
ಪ್ಯಾರಿಸ್: ಒಲಿಂಪಿಕ್ಸ್ ಚಿನ್ನದ ಪದಕ 529 ಗ್ರಾಂ ತೂಕವಿರುತ್ತದೆ. ಆ ಪದಕವನ್ನು ಗೆದ್ದು ಇತಿಹಾಸ ಬರೆಯಲು ಅಣಿಯಾಗಿದ್ದ ವಿನೇಶ್ ಫೋಗಟ್ಗೆ ಅಡ್ಡಿಯಾಗಿದ್ದು 100 ಗ್ರಾಂ!. ಫೈನಲ್ ದಿನ ಬೆಳಗ್ಗೆ ನಡೆಸಿದ ತೂಕ ಹಾಕುವ ಪ್ರಕ್ರಿಯೆಯಲ್ಲಿ ವಿನೇಶ್ ನಿಗದಿತ ತೂಕಕ್ಕಿಂತ 100+ ಗ್ರಾಂ ಹೆಚ್ಚಿಗೆ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು. ಮೊದಲ ಸುತ್ತಿನಿಂದ ಅವರು ಗೆದ್ದ ಎಲ್ಲಾ ಪಂದ್ಯಗಳ ಫಲಿತಾಂಶವೂ ಅಳಿಸಿ ಹೋಗಲಿದ್ದು, ವಿನೇಶ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಸಿ ಘಟಾನುಘಟಿ ಕುಸ್ತಿಪಟುಗಳನ್ನು ಮಣಿಸಿದ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು, ಎಲ್ಲಾ ಅಂದುಕೊಂಡಂತೆ ಆಗಿದ್ದರೇ, ವಿನೇಶ್ ಫೋಗಟ್ ಮೂಲಕ ಭಾರತಕ್ಕೆ 4ನೇ ಪದಕ ಹಾಗೂ ವಿನೇಶ್ ಪಾಲಿಗೆ ಚೊಚ್ಚಲ ಒಲಿಂಪಿಕ್ ಪದಕ ಸಿಗುತ್ತಿತ್ತು. ಆದರೆ ವಿಧಿಯ ಕೈವಾಡ ಕೇವಲ 100 ತೂಕ ಹೆಚ್ಚಳು ದೇಶದ ಹೆಮ್ಮೆಯ ಕುಸ್ತಿಪಟುವಿನ ಕನಸನ್ನೇ ನುಚ್ಚುನೂರು ಮಾಡಿದೆ. ಹೀಗಿದ್ದೂ ವಿನೇಶ್ ಫೋಗಟ್ಗೆ ಒಲಿಂಪಿಕ್ ಪದಕ ಗೆಲ್ಲಲು ಕೊನೆಯ ಅವಕಾಶವೊಂದು ಇದೆ.
ಅಮ್ಮಾ ಕ್ಷಮಿಸಿ ನಾನು ಸೋತೆ, ಕುಸ್ತಿಗೆ ವಿದಾಯ ಘೋಷಿಸಿ ಭಾವುಕರಾದ ವಿನೇಶ್ ಫೋಗಟ್!
ಹೌದು, ವಿನೇಶ್ ಫೋಗಟ್ ಇದೀಗ ತಮ್ಮನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನೆ ಮಾಡಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯಲ್ಲಿ ವಿನೇಶ್ ಫೋಗಟ್, ತಮಗೆ ಫೈನಲ್ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಹಾಗೂ ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಈ ವಿಚಾರವನ್ನು ಸ್ವತಃ ಭಾರತೀಯ ಒಲಿಂಪಿಕ್ ಸಂಸ್ಥೆ ಕೂಡಾ ಖಚಿತಪಡಿಸಿದೆ. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಕ್ರೀಡಾ ನ್ಯಾಯ ಮಂಡಳಿಯು ಫೈನಲ್ ಪಂದ್ಯವನ್ನು ನಡೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಮನವಿಯನ್ನು ಪರಿಶೀಲಿಸಿ ಇಂದು ತೀರ್ಪು ನೀಡುವುದಾಗಿ ತಿಳಿಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಹೀಗಾಗಿ ವಿನೇಶ್ ಫೋಗಟ್ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಂಟಿ ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಾಗಬೇಕಿದ್ದರೇ ಭಾರತದ ಕಡೆಯಿಂದ ಸೂಕ್ತ ವಾದ ಮಂಡನೆಯಾಗಬೇಕು. ಹೀಗಾದಲ್ಲಿ ವಿನೇಶ್ಗೆ ಒಲಿಂಪಿಕ್ ಪದಕ ಸಿಕ್ಕರೂ ಅಚ್ಚರಿಯಿಲ್ಲ.
"ವಿನೇಶ್ ಫೋಗಟ್ದೂ ತಪ್ಪಿದೆ..": ಅಚ್ಚರಿ ಹೇಳಿಕೆ ಕೊಟ್ಟ ಸೈನಾ ನೆಹ್ವಾಲ್..!
ನಿಮ್ಮೊಂದಿಗೆ ನಾವಿದ್ದೇವೆ: ಫ್ಯಾನ್ಸ್, ಸ್ಟಾರ್ಗಳಿಂದ ವಿನೇಶ್ಗೆ ಸಂದೇಶ
ಅನರ್ಹಗೊಂಡ ಕಾರಣ ಒಲಿಂಪಿಕ್ಸ್ ಪದಕ ವಂಚಿತರಾಗಿರುವ ವಿನೇಶ್ ಫೋಗಟ್ಗೆ ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ. ಅವರ ಸಾಧನೆಯನ್ನು ಕೊಂಡಾಡಿರುವ ಅಭಿಮಾನಿಗಳು, ಕಾರ್ಟೂನ್, ಪೋಸ್ಟ್, ಸ್ಟೇಟಸ್, ಸ್ಟೋರಿಗಳ ಮೂಲಕ ವಿನೇಶ್ರ ಬೆನ್ನಿಗೆ ನಿಂತಿದ್ದಾರೆ. ಪದಕ ಕೈ ತಪ್ಪಿದರೂ ನಿಮ್ಮ ಸಾಧನೆಯಿಂದ ಭಾರತವೇ ಹೆಮ್ಮೆ ಪಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ತಾರೆಯರು, ವಿವಿಧ ಕ್ರೀಡಾಪಟುಗಳು, ರಾಜಕೀಯ ನಾಯಕರು, ಖ್ಯಾತ ಉದ್ಯಮಿಗಳು ಸೇರಿ ಅನೇಕ ಗಣ್ಯರು ಸಹ ವಿನೇಶ್ಗೆ ಧೈರ್ಯ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.