
ನವದೆಹಲಿ [ಮೇ.11]: ಕಳ್ಳತನ, ವಂಚನೆ, ಕೊಲೆ ಮುಂತಾದ ವಿಚಾರಗಳಿಗೆ ಜನರು ಪೊಲೀಸ್ ಠಾಣೆಯ ಮೆಟ್ಟಿಲೇರುವುದು ಸಾಮಾನ್ಯ. ಆದರೆ ಕೇರಳದಲ್ಲಿ ನವವಿವಾಹಿತ ಯುವಕನೊಬ್ಬ ಪತ್ನಿಯ ಹೆಸರಿನಿಂದಾಗಿ ಪೊಲೀಸ್ ದೂರು ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇರಳದ ಕಲ್ಲಿಕೋಟೆಯ ಯುವಕ ವಿಭೀಶ್ ಎಂಬಾತ ಇತ್ತೀಚೆಗೆ ವಿವಾಹವಾಗಿದ್ದಾನೆ. ಆತನು ತನ್ನ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ ಮದುವೆ ಆಹ್ವಾನ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಹ್ವಾನ ಪತ್ರಿಕೆ ವೈರಲ್ ಆಗಲು ಕಾರಣವೊಂದಿದೆ. ಅದೇನೆಂದರೆ ವಧುವಿನ ಹೆಸರು! ಹೆಸರಲ್ಲೇನಿದೆ ಅಂತಿರಾ? ಆಕೆಯ ಹೆಸರು- ಧ್ಯಾನೂರಹಣಗಿತಿ [Dhyanoorahangithy]- ಅಪರೂಪ ಹಾಗೂ ವಿಭಿನ್ನವಾಗಿದೆ.
ವಧುವಿನ ಹೆಸರನ್ನು ಸರಿಯಾಗಿ ಉಚ್ಚರಿಸುವವರಿಗೆ ಮಾತ್ರ ಮದುವೆಗೆ ಆಹ್ವಾನವೆಂಬ ಒಕ್ಕಣೆಯೊಂದಿಗೆ ಕೆಲವರು ಅಹ್ವಾನ ಪತ್ರಿಕೆಯನ್ನು ವೈರಲ್ ಮಾಡಿದ್ದಾರೆ. ಅದಾದ ಬಳಿಕ, ವಿಭೀಶ್ ಹಾಗೂ ಆತನ ತಂದೆಯ ಫೋನ್ಗೆ ಬಿಡುವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುತೂಹಲದಿಂದ ಫೋನ್ ಮಾಡಿ ಕೆಲವರು ವಿಚಾರಿಸಿದರೆ, ಇನ್ನೂ ಹಲವರು ಹೆಸರಿನ ಅರ್ಥವನ್ನು ತಿಳಿಯಲು ಕರೆ ಮಾಡಲಾರಂಭಿಸಿದ್ದಾರೆ. ಆದರೆ ಕೆಲವರು ಲೇವಡಿ/ಬೈಗುಳಗಳ ಮಟ್ಟಿಗೆ ಇಳಿದಿದ್ದಾರೆ. ಇವುಗಳಿಂದ ಸುಸ್ತಾದ ವಿಭೀಶ್ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಧ್ಯಾನೂರಹಣಗಿತಿ ಪ್ರಕಾರ, ಆಕೆಯ ತಂದೆ ಸಾಹಿತ್ಯ ಪ್ರೇಮಿಯಾಗಿದ್ದು, ತನ್ನ ಮಗಳಿಗೆ ವಿಭಿನ್ನ ಹೆಸರಿಡುವ ಉದ್ದೇಶದಿಂದ ಈ ಹೆಸರನ್ನು ಇಟ್ಟಿದ್ದಾರೆ. ಮನೆಯವರು ಕೂಡಾ ಆಕೆಯನ್ನು ಧ್ಯಾನು ಎಂದು ಕರೆಯುತ್ತಾರೆನ್ನಲಾಗಿದೆ. ಪತ್ನಿಯ ಹೆಸರಿನಿಂದ ವಿಭೀಶ್ಗೆ ಯಾವುದೇ ಸಮಸ್ಯೆಯಿಲ್ಲ, ಆದರೆ ಅನಗತ್ಯ ಕರೆಗಳು ತಲೆನೋವುಂಟುಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.