ಆಪ್‌ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್‌..!

Published : Dec 07, 2022, 02:27 PM ISTUpdated : Dec 07, 2022, 03:46 PM IST
ಆಪ್‌ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್‌..!

ಸಾರಾಂಶ

ಬಿಜೆಪಿ - ಎಎಪಿ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ವಿಜಯ ಮಾಲೆಯನ್ನು ಎಎಪಿ ತನ್ನದಾಗಿಸಿಕೊಂಡಿದೆ. ಆದರೂ, ಬಿಜೆಪಿ ಸಮೀಕ್ಷೆಗಳು ಊಹಿಸಿದಷ್ಟು ಕೆಟ್ಟದಾಗಿ ಸೋತಿಲ್ಲ.

ಬುಧವಾರ ಬೆಳಗ್ಗೆಯಿಂದ ಕುತೂಹಲ ಕೆರಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಿದ್ದು, ಸ್ಪಷ್ಟ ಫಲಿತಾಂಶ (Delhi Municipal Corporation Election Results 2022) ಹೊರಹೊಮ್ಮಿದೆ. ಹಾಗೂ, ಎಎಪಿ  (AAP) ಜಯಭೇರಿ ಬಾರಿಸಿದೆ. ಆಮ್ ಆದ್ಮಿ ಪಕ್ಷ 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಬಹುಮತ ಗಳಿಸಿ ದೆಹಲಿ ಪಾಲಿಕೆ ಮೇಲಿನ ಬಿಜೆಪಿಯ (BJP) 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಚುನಾವಣೋತ್ತರ ಸಮೀಕ್ಷೆಗಳಷ್ಟು ಸ್ಥಾನಗಳು ಆಪ್‌ಗೆ ಸಿಗದಿದ್ದರೂ, ಬಿಜೆಪಿ - ಎಎಪಿ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ವಿಜಯ ಮಾಲೆಯನ್ನು ಎಎಪಿ ತನ್ನದಾಗಿಸಿಕೊಂಡಿದೆ. ಆದರೂ, ಬಿಜೆಪಿ ಸಮೀಕ್ಷೆಗಳು ಊಹಿಸಿದಷ್ಟು ಕೆಟ್ಟದಾಗಿ ಸೋತಿಲ್ಲ. ಆದರೂ, 15 ವರ್ಷಗಳ ಕಾಲ ನಿಯಂತ್ರಣ ಸಾಧಿಸಿದ್ದ ಪಾಲಿಕೆಯ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ಬಿಟ್ಟುಕೊಡಬೇಕಾಗಿದೆ. 

ಈ ನಡುವೆ, ಎಎಪಿ ಉನ್ನತ ನಾಯಕರಾದ ಮನೀಷ್ ಸಿಸೋಡಿಯಾ, ಭಗವಂತ್ ಮಾನ್ ಮತ್ತು ರಾಘವ್ ಚಡ್ಡಾ ಸೇರಿದಂತೆ ಆಪ್‌ ಉನ್ನತ ನಾಯಕತ್ವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದರು. ನಂತರ, ಎಲ್ಲಾ ನಾಯಕರೊಂದಿಗೆ ಎಎಪಿ ಕೇಂದ್ರ ಕಚೇರಿಗೆ ದೆಹಲಿ ಸಿಎಂ ತೆರಳಿದ್ದು, ಪಕ್ಷದ ಕಾರ್ಯಕರ್ತರು, ಮಾಧ್ಯಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮಧ್ಯೆ, ಬಿಜೆಪಿ ಸಹ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ (Congress) ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದ್ದು, 9 ವಾರ್ಡ್‌ಗಳನ್ನು ಮಾತ್ರ ವಶಪಡಿಸಿಕೊಂಡಿದೆ.

ಇದನ್ನು ಓದಿ: Delhi MCD Election Results: ಎಎಪಿಯಿಂದ ಸಂಭ್ರಮಾಚರಣೆ, ಕಾಂಗ್ರೆಸ್‌ ಕಚೇರಿ ಖಾಲಿ ಖಾಲಿ..!

ಚುನಾವಣಾ ಆಯೋಗದ ಅಧಿಕೃತ ಘೋಷಣೆಯ ಪ್ರಕಾರ 250 ವಾರ್ಡ್‌ಗಳ ಫಲಿತಾಂಶ ಘೋಷಣೆಯಾಗಿದ್ದು, ಈ ಪೈಕಿ ಆಪ್‌ 134 ವಾರ್ಡ್‌ ಗೆದ್ದರೆ, ಬಿಜೆಪಿ 104, ಕಾಂಗ್ರೆಸ್ - 9 ಹಾಗೂ ಇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ.

ಮನೀಶ್‌ ಸಿಸೋಡಿಯಾ ಕ್ಷೇತ್ರದಲ್ಲಿ ಆಪ್‌ಗೆ ಹಿನ್ನೆಡೆ..!
ಆಪ್‌ಗೆ ಚುನಾವಣೋತ್ತರ ಸಮೀಕ್ಷೆಗಳು ನೀಡಿದಷ್ಟು ದೊಡ್ಡ ಮೊತ್ತದ ಗೆಲುವು ದೊರೆತಿಲ್ಲ. ಅಲ್ಲದೆ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿಧಾನಸಭಾ ಕ್ಷೇತ್ರದಲ್ಲಿ ಬರುವ 4 ವಾರ್ಡ್‌ಗಳ ಪೈಕಿ 3 ರಲ್ಲಿ ಆಪ್‌ ಸೋತಿದೆ. 

ಆಪ್‌ ನಂಬಿದ್ದಕ್ಕೆ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು: ಮನೀಶ್ ಸಿಸೋಡಿಯಾ
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಕಳೆದ 15 ವರ್ಷಗಳಿಂದ ಪಾಲಿಕೆ ಮೇಲೆ ಆಳ್ವಿಕೆ ನಡೆಸಿದ್ದ ಬಿಜೆಪಿಯನ್ನು ಸೋಲಿಸುವ ಮೂಲಕ ಆಮ್ ಆದ್ಮಿ ಪಕ್ಷವು ಇತಿಹಾಸವನ್ನು ಸೃಷ್ಟಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: Delhi MCD Poll Results: ಎಎಪಿಗೆ ಸಿಗಲಿದೆ ಸ್ಪಷ್ಟ ಬಹುಮತ, ಬಿಜೆಪಿಯಿಂದ ಪ್ರಬಲ ಪೈಪೋಟಿ..!

ಈ ಸಂಬಂಧ ಟ್ವೀಟ್‌ ಮಾಡಿದ ಮನೀಶ್‌ ಸಿಸೋಡಿಯಾ, "ದೆಹಲಿ ಎಂಸಿಡಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸುವ ಮೂಲಕ ದೆಹಲಿಯ ಜನರು ಪ್ರಾಮಾಣಿಕ ಮತ್ತು ದುಡಿಯುವ ಅರವಿಂದ್‌ ಕೇಜ್ರಿವಾಲ್‌ ಜೀ ಅವರನ್ನು ಗೆಲ್ಲಿಸಿದ್ದಾರೆ. ನಮಗೆ ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿಯಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. 

ಅಭಿವೃದ್ಧಿಗಾಗಿ ಕೆಲಸ ಮಾಡುವವರಿಗೆ ಜನರ ಮತ: ಆಪ್ ಸಂಸದ ರಾಘವ್ ಚಡ್ಡಾ
ಇನ್ನು, "ಬಿಜೆಪಿಗೆ ದೆಹಲಿಯ ಜನರಿಂದ ತಕ್ಕ ಉತ್ತರ ಸಿಕ್ಕಿದೆ. ಜನರು ಅಭಿವೃದ್ಧಿಗಾಗಿ ಕೆಲಸ ಮಾಡುವವರಿಗೆ ಮತ ಹಾಕಿದ್ದಾರೆ. ದೆಹಲಿಯನ್ನು ವಿಶ್ವದ ಅತ್ಯಂತ ಸುಂದರ ನಗರವನ್ನಾಗಿ ಪರಿವರ್ತಿಸುತ್ತೇವೆ’’ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸಮೀಕ್ಷಾ ವರದಿ: ಗುಜರಾತ್‌ನಲ್ಲಿ ಕಮಲ, ಅತಂತ್ರದಲ್ಲಿ ಹಿಮಾಚಲ, ದೆಹಲಿಯಲ್ಲಿ ಆಪ್ ಕಿಲ ಕಿಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್