನಲ್ಲಿಯೇ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.