ಚುನಾವಣೆ ಗೆಲ್ಲಲು ಬಿಜೆಪಿಯ 3000 ವಿಸ್ತಾರಕರ ಪಡೆ ಸಿದ್ಧ

By Kannadaprabha NewsFirst Published Jan 4, 2023, 9:51 AM IST
Highlights

2024ರ ಲೋಕಸಭೆ ಚುನಾವಣೆ ಹಾಗೂ ಅದಕ್ಕೆ ಮುನ್ನ ನಡೆಯುವ ಕರ್ನಾಟಕ ಸೇರಿ 9 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ದೇಶಾದ್ಯಂತ 3000 ವಿಸ್ತಾರಕರನ್ನು ನಿಯೋಜನೆ ಮಾಡಲು ನಿರ್ಧರಿಸಿದೆ.

ನವದೆಹಲಿ: 2024ರ ಲೋಕಸಭೆ ಚುನಾವಣೆ ಹಾಗೂ ಅದಕ್ಕೆ ಮುನ್ನ ನಡೆಯುವ ಕರ್ನಾಟಕ ಸೇರಿ 9 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ದೇಶಾದ್ಯಂತ 3000 ವಿಸ್ತಾರಕರನ್ನು ನಿಯೋಜನೆ ಮಾಡಲು ನಿರ್ಧರಿಸಿದೆ. ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಈ ವಿಸ್ತಾರಕರ ಪಡೆ ಕಾರ್ಯ ನಿರ್ವಹಿಸಲಿದ್ದು, ಪಕ್ಷದ ಕಣ್ಣು-ಕಿವಿಯಂತೆ ಕೆಲಸ ಮಾಡಲಿದೆ. ಪಕ್ಷದ ನಾಯಕರಿಗೆ ತಳಮಟ್ಟದ ಮಾಹಿತಿಯನ್ನು ತಲುಪಿಸುವ ಮೂಲಕ ಚುನಾವಣೆ ಗೆಲ್ಲಿಸುವ ಹೊಣೆ ಹೊತ್ತುಕೊಳ್ಳಲಿದೆ.

ವಿಸ್ತಾರಕರ ಕೆಲಸ ಏನು?

ಜನರೊಂದಿಗೆ ಸಮಾಲೋಚನೆ. ಜನರಿಗೆ ಸರ್ಕಾರದ ಯೋಜನೆ ಸಿದ್ಧಾಂತಗಳ ಮನವರಿಕೆ ಯತ್ನ
ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ತಳಮಟ್ಟದಿಂದಲೇ ಪಕ್ಷದ ಬಲವರ್ಧನೆ
ತಳಮಟ್ಟದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ಕೇಂದ್ರ ನಾಯಕರಿಗೆ ಮಾಹಿತಿ, ಅದಕ್ಕೆ ತಕ್ಕಂತೆ ರಣತಂತ್ರ

ವಿಸ್ತಾರಕರು ಜನರ ಜತೆ ಸಮಾಲೋಚನೆ ನಡೆಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಪಸರಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಪಕ್ಷದ ಗೆಲುವಿನ ಯಶಸ್ಸಿಗೆ ಈ ವಿಸ್ತಾರಕರು ಪ್ರಮುಖರು ಎಂದು ಪಕ್ಷ ನಂಬಿದೆ. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ (Union Home Minister) ಅಮಿತ್‌ ಶಾ (Amit Shah) ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ‘ದೀನ್‌ದಯಾಳ್‌ ಉಪಾಧ್ಯಾಯ (Deen Dayal Upadhyaya) ವಿಸ್ತಾರಕ ಯೋಜನೆ’ಯನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡಿದ್ದರು.

ಬಿಜೆಪಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ನಂದೀಶ್‌

ಯಾರು ಈ ವಿಸ್ತಾರಕರು?:

ಬಿಜೆಪಿಯಲ್ಲಿ ಹಲವು ದಶಕಗಳ ಕಾಲ ಕೆಲಸ ಮಾಡಿದವರು ಅಥವಾ ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದಲ್ಲಿ ಸಕ್ರಿಯರಾಗಿರುವವರು ವಿಸ್ತಾರಕರಾಗಿ ನೇಮಕವಾಗುತ್ತಾರೆ. ಬೂತ್‌ (Booth level)ಮಟ್ಟದಲ್ಲಿ ಬಿಜೆಪಿಯನ್ನು ಬಲಪಡಿಸಲು ಇವರು ಕಾರ್ಯನಿರ್ವಹಿಸುತ್ತಾರೆ. ವಿಸ್ತಾರಕ ಹೊಣೆ ವಹಿಸಿಕೊಂಡ ಬಳಿಕ ಪೂರ್ಣಾವಧಿಗೆ ಬಿಜೆಪಿ ಕಾರ್ಯಕರ್ತರಾಗುತ್ತಾರೆ. ಸ್ಥಳೀಯ ಬಿಜೆಪಿ ಘಟಕದ ಜತೆ ಅತ್ಯಂತ ನಿಕಟವಾಗಿ ಕೆಲಸ ಮಾಡಿ, ಚುನಾವಣೆಗೆ ಮೊದಲು ತಳಮಟ್ಟದ ವರದಿಯನ್ನು ಕೊಡುತ್ತಾರೆ. ಪಕ್ಷದ ಕಣ್ಣು ಕಿವಿಯಂತೆ ಇವರು ಇರಲಿದ್ದಾರೆ. ತಳಮಟ್ಟದಿಂದ ಇವರು ನೀಡುವ ಅಭಿಪ್ರಾಯಗಳನ್ನು ಪಕ್ಷದ ನಾಯಕರು ವಿವಿಧ ಮೂಲಗಳಿಂದ ಬರುವ ಮಾಹಿತಿ ಜತೆ ತುಲನೆ ಮಾಡುತ್ತಾರೆ. ತೆಲಂಗಾಣದ 119 ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ವಿಸ್ತಾರಕರನ್ನು ನಿಯೋಜನೆ ಮಾಡಲಾಗಿದೆ.

ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಗೌರ್ನಮೆಂಟ್‌: ಸಲೀಂ ಅಹ್ಮದ್

ನಿಯೋಜನೆ ಹೇಗೆ?:

ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಹೇಗಿದೆ ಎಂದು ವರ್ಗೀಕರಣ ಮಾಡಲಾಗುತ್ತದೆ. ಗೆಲ್ಲುತ್ತದೆ, ದುರ್ಬಲವಾಗಿದೆ ಎಂಬ ವರದಿಯನ್ನು ಸಿದ್ಧಪಡಿಸಿ ಬಳಿಕ ವಿಸ್ತಾರಕರು ಯಾವ ಕ್ಷೇತ್ರಕ್ಕೆ ತೆರಳಬೇಕು ಎಂದು ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ.
 

click me!