
ಉಡುಪಿ (ಜ.5): ಪ್ರಧಾನಿ ನರೇಂದ್ರ ಮೋದಿಯವರು ಯುವಕರು ಕ್ರೀಡಾಸಕ್ತಿ ಬೆಳೆಸಲು ಫಿಟ್ ಇಂಡಿಯಾ, ಖೇಲೋ ಇಂಡಿಯಾ ಎಂದು ಕರೆ ನೀಡಿದ್ದು, ಅದು ಪರಿಣಾಮ ಬೀರಿದೆ. ದೇಶದಲ್ಲೀಗ ಓಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಟಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಅವರು ಗುರುವಾರ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಮಂಗಳೂರು ವಿವಿ ಆಶ್ರಯದಲ್ಲಿ ನಡೆಯುತ್ತಿರುವ 4 ದಿನಗಳ ಅಖಿಲ ಭಾರತ ಅಂತರ್ ವಿವಿ ಪುರುಷರ ವಾಲಿಬಾಲ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕವನ್ನು ದೇಶದ ಸ್ಪೋರ್ಟ್ಸ್ ಹಬ್ ಆಗಿ ರೂಪಿಸಲು ರಾಜ್ಯ ಸರ್ಕಾರ ಅಮೃತ್ ಕ್ರೀಡಾ ದತ್ತು ಯೋಜನೆಯನ್ನು ಆರಂಭಿಸಿದೆ. ಇದರಡಿ ಮುಂದಿನ ಪ್ಯಾರೀಸ್ ಓಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬಹುದಾದ 75 ಮಂದಿ ರಾಜ್ಯದ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ದಿವ್ಯಾಂಗರ ಪಾರಾಲಂಪಿಕ್ಸ್ ನಲ್ಲಿಯೂ ಭಾರತದ ಕ್ರೀಡಾಪಟುಗಳು ಹೆಚ್ಚು ಸಂಖ್ಯೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಗ್ವಾಲಿಯರ್ ನಲ್ಲಿ ದಿವ್ಯಾಂಗರಿಗಾಗಿಯೇ ಕ್ರೀಡಾ ತರಬೇತಿ ಕೇಂದ್ರ ಸಿದ್ದವಾಗಿದೆ. ದೇಶದ ಇತರ 4 ಕಡೆಗಳಲ್ಲಿಯೂ ಇಂತಹ ಕೇಂದ್ರಗಳು ಆರಂಭವಾಗಲಿವೆ ಎಂದರು. ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥರು ಅಧ್ಯಕ್ಷತೆ ವಹಿಸಿದ್ದರು.
ಎನ್ಇಪಿಯಿಂದ ಭಾರತದ ಶಿಕ್ಷಣ ನೀತಿಗೆ ಬಲ: ರಾಜ್ಯಪಾಲ ಗೆಹಲೋತ್
ಈ ಸಂದರ್ಭದಲ್ಲಿ ಭಾರತೀಯ ವಿವಿಗಳ ಸಂಘದ ಜಂಟಿ ಕಾರ್ಯದರ್ಶಿ ಬಲ್ಜಿತ್ ಸಿಂಗ್ ಶೇಖಾವಕ್, ಮುಂದಿನ ಏಶ್ಯನ್ ವಾಲಿಬಾಲ್ ಚಾಂಪಿಯನ್ ಶಿಪ್ ಭಾರತದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಗೆಹ್ಲೋಟ್
ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ಕುಲಸಚಿವ ಕಿಶೋರ್ ಕುಮಾರ್ ಸಿ.ಕೆ, ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಧರ ರಾವ್, ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. ಅದಮಾರು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ|. ರಾಘವೇಂದ್ರ ವಂದಿಸಿದರು.
ಆಸಕ್ತಿಯಿಂದ ಪಂದ್ಯ ವೀಕ್ಷಿಸಿದ ರಾಜ್ಯಪಾಲರು: ತಾವು ಶಾಲಾ ಕಾಲೇಜು ದಿನಗಳಲ್ಲಿ ಕಬಡ್ಡಿ, ವಾಲಿಬಾಲ್ ಆಟಗಾರನಾಗಿದ್ದು, ವಾಲಿಬಾಲ್ ತಂಡದ ನಾಯಕನೂ ಆಗಿದ್ದೆ ಎಂಬುದನ್ನು ನೆನಪಿಸಿಕೊಂಡ ರಾಜ್ಯಪಾಲ ಗೆಹ್ಲೋಟ್ ಅವರು ಮಂಗಳೂರು ವಿವಿ ಮತ್ತು ಪುಣೆಯ ಭಾರತಿ ವಿವಿ ತಂಡಗಳ ನಡುವೆ ನಡೆದ ಉದ್ಘಾಟನಾ ಪಂದ್ಯವನ್ನು ಆಸಕ್ತಿಯಿಂದ ವೀಕ್ಷಿಸಿ, ಕ್ರೀಡಾಪಟುಗಳ ಕೈಕುಲುಕಿ ಶುಭ ಕೋರಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.