ಕಾಂಗ್ರೆಸ್ನ ಯಾರು ನೀಲಿ ಚಿತ್ರ ಮಾಡುತ್ತಿದ್ದಾರೆ ಎಂಬುದನ್ನು 24 ಗಂಟೆಯಲ್ಲಿ ಲಕ್ಷ್ಮಣ ಸವದಿ ಬಹಿರಂಗಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಒತ್ತಾಯ ಮಾಡಿದ್ದಾರೆ.
ಬೆಂಗಳೂರು [ಸೆ.17]: ಕಾಂಗ್ರೆಸ್ ಪಕ್ಷದವರು ನೀಲಿಚಿತ್ರ ಮಾಡುತ್ತಾರೆಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ನ ಯಾರು ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು 24 ಗಂಟೆಯಲ್ಲಿ ಲಕ್ಷ್ಮಣ ಸವದಿ ಬಹಿರಂಗಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ, ಮಾಧುಸ್ವಾಮಿ, ಲಕ್ಷ್ಮಣ ಸವದಿ ಹೇಳಿಕೆಗಳನ್ನು ಗಮನಿಸಿದರೆ ಅವರಿಗೆ ಅಧಿಕಾರದ ಮದ ನೆತ್ತಿಗೇರಿರುವುದು ಸಾಬೀತಾಗುತ್ತಿದೆ. ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿರುವ ಲಕ್ಷ್ಮಣ ಸವದಿ ಬಗ್ಗೆ ರಾಜ್ಯದ ಜನತೆ ಅಸಹನೆ ವ್ಯಕ್ತಪಡಿಸಿದ್ದಾರೆ. ಅಂತಹವರಿಗೆ ಬಿಜೆಪಿಯವರು ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಪ್ರಶ್ನಿಸಿದರೆ ನೀಲಿಚಿತ್ರ ವೀಕ್ಷಣೆ ಮಾಡುವುದು ದೇಶದ್ರೋಹವಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳುತ್ತಾರೆ. ಇದೀಗ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ನವರು ನೀಲಿಚಿತ್ರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಮೇಲೆ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾಡಿರುವ ಆರೋಪವನ್ನು ನಾವು ಸಹಿಸುವುದಿಲ್ಲ. ಯಾರು ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಒಬ್ಬ ಉನ್ನತ ಹುದ್ದೆಯಲ್ಲಿ ಇರುವವರು ಈ ರೀತಿ ಮಾತು ಜಾರಬಾರದು. 24 ಗಂಟೆಯ ಒಳಗೆ ಇದನ್ನು ಸಾರ್ವಜನಿಕರ ಮುಂದೆ ಲಕ್ಷ್ಮಣ ಸವದಿ ಹೇಳಬೇಕು ಎಂದು ಒತ್ತಾಯಿಸಿದರು.