137 ‘ಕಾಂಗ್ರೆಸ್‌’ ಅಭ್ಯರ್ಥಿ ಪಟ್ಟಿ ರೆಡಿ: 67 ಹಾಲಿ ಶಾಸಕರಿಗೆ ಟಿಕೆಟ್‌ಗೆ ಒಲವು

By Kannadaprabha NewsFirst Published Feb 3, 2023, 6:22 AM IST
Highlights

ರಾಜ್ಯ ಕಾಂಗ್ರೆಸ್‌ ನಾಯಕರ ಎರಡು ದಿನಗಳ ಸುದೀರ್ಘ ಕಸರತ್ತಿನ ಬಳಿಕ 224 ಕ್ಷೇತ್ರಗಳಿಗೂ ಸಂಭವನೀಯರ ಪಟ್ಟಿಅಂತಿಮಗೊಂಡಿದ್ದು, ಎಐಸಿಸಿ ಸ್ಕ್ರೀನಿಂಗ್‌ ಸಮಿತಿ ರಚನೆ ಬಳಿಕ ಹೈಕಮಾಂಡ್‌ಗೆ ಸಂಭವನೀಯರ ಪಟ್ಟಿ ರವಾನೆಯಾಗಲಿದೆ. 

ಬೆಂಗಳೂರು (ಫೆ.03): ರಾಜ್ಯ ಕಾಂಗ್ರೆಸ್‌ ನಾಯಕರ ಎರಡು ದಿನಗಳ ಸುದೀರ್ಘ ಕಸರತ್ತಿನ ಬಳಿಕ 224 ಕ್ಷೇತ್ರಗಳಿಗೂ ಸಂಭವನೀಯರ ಪಟ್ಟಿಅಂತಿಮಗೊಂಡಿದ್ದು, ಎಐಸಿಸಿ ಸ್ಕ್ರೀನಿಂಗ್‌ ಸಮಿತಿ ರಚನೆ ಬಳಿಕ ಹೈಕಮಾಂಡ್‌ಗೆ ಸಂಭವನೀಯರ ಪಟ್ಟಿ ರವಾನೆಯಾಗಲಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದು ಫೆ.10ರಿಂದ 15ರ ಒಳಗಾಗಿ 120ರಿಂದ 140 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಗುರುವಾರ ನಡೆದ ಸರಣಿ ಸಭೆಗಳ ಬಳಿಕ ಸುಮಾರು 137 ಕ್ಷೇತ್ರಗಳಿಗೆ ಒಂದೇ ಅಭ್ಯರ್ಥಿಯ ಹೆಸರನ್ನು ರಾಜ್ಯ ನಾಯಕರು ಅಖೈರುಗೊಳಿಸಿದ್ದಾರೆ. ಈ ಪೈಕಿ 67 ಮಂದಿ ಹಾಲಿ ಕಾಂಗ್ರೆಸ್‌ ಶಾಸಕರು. ಪಕ್ಷಕ್ಕೆ ಸೇರ್ಪಡೆಯಾಗಿರುವ ಪಕ್ಷೇತರ ಶಾಸಕರಾದ ಶರತ್‌ ಬಚ್ಚೇಗೌಡ, ನಾಗೇಶ್‌ ಹಾಗೂ ಮಾಜಿ ಶಾಸಕ ವಿ.ಎಸ್‌.ಪಾಟಿಲ್‌ ಅವರಿಗೂ ಟಿಕೆಟ್‌ ಖಾತ್ರಿ ಮಾಡಲಾಗಿದೆ. 

ಉಳಿದಂತೆ ಹೆಚ್ಚು ಪೈಪೋಟಿ ಇಲ್ಲದ 67 ಕ್ಷೇತ್ರಗಳಿಗೆ ಒಂದೇ ಹೆಸರನ್ನು ಅಂತಿಮಗೊಳಿಸಿದ್ದು, ಒಟ್ಟು 137 ಕ್ಷೇತ್ರಗಳಿಗೆ ಟಿಕೆಟ್‌ ಪಡೆಯಲು ಒಬ್ಬರ ಹೆಸರನ್ನೇ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕಾಂಗ್ರೆಸ್‌ ಹಾಲಿ ಶಾಸಕರ ಪೈಕಿ ಕುಂದಗೋಳದ ಕುಸುಮಾ ಶಿವಳ್ಳಿ, ಲಿಂಗಸೂಗೂರಿನ ಡಿ.ಎಸ್‌.ಹುಲಗೇರಿ ಅವರ ಬಗ್ಗೆ ಸರ್ವೇ ವರದಿಯಲ್ಲಿ ನಕಾರಾತ್ಮಕ ವರದಿ ಬಂದಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ಟಿಕೆಟ್‌ ಅಂತಿಮಗೊಳಿಸುವ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. 

ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್‌: ಸಿ.ಟಿ.​ರವಿ ಆರೋಪ

ಇನ್ನು ಪಾವಗಡ ಶಾಸಕ ವೆಂಕಟರಮಣಪ್ಪ ಹಾಗೂ ಅಫ್ಜಲ್‌ಪುರದ ಎಂ.ವೈ.ಪಾಟೀಲ್‌ ಅವರು ತಮ್ಮ ಪುತ್ರರಿಗೆ ಟಿಕೆಟ್‌ ನೀಡುವಂತೆ ಸಲ್ಲಿಸಿರುವ ಬೇಡಿಕೆಯ ಬಗ್ಗೆಯೂ ಹೈಕಮಾಂಡ್‌ ನಿರ್ಧಾರ ಮಾಡಬೇಕು ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಬಹುತೇಕ ಕ್ಷೇತ್ರಗಳಿಗೆ ಇಬ್ಬರ ಹೆಸರು, ಕೆಲ ಕ್ಷೇತ್ರಗಳಿಗೆ ಮೂರರಿಂದ ನಾಲ್ಕು ಹೆಸರು ಹಾಗೂ ಬೆರಳೆಣಿಕೆಯಷ್ಟುಕ್ಷೇತ್ರಗಳಿಗೆ ಐದು ಮಂದಿ ಸಂಭವನೀಯರ ಹೆಸರಿರುವ ಪ್ಯಾನೆಲ್‌ ಅನ್ನು ಸಿದ್ಧಪಡಿಸಲಾಗಿದೆ.

ರಚನೆಯಾಗಬೇಕಿರುವ ಸ್ಕ್ರೀನಿಂಗ್‌ ಕಮಿಟಿ: ತನ್ಮೂಲಕ ಎಲ್ಲ 224 ಕ್ಷೇತ್ರಗಳಿಗೆ ಸಂಭವನೀಯರ ಪಟ್ಟಿಸಿದ್ಧಪಡಿಸುವ ರಾಜ್ಯ ಕಾಂಗ್ರೆಸ್‌ ನಾಯಕರ ಪ್ರಕ್ರಿಯೆ ಅಂತಿಮಗೊಂಡಂತಾಗಿದೆ. ಈ ಪಟ್ಟಿಯನ್ನು ಕೆಪಿಸಿಸಿ ಸಿದ್ಧಪಡಿಸಿಕೊಂಡಿದೆ. ಆದರೆ, ಈ ಪಟ್ಟಿತಕ್ಷಣಕ್ಕೆ ಹೈಕಮಾಂಡ್‌ಗೆ ರವಾನೆಯಾಗುವುದಿಲ್ಲ. ಏಕೆಂದರೆ, ರಾಜ್ಯ ನಾಯಕರ ಈ ಪಟ್ಟಿಯು ಸ್ಕ್ರೀನಿಂಗ್‌ ಕಮಿಟಿಗೆ ರವಾನೆಯಾಗಬೇಕಿದೆ. ಆದರೆ, ಹೈಕಮಾಂಡ್‌ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಇನ್ನೂ ಸ್ಕ್ರೀನಿಂಗ್‌ ಕಮಿಟಿಯನ್ನು ರಚಿಸಿಲ್ಲ. ಸುಮಾರು ಇಬ್ಬರಿಂದ ಮೂರು ಜನರಿರುವ ಸ್ಕ್ರೀನಿಂಗ್‌ ಕಮಿಟಿಯನ್ನು ಹೈಕಮಾಂಡ್‌ ಇನ್ನೂ ರಚಿಸಬೇಕಿದೆ. ಉನ್ನತ ಮೂಲಗಳ ಪ್ರಕಾರ ಈ ವಾರಾಂತ್ಯದ ವೇಳೆಗೆ ಹೈಕಮಾಂಡ್‌ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಸ್ಕ್ರೀನಿಂಗ್‌ ಕಮಿಟಿಯನ್ನು ರಚನೆ ಮಾಡಲಿದೆ. ಈ ಕಮಿಟಿ ರಚನೆಯಾದ ನಂತರ ಕೆಪಿಸಿಸಿಯು ಎಲ್ಲ 224 ಕ್ಷೇತ್ರಗಳ ಸಂಭನೀಯರ ಪಟ್ಟಿಯನ್ನು ಸ್ಕ್ರೀನಿಂಗ್‌ ಕಮಿಟಿಗೆ ರವಾನೆ ಮಾಡಲಿದೆ.

ಗುರುವಾರ ದಿನವಿಡೀ ಪ್ರಹಸನ: ಗುರುವಾರ ಬೆಳಗ್ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ 54 ಮಂದಿ ಸದಸ್ಯರಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು. ನಗರದ ಹೊರವಲಯದ ಖಾಸಗಿ ರೆಸಾರ್ಚ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಚುನಾವಣಾ ಸಮಿತಿ ಸದಸ್ಯರಿಂದ ಲಿಖಿತ ಅಭಿಪ್ರಾಯಗಳನ್ನು ಕಲೆ ಹಾಕಲಾಯಿತು. ಬಳಿಕ ಖಾಸಗಿ ಹೋಟೆಲ್‌ನಲ್ಲಿ ಡಿ.ಕೆ.ಶಿವಕುಮಾರ್‌, ಸುರ್ಜೇವಾಲಾ ಹಾಗೂ ಸಿದ್ದರಾಮಯ್ಯ ಅವರು ಗೌಪ್ಯ ಸಭೆ ನಡೆಸಿದರು. ಈ ವೇಳೆ ಹೈಕಮಾಂಡ್‌ಗೆ ಸಲ್ಲಿಸುವ 224 ಕ್ಷೇತ್ರಗಳ ಸಂಭವನೀಯರ ಪಟ್ಟಿಯನ್ನೂ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಹೋಟೆಲ್‌ನಲ್ಲಿ ನಡೆದ ಗೌಪ್ಯಸಭೆಯಲ್ಲಿ ಸುರ್ಜೇವಾಲಾ, ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಬ್ಲಾಕ್‌ ಸಮಿತಿಗಳ ವರದಿ, ಚುನಾವಣಾ ಸಮೀಕ್ಷಾ ವರದಿ, ಕೆಪಿಸಿಸಿ ಕಾರ್ಯಾಧ್ಯಕ್ಷರು ನೀಡಿದ್ದ ವರದಿ ಹಾಗೂ ರಾಜ್ಯ ಚುನಾವಣಾ ಸಮಿತಿಯ 54 ಮಂದಿ ಸದಸ್ಯರ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇದಕ್ಕೂ ಮೊದಲು ಖಾಸಗಿ ರೆಸಾರ್ಚ್‌ನಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಧ್ರುವನಾರಾಯಣ, ಸತೀಶ್‌ ಜಾರಕಿಹೊಳಿ ಸೇರಿ ಹಲವರು ಭಾಗವಹಿಸಿದ್ದರು.

ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ಫೆ.15ರೊಳಗೆ 140 ಕ್ಷೇತ್ರದ ಮೊದಲ ಪಟ್ಟಿ ಘೋಷಣೆ?: ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಸಂಭಾವ್ಯರ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ಸಿಗರು ಅಂತಿಮಗೊಳಿಸಿದ್ದಾರೆ. ಈ ಪಟ್ಟಿಯನ್ನು ಪರಿಶೀಲಿಸಿ ಹೈಕಮಾಂಡ್‌ಗೆ ಸ್ಕ್ರೀನಿಂಗ್‌ ಸಮಿತಿ ಶಿಫಾರಸು ಮಾಡಬೇಕು. ಆದರೆ ರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ ಸ್ಕ್ರೀನಿಂಗ್‌ ಕಮಿಟಿಯನ್ನೇ ರಚಿಸಿಲ್ಲ. ವಾರಾಂತ್ಯದೊಳಗೆ ಆ ಸಮಿತಿ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಫೆ.10ರಿಂದ 15ರ ಒಳಗಾಗಿ 120ರಿಂದ 140 ಕ್ಷೇತ್ರಗಳ ಮೊದಲ ಪಟ್ಟಿಪ್ರಕಟಗೊಳ್ಳುವ ಸಾಧ್ಯತೆ ಇದೆ.

click me!