ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಿ ಮೋದಿ ಬಳಿ ತ್ರಿವಳಿ ತಲಾಕ್ ವಿಷಯ ಬಿಡಿ ಜಶೋಧ ಬೆನ್ಗೆ ಯಾವಾಗ ನ್ಯಾಯ ಕೊಡುತ್ತೀರಿ ಎಂದು ಕೇಳಿದ್ದಾರೆಂಬ ಫೋಟೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ತ್ರಿವಳಿ ತಲಾಕ್ ವಿಷಯ ಬಿಡಿ ಜಶೋಧಬೆನ್ಗೆ ಯಾವಾಗ ನ್ಯಾಯ ಕೊಡುತ್ತೀರಿ ಎಂದು ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಿ ಮೋದಿ ಅವರನ್ನು ಕೇಳಿದ್ದಾಳೆ ಎಂದು ಹೇಳಲಾದ ಫೋಟೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವ ಈ ಚಿತ್ರದೊಂದಿಗೆ, ‘ಮೋದಿಜಿ ನಮ್ಮ ಚಿಂತೆ (ತ್ರಿವಳಿ ತಲಾಕ್) ಬಿಡಿ, ಜಶೋಧ ಬೆನ್ಗೆ ಯಾವಾಗ ನ್ಯಾಯ ಒದಗಿಸುತ್ತೀರಿ ಎಂದು ಮುಸ್ಲಿಂ ಮಹಿಳೆಯೋರ್ವರು ಪ್ರಧಾನಿ ಮೋದಿಯವರಲ್ಲಿ ಕೇಳಿದ್ದಾರೆ’ ಎಂದು ಹಿಂದಿ ಭಾಷೆಯಲ್ಲಿ ತಲೆ ಬರಹ ನೀಡಲಾಗಿದೆ. ಅಸದ್ಯ ಈ ಫೋಟೋ ವೈರಲ್ ಆಗಿದೆ.
ಆದರೆ ಈ ಚಿತ್ರದ ಅಸಲಿಯತ್ತೇನು ಎಂದು ಪರಿಶೀಲಿಸಿದಾಗ ಈ ತಲೆಬರಹಕ್ಕೂ ಫೋಟೋಗೂ ಸಂಬಂಧವೇ ಇಲ್ಲ ಎಂಬುದು ಪತ್ತೆಯಾಗಿದೆ. ಈ ಚಿತ್ರವು ಡಿಸೆಂಬರ್ 2018ರಂದು ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇಂಟರ್ನ್ಯಾಷನಲ್ ರೈಸ್ ರೀಸಚ್ರ್ ಇನ್ಸ್ಟಿಟ್ಯೂಟ್ಸ್ ಸೌತ್ ಏಷ್ಯಾ ರೀಜನಲ್ ಸೆಂಟರ್ ಅನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದಾಗಿದೆ. ಉದ್ಘಾಟನೆ ವೇಳೆ ಅಲ್ಲಿನ ಸಿಬ್ಬಂದಿ ಮುಸ್ಲಿಂ ಮಹಿಳೆಯೊಬ್ಬರು ಆ ಸಂಸ್ಥೆಯ ಕಾರ್ಯ ವೈಖರಿಯನ್ನು ಪ್ರಧಾನಿ ಮೋದಿಯವರಿಗೆ ವಿವರಿಸುತ್ತಿದ್ದುದನ್ನು ಪೋಟೋ ಕ್ಲಿಕ್ಕಿಸಲಾಗಿತ್ತು.
ಮೂಲ ಫೋಟೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದಾರೆ. ಮೂಲ ಫೋಟೋವನ್ನು ‘ನರೇಂದ್ರ ಮೋದಿ ಆ್ಯಪ್’ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಅದೇ ಫೋಟೋವನ್ನು ಕತ್ತರಿಸಿ ಬೇರೊಂದು ತಲೆಬರಹ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ.