
ಬೆಂಗಳೂರು (ಮಾ.20): ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿಗಳ ಆರ್ಥಿಕ ಸಹಾಯಧನವನ್ನು 2 ವರ್ಷಗಳವರೆಗೆ ನೀಡುವುದು ಕಾಂಗ್ರೆಸ್ನ 4ನೇ ಗ್ಯಾರಂಟಿಯಾಗಿ ಘೋಷಣೆ ಆಗಲಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಜೊತೆಗೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂಪಾಯಿಗಳ ನಿರುದ್ಯೋಗ ಭತ್ಯೆ 2 ವರ್ಷಗಳವರೆಗೆ ನೀಡುವ ಕುರಿತು ಕಾಂಗ್ರೆಸ್ 4ನೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಲಾಗುವುದು ಎಂದು ಮಾಹಿತಿಯನ್ನು ನಿಡಿದ್ದಾರೆ.
ರಾಹುಲ್ ಕರ್ನಾಟಕ ಪ್ರವಾಸ ಬಳಿಕ ಕಾಂಗ್ರೆಸ್ ಪಟ್ಟಿ ಬಿಡುಗಡೆ: ಡಿಕೆಶಿ
ರಾಜ್ಯದ ಹೊಲಸು ರಾಜಕಾರಣದ ಮೇಲೆ ಆಸಕ್ತಿಯಿಲ್ಲ: ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯೇ ಇಲ್ಲ. ಈ ಹೊಲಸು ಬಿಜೆಪಿ ಸರ್ಕಾರದ ಆಡಳಿತ ನೋಡಿದ ಮೇಲೆ ಭ್ರಮೆ ಬಂದಿದೆ. ಏನಪ್ಪ ಇದು ಇಂತಹ ಹೊಲಸು ವ್ಯವಸ್ಥೆ ಬಂದು ಬಿಟ್ಟಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಕಮಿಷನ್ ಕೊಟ್ಟು ಗ್ರ್ಯಾಂಡ್ ತರೊದು ನೋಡಿದರೆ ಅಸಹ್ಯ ಅನಿಸುತ್ತದೆ. ಅಡಳಿತ ಪಕ್ಷದ ಶಾಸಕರೆ ಕಮಿಷನ್ ಕೊಡುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಇಲ್ಲಿ ರಾಜಕಾರಣ ಮಾಡಬೇಕು ಅನಿಸುತ್ತದೆಯೇ? ಬೇಡವಾ ನೀವೆ ಹೇಳಿ ಎಂದು ತಿಳಿಸಿದರು.
ಕೋಲಾರ ಹೊಸ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ವ್ಯರ್ಥ: ಸಿದ್ದರಾಮಯ್ಯ ಅವರು ಕೋಲಾರದ ಬಗ್ಗೆ ಚರ್ಚೆಯೇ ಮಾಡಿಲ್ಲ ಎಂದು ಕಾಣಿಸುತ್ತದೆ. ಕೋಲಾರದಿಂದ ನಿಲ್ಲಬಾರದು ಎಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯಗೆ ಸೂಚನೆ ಮಾಡಿಲ್ಲ. ಸಿದ್ದರಾಮಯ್ಯ ಎಲ್ಲೇ ನಿಂತರೂ ಪಕ್ಷ ಮನ್ನಣೆ ನೀಡಲಿದೆ. ಮಾಹಿತಿಗಳನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಹೊಸ ಕ್ಷೇತ್ರ ಆದ್ರೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಪ್ರಚಾರಕ್ಕೆ ಅಲ್ಲೇ ಇರಬೇಕಾಗುತ್ತದೆ ಎಂಬ ದೃಷ್ಟಿಯಿಂದ ಕೆಲವರು ಸಲಹೆ ಕೊಟ್ಟಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ನಿಲ್ಲೋದು ಬೇಡ ಎಂದು ಯಾರು ಹೇಳಿಲ್ಲ, ಹೇಳುವುದು ಇಲ್ಲ ಎಂದರು.
ಸಿದ್ದರಾಮಯ್ಯ ಎಲ್ಲೇ ಟಿಕೆಟ್ ಕೇಳಿದರೂ ಕೊಡುತ್ತಾರೆ: ರಾಜ್ಯದಲ್ಲಿ ಸಿದ್ದರಾಮಯ್ಯ ಎಲ್ಲಿ ಕೇಳಿದರೂ ಅಲ್ಲಿ ಟಿಕೆಟ್ ಕೊಡುತ್ತಾರೆ. ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಇಡೀ ಜಿಲ್ಲೆಯ ವಾತಾವರಣ ಚೆನ್ನಾಗಿದೆ. ಇನ್ನು ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ವಿಚಾರದ ಬಗ್ಗೆ ಎಲ್ಲಿಯೂ ಚರ್ಚೆಯನ್ನು ಮಾಡಿಲ್ಲ. ಅನಾವಶ್ಯಕ ಗೊಂದಲಕ್ಕೆ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ಅವರು, ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಮಾಹಿತಿ ನೀಡಿದರು.
ಹಿಂದಿ ಹೇರಿಕೆಗೆ ಕನ್ನಡಿಗರು ಬಗ್ಗುವುದಿಲ್ಲ: ರಾಹುಲ್ ಗಾಂಧಿ ಬರುವುದರಿಂದ ಚುನಾವಣೆಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿರುವುದು ನಮಗಲ್ಲ. ಪ್ರಧಾನಿ ಮೋದಿ, ಅಮಿಶ್ ಶಾ ಅವರಿಗೆ ಹೀಗೆ ಹೇಳಿದ್ದಾರೆ. ಅವರಿಗೆ ಕನ್ನಡ ಬರುತ್ತಾ, ನಡ್ಡಾ ಅವರಿಗೆ ಕನ್ನಡ ಬರುತ್ತಾ. ಹಿಂದಿ ಹೇರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಕನ್ನಡಿಗರು ಸ್ವಾಭಿಮಾನಿಗಳು, ನಿಮ್ಮ ಮಾತಿಗೆ ಮರಳು ಆಗುವುದಿಲ್ಲ. ನಿಮ್ಮ ಪೊಳ್ಳು ಭರವಸೆ ಇದೆ ಅಲ್ವ, ಸುಳ್ಳು ಹೇಳಿ ಅಧಿಕಾರ ಗಿಟ್ಟಿಸುವುದು ಇವೆಲ್ಲಾ ಬಯಲಾಗಿದೆ. ಇದು ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.