
ಬೆಂಗಳೂರು(ಫೆ.06): ‘ರಾಜ್ಯ ಕಾಂಗ್ರೆಸ್ನಿಂದ ಪ್ರಸ್ತುತ ಘೋಷಿಸಿರುವ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳ ಜೊತೆಗೆ ಜನರಿಗೆ ವೈಯಕ್ತಿಕವಾಗಿ ಅನುಕೂಲ ಮಾಡಿಕೊಡುವ ಇನ್ನೂ 3 ಪ್ರಮುಖ ಗ್ಯಾರಂಟಿ ಘೋಷಣೆಗಳನ್ನು ಮಾಡುತ್ತೇವೆ. ಜತೆಗೆ ಘೋಷಣೆಗಳನ್ನು ಈಡೇರಿಸುವ ಭರವಸೆ ನೀಡಲು ಖುದ್ದು ನನ್ನ ಹಾಗೂ ಸಿದ್ದರಾಮಯ್ಯ ಅವರ ಸಹಿ ಇರುವ ಒಂದು ಕೋಟಿ ಗ್ಯಾರಂಟಿ ಪತ್ರಗಳನ್ನು ಮನೆ-ಮನೆಗೂ ತಲುಪಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಗ್ಯಾರಂಟಿ ಪತ್ರಗಳಲ್ಲಿ ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಮನೆಯೊಡತಿಗೆ ಮಾಸಿಕ 2 ಸಾವಿರ ರು. (ಗೃಹ ಲಕ್ಷ್ಮೀ) ಸೇರಿದಂತೆ ನಾವು ಮಾಡಿರುವ ಘೋಷಣೆಗಳನ್ನು ಈಡೇರಿಸುತ್ತೇವೆ. ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಮಾತು ಕೊಡಲಿದ್ದೇವೆ ಎಂದಿದ್ದಾರೆ.
371(ಜೆ) ಕಲಂ ತಿದ್ದುಪಡಿಗೆ ಎಲ್.ಕೆ. ಅಡ್ವಾನಿ ವಿರೋಧಿಸಿದ್ದರು: ಸಿದ್ದರಾಮಯ್ಯ
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಮ್ಮ ಸರ್ಕಾರ ಮಾಡಿರುವ ಘೋಷಣೆಗಳಿಂದ ಬಿಜೆಪಿಯವರು ಆತಂಕಕ್ಕೆ ಒಳಗಾಗಿದ್ದಾರೆ. ಕೊರೋನಾ ಅವಧಿ ಹಾಗೂ ಜನವಿರೋಧಿ ಸರ್ಕಾರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಮೇಲಕ್ಕೆತ್ತಲು ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಘೋಷಿಸಿದೆ. ಇವು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಆದರೂ, 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಹಾಗೂ ನಾಲ್ಕು ಸರ್ಕಾರಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ನಾನು ಸೇರಿ ಘೋಷಣೆಗಳನ್ನು ಈಡೇರಿಸುತ್ತೇವೆ. ಈ ಬಗ್ಗೆ ಜನರಿಗೂ ನಂಬಿಕೆಯಿದೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಮೂರು ಗ್ಯಾರಂಟಿ ಯೋಜನೆ:
ಪ್ರಸ್ತುತ ಘೋಷಿಸಿರುವ ಎರಡು ಯೋಜನೆಗಳಂತೆ ನೇರವಾಗಿ ಜನರಿಗೆ ವೈಯಕ್ತಿಕವಾಗಿ ಅನುಕೂಲವಾಗುವಂತಹ ಇನ್ನೂ ಮೂರು ಯೋಜನೆಗಳನ್ನು ಘೋಷಿಸುತ್ತೇವೆ. ಜತೆಗೆ ಪ್ರತಿ ಮನೆ-ಮನೆಗೂ ನನ್ನ ಹಾಗೂ ಸಿದ್ದರಾಮಯ್ಯ ಅವರ ಸಹಿ ಇರುವ ಗ್ಯಾರಂಟಿ ಪತ್ರಗಳನ್ನು ತಲುಪಿಸುತ್ತೇವೆ. ಹೀಗಾಗಿ ನಮ್ಮ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೀತಾಮಾತೆಗೆ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನು ಯಾವ ಲೆಕ್ಕ : ಲಕ್ಷ್ಮೀ ಹೆಬ್ಬಾಳ್ಕರ್
ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ:
ಇನ್ನು ಪರಮೇಶ್ವರ್ ಅವರು ಚುನಾವಣಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರು ರಾಜೀನಾಮೆಯನ್ನೂ ನೀಡಿಲ್ಲ. ಅವರಿಗೆ ಅಸಮಾಧಾನವೂ ಇಲ್ಲ. ಅವರ ನೇತೃತ್ವದಲ್ಲೇ ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಸಿಂಗಾಪುರಕ್ಕೆ ತಂಡ ತೆರಳುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಪ್ರಣಾಳಿಕೆ ನೀಡುವಾಗ ಬೆಂಗಳೂರಿಗೆ ಬಂದಿರುವ ಕಳಂಕ ತೊಡದು ಹಾಕುವ ಪ್ರಯತ್ನ ಮಾಡುತ್ತೇವೆ. ದೇಶ ಕರ್ನಾಟಕದ ಮೇಲೆ ಅವಲಂಬಿತವಾಗಿದ್ದು ಹೆಚ್ಚಿನ ಆದಾಯ ರಾಜ್ಯದಿಂದಲೇ ಹೋಗುತ್ತಿದೆ. ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಆಗ ಗ್ರಾಮೀಣ ಪ್ರದೇಶದ ಭಾಗಗಳ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು. ಅದರ ಹೊಣೆಯನ್ನೂ ಪರಮೇಶ್ವರ್ ಅವರಿಗೆ ವಹಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.