
ದಾವಣಗೆರೆ (ಮಾ.3) : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಮಾವೇಶ ಮಾ.4ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶದ ಅಂತಿಮ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶದ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ, ಅಂದು ಮಧ್ಯಾಹ್ನ 12ಕ್ಕೆ ನಡೆಯುವ ಸಮಾವೇಶಕ್ಕೆ ದೆಹಲಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಸಿಂಗ್ ಮಾನ್ ಭಾಗವಹಿಸುವರು ಎಂದರು.
ಮಾ.4ರಂದು ದಾವಣಗೆರೆಯಲ್ಲಿ ಆಪ್ ಬೃಹತ್ ಸಮಾವೇಶ: ಕೇಜ್ರಿವಾಲ್, ಭಗವಂತ್ ಮಾನ್ ಭಾಗಿ
ಸಮಾವೇಶಕ್ಕೆ (AAP convention)ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 15-20 ಸಾವಿರ ಮಂದಿ ಪದಾಧಿಕಾರಿಗಳೇ ಆಗಮಿಸುವರು. ಸಮಾವೇಶದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಜೊತೆಗೆ ಬಹಿರಂಗ ಸಭೆ ನಡೆಯಲಿದ್ದು, ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹನಿ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಸೇರಿ ಅನೇಕ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.
190 ಕ್ಷೇತ್ರದಲ್ಲಿ ಆಪ್ ಆಕಾಂಕ್ಷಿಗಳು:
ಪಕ್ಷದ ದಾವಣಗೆರೆ ಉಸ್ತುವಾರಿ ಡಾ.ವಿಶ್ವನಾಥ ಮಾತನಾಡಿ, ವಿಧಾನಸಭೆ ಚುನಾವಣೆಗೆ 180-190 ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಲ್ಲಿ ಆಕಾಂಕ್ಷಿಗಳಿದ್ದಾರೆ. ಮತ್ತೆ ಕೆಲ ಕ್ಷೇತ್ರಕ್ಕೆ 2-3 ಮಂದಿ ಆಕಾಂಕ್ಷಿಗಳಿದ್ದಾರೆ. ಇದನ್ನೆಲ್ಲಾ ನೋಡಿದರೆ, ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಮ್ ಆದ್ಮಿ ಪಕ್ಷವು ದೆಹಲಿ, ಪಂಜಾಬ್ನಲ್ಲಿ ಅಧಿಕಾರದಲ್ಲಿದ್ದು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಜನ ಸೇವೆಯನ್ನು ರಾಜಿ ರಹಿತವಾಗಿ ಮಾಡುತ್ತಾ ಬರುತ್ತಿದೆ. ಈಗಾಗಲೇ ಪಕ್ಷಕ್ಕೆ ತಾಪಂ, ಜಿಪಂನ ಮಾಜಿ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿ ವರ್ಗ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಮುಂದಾಗಿರುವುದು ಗಮನಾರ್ಹ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ(Assembly election)ಗೆ ದಾವಣಗೆರೆ ಹೈಸ್ಕೂಲ್ ಮೈದಾನದಿಂದಲೇ ಪ್ರಚಾರ ಕಾರ್ಯ ಅಧಿಕೃತವಾಗಿ ಆಮ್ ಆದ್ಮಿ(AAP) ಪಕ್ಷವು ಆರಂಭಿಸಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಂತೆ ನಮ್ಮ ಪಕ್ಷವು ಪ್ರತಿ ಕ್ಷೇತ್ರಕ್ಕೆ 50 ಕೋಟಿ ಖರ್ಚು ಮಾಡಿ, ಚುನಾವಣೆ ಮಾಡಲ್ಲ. ತಮ್ಮದೇ ಕಾರ್ಯ ವಿಧಾನದಲ್ಲಿ ಚುನಾವಣೆ ಎದುರಿಸಲಿದೆ. ಜಿಲ್ಲೆಯ 7 ಕ್ಷೇತ್ರದಲ್ಲೂ ಪಕ್ಷದ ಆಕಾಂಕ್ಷಿಗಳಿದ್ದಾರೆ ಎಂದು ವಿವರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಎಲ್ಲಾ ರಾಜಕೀಯ ಪಕ್ಷಗಳಿಗೂ ನೆಚ್ಚಿನ ತಾಣ. ಎಲ್ಲಾ ಪಕ್ಷಗಳೂ ದೊಡ್ಡ ದೊಡ್ಡ ಸಮಾವೇಶ ನಡೆಸುತ್ತಿದ್ದು, ಇಲ್ಲಿಂದಲೇ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಕ್ರಿಯೆ ಆರಂಭಿಸಲಿದೆ. ಚಳವಳಿ, ಹೋರಾಟ, ರಾಜಕೀಯ ಪಕ್ಷಗಳು, ನಾಯಕರಿಗೆ ದಾವಣಗೆರೆ ಅದೃಷ್ಟದ ನೆಲ. ಈ ಕಾರಣಕ್ಕೆ ನಮ್ಮ ಮನವಿ ಮೇರೆಗೆ ಕೇಜ್ರಿವಾಲ್ ಇಲ್ಲಿಂದನೇ ನಮ್ಮ ಪಕ್ಷದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವರು ಎಂದರು.
ಎಎಪಿ ಸೇರಿ ಮನವರಿಕೆ ಆಗಿ ಬಿಜೆಪಿಗೆ ಬಂದಿದ್ದೀನಿ: ಭಾಸ್ಕರ್ ರಾವ್
ಆಮ್ ಆದ್ಮಿ ಪಕ್ಷದ ಡಾ.ಕಂಚಿಕೆರೆ ಜಯಣ್ಣ, ರುದ್ರಯ್ಯ ನವಿಲೆ ಹಿರೇಮಠ, ರಾಜಶೇಖರ, ಇಂದುಧರ ಕೂಲಂಬಿ, ಗೋವಿಂದಪ್ಪ, ಶ್ರೀಧರ ಪಾಟೀಲ ಇತರರಿದ್ದರು.
ಪಕ್ಷವನ್ನು ಬದಲಾವಣೆ ಮಾಡಿದರೆ, ಅದೃಷ್ಟವೂ ಬದಲಾಗುವುದಿಲ್ಲ. ಪ್ರಾಮಾಣಿಕರಿಗೆ ಅವಕಾಶ ನೀಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ, ರಾಜಕಾರಣಕ್ಕೂ ಅರ್ಥ ಬರುತ್ತದೆ. ಆಮ್ ಆದ್ಮಿ ಪಕ್ಷಕ್ಕೆ ಜಿಪಂ, ತಾಪಂ ಮಾಜಿ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆಪ್ ಸ್ಪರ್ಧಿಸುವ ಜೊತೆಗೆ ಉತ್ತಮ ಫಲಿತಾಂಶವನ್ನೂ ತರಲಿದೆ. ಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿಮಾ.10ರೊಳಗಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈಗಾಗಲೇ 190 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ.
ವಿಜಯ ಶರ್ಮಾ, ಆಪ್ ರಾಜ್ಯ ಉಪಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.