ರಕ್ತ ಬೇಕಾದ್ರೆ ಕೊಟ್ಟೇವು, ಕಾವೇರಿ ಕೊಡಲ್ಲ: ನಟ ದೊಡ್ಡಣ್ಣ

By Kannadaprabha NewsFirst Published Sep 30, 2023, 2:40 AM IST
Highlights

ಕಾವೇರಿ ನಮ್ಮ ಜೀವನದಿ, ನಮ್ಮ ತಾಯಿ. ಜಿ.ಮಾದೇಗೌಡರು ಹೇಳಿದ್ಹಾಗೆ ರಕ್ತ ಬೇಕಾದ್ರೆ ಕೊಟ್ಟೇವು, ಕಾವೇರಿ ಕೊಡಲ್ಲ. ಕಾವೇರಿ ನಮ್ಮವಳು, ಕಾವೇರಿಗಾಗಿ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು. 

ಶಿವಮೊಗ್ಗ (ಸೆ.30): ಕಾವೇರಿ ನಮ್ಮ ಜೀವನದಿ, ನಮ್ಮ ತಾಯಿ. ಜಿ.ಮಾದೇಗೌಡರು ಹೇಳಿದ್ಹಾಗೆ ರಕ್ತ ಬೇಕಾದ್ರೆ ಕೊಟ್ಟೇವು, ಕಾವೇರಿ ಕೊಡಲ್ಲ. ಕಾವೇರಿ ನಮ್ಮವಳು, ಕಾವೇರಿಗಾಗಿ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು. ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ಹಂಚಿಕೆ ಬಗ್ಗೆ 1924 ರಲ್ಲಿ ಅಗ್ರಿಮೆಂಟ್ ಆಗಿತ್ತು. ಯಾರೋ ದೊಡ್ಡವರು ಹೇಳ್ತಿದ್ದರು, ಬ್ರಿಟಿಷರು ಬರೆದಂತಹ‌ ಪೇಪರ್ ಬದಲಾಯಿಸಲು ಆಗಿಲ್ವಾ ಅಂತಾ. ಈ ವಿಷಯಕ್ಕೆ ದೊಡ್ಡ ದೊಡ್ಡವರು ಪ್ರವೇಶ ಮಾಡಬೇಕು ಎಂದರು.

ರಾಜ್ಯ ರಾಜ್ಯಕ್ಕೆ, ಜನ ಜನಕ್ಕೆ ತಿಕ್ಕಾಟಕ್ಕೆ ಬಿಟ್ಟು ತಾವೆಲ್ಲೋ ಕುಳಿತುಕೊಂಡು ಇರೋದಲ್ಲ. ಕಾವೇರಿ ಹೋರಾಟದಲ್ಲಿ ಚಿತ್ರರಂಗದವರು ಯಾರು ಹಿಂದೇಟು ಹಾಕಲ್ಲ. ಸೆಲ್ಫಿ ಕಾಟ ಇಲ್ಲ ಅಂದ್ರೆ ನಮ್ಮವರು ಎಲ್ಲರೂ ಹೋರಾಟಕ್ಕೆ ಬರುತ್ತಾರೆ ಎಂದರು. ಸಿನಿಮಾ ನಟ ಎನ್ನುವ ಅಹಂಕಾರ ಇಲ್ಲ. ನಾವೇನು ಕಾವೇರಿ‌ ಕುಡಿಯುತ್ತಿಲ್ವಾ, ನಮ್ಮ ಮಕ್ಕಳು ‌ಕಾವೇರಿ‌ ಕುಡಿಯುತ್ತಿಲ್ವಾ? ಕಾವೇರಿ‌ ನೀರಿಗೆ ನಾವೆಷ್ಟು ಕಷ್ಟಪಡುತ್ತಿದ್ದೇವೆ. ಮಳೆ ಆಗಬೇಕಿದೆ. ಮಡಿಕೇರಿಗೆ ಮಳೆಯಾದರೆ ಕನ್ನಂಬಾಡಿ ತುಂಬೋದು. ರಾಜ್ಯದವರಿಗೆ ಕುಡಿಯಲು ನೀರಿಲ್ಲ ಎಂದರೆ ಸಮಸ್ಯೆ ಉದ್ಭವವಾಗುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ

ಕಾವೇರಿ ನೀರು ತಮಿಳುನಾಡಿಗೆ ಬಿಡದಿರಲು ಆಗ್ರಹ: ಕಾವೇರಿ ನೀರು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಯುವಕನೊಬ್ಬ ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಜಯ ಕರ್ನಾಟಕ ಸಂಘಟನೆಯ ಮಹೇಶ ರುದ್ರಮುನಿ ಅವರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಕಾವೇರಿ ನೀರಿನ್ನು ತಮಿಳುನಾಡಿಗೆ ಬಿಡದಂತೆ ಪ್ರತಿಭಟನೆ ನಡೆಸಿದರು. ಅನಂತರ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾವೇರಿ ಮತ್ತು ಮಹದಾಯಿ ನದಿ ನೀರಿನ ವಿಚಾರವಾಗಿ ಹಲವು ದಶಕಗಳಿಂದ ನಮ್ಮ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದು, ಈವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿಲ್ಲ. ಸಮಸ್ಯೆ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿಡಬ್ಲ್ಯೂಆರ್‌ಸಿ ವನ್ನು ರಚನೆ ಮಾಡಿದ್ದು ಅಧಿಕಾರಿ ಮಂಡಳಿಯ ಆದೇಶದಂತೆ ನೀರು ಬಿಡುತ್ತಿದ್ದು, ರಾಜ್ಯದಲ್ಲಿ ಮಳೆಯ ಅಭಾವದಿಂದ ಡ್ಯಾಮ್ ನಲ್ಲಿ ನೀರು ಶೇಖರಣೆ ಇಲ್ಲದಿದ್ದರೂ ವಾಸ್ತ ವಾಂಶವನ್ನು ಪರಿಗಣಿಸದೇ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ ಎಂದರು.

ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಬಿಟ್ಟು ಇಂದು ವಿರೋಧಿಸೋದು ತಪ್ಪು: ಸಚಿವ ಮಧು ಬಂಗಾರಪ್ಪ

ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿನ ಜನತೆಗೆ 3ನೇ ಬೆಳೆ ಬೆಳೆಯಲು ನೀರು ಬಿಡುವುದು, ಬಿಡುತ್ತಿರುವುದು ಸರಿಯಲ್ಲ ಎಂದರು. ಕಾವೇರಿ ಜಲಾನಯ ಪ್ರದೇಶದಲ್ಲಿ ಮಳೆಯ ಕೊರತೆ ಜಲಾಶಯದ ನೀರಿನ ಸಂಗ್ರಹ ಪ್ರಮಾಣ ಇತ್ಯಾದಿ ಅಂಶಗಳ ನೈಜ ಚಿತ್ರಣವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಥವಾ ಉಚ್ಚ ನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ತೆರೆದಿಟ್ಟು, ಕನ್ನಡ ನಾಡಿನ ಜನತೆಗೆ ನ್ಯಾಯ ದೊರಕಿಸಿ ಕೊಡುವಲ್ಲಿ ನಮ್ಮ ಸಂಸದರು ಧ್ವನಿ ಎತ್ತಬೇಕು. ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕಾವೇರಿ ಜಲಾನಯನ ಪ್ರದೇಶದ ವಾಸ್ತವಾಂಶದ ಚಿತ್ರಣವನ್ನು ನೀರು ನಿರ್ವಹಣಾ ಸಮಿತಿ ಹಾಗೂ ನ್ಯಾಯಾಲಯದ ಮುಂದೆ ಇಡದ ಕಾರಣ ಹಿನ್ನಡೆಯಾಗಿದೆ ಎಂದು ಅವರು ಹೇಳಿದರು.

click me!