
ನವದೆಹಲಿ(ನ.07): ಭಾರತ ಡೇವಿಸ್ ಕಪ್ ತಂಡದ ನಾಯಕ ಯಾರು ಎನ್ನುವ ವಿವಾದ ತಾರಕಕ್ಕೇರಿದೆ. ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ), ಪಾಕಿಸ್ತಾನ ವಿರುದ್ಧ ನ.29-30ರಂದು ನಡೆಯುವ ಪಂದ್ಯಕ್ಕೆ ತನ್ನ ಆಯ್ಕೆಗಾರ ರೋಹಿತ್ ರಾಜ್ಪಾಲ್ರನ್ನು ಆಡದ ನಾಯಕನನ್ನಾಗಿ ಆಯ್ಕೆ ಮಾಡಿದ ಬಳಿಕ ಮಹೇಶ್ ಭೂಪತಿ ಈಗಲೂ ತಂಡದ ನಾಯಕ ನಾನೇ ಎಂದು ಪಟ್ಟು ಹಿಡಿದಿದ್ದಾರೆ.
ಡೇವಿಸ್ ಕಪ್: ಪಾಕ್ಗೆ ತೆರಳಲಿದ್ದಾರೆ ಪೇಸ್!
ಭೂಪತಿ, ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಎಐಟಿಎ ಸೋಮವಾರ ರೋಹಿತ್ರನ್ನು ನಾಯಕನನ್ನಾಗಿ ಆಯ್ಕೆ ಮಾಡಿತು. ಆದರೆ ಸೋಮವಾರ ರಾತ್ರಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್), ಪಂದ್ಯವನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಪ್ರಕಟಣೆ ನೀಡಿತು.
ಡೇವಿಸ್ ಕಪ್: ತಟಸ್ಥ ಸ್ಥಳದಲ್ಲಿ ಇಂಡೋ-ಪಾಕ್ ಟೆನಿಸ್ ಪಂದ್ಯ
2018ರ ಡಿಸೆಂಬರ್ನಲ್ಲಿ ಭೂಪತಿ ಗುತ್ತಿಗೆ ಮುಕ್ತಾಯಗೊಂಡಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಡೆದ ಇಟಲಿ ವಿರುದ್ಧದ ಪಂದ್ಯದ ವರೆಗೂ ಅವರ ಗುತ್ತಿಗೆ ಅವಧಿ ವಿಸ್ತರಿಸಲಾಗಿತ್ತು. ಆದರೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ಬಗ್ಗೆ ಎಐಟಿಎ ಪ್ರಕಟಿಸಿಲ್ಲ. ಸದ್ಯದ ಬೆಳವಣಿಗೆ ಬಗ್ಗೆ ಭೂಪತಿ ಟ್ವೀಟ್ ಮಾಡಿದ್ದು, ‘ನಾನು ಭದ್ರತಾ ಸಮಸ್ಯೆಯಿಂದಾಗಿ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದೆ ಹೊರತು ದೇಶಕ್ಕಾಗಿ ಆಡಲು ನಿರಾಕರಿಸಿಲ್ಲ. ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸಲು ಐಟಿಎಫ್ ನಿರ್ಧರಿಸಿದ ಬಳಿಕ ಎಐಟಿಎ ನನ್ನನ್ನು ಸಂಪರ್ಕಿಸಿಲ್ಲ. ಹೀಗಾಗಿ ಈಗಲೂ ಭಾರತ ತಂಡದ ನಾಯಕ ನಾನೇ ಎಂದು ನಂಬಿದ್ದೇನೆ’ ಎಂದು ಬರೆದಿದ್ದಾರೆ.
ಮಂಗಳವಾರ ಭಾರತ ತಂಡದ ಹಿರಿಯ ಆಟಗಾರ ರೋಹನ್ ಬೋಪಣ್ಣ, ನಾಯಕತ್ವ ಬದಲಾವಣೆ ಮಾಡುವ ಮೊದಲು ಎಐಟಿಎ ಆಟಗಾರರನ್ನು ಸಂಪರ್ಕಿಸಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.