‘ರಾಜ್ ದಂಪತಿಗೆ ಬೇಡದ MLC ಸ್ಥಾನ ನಾನೂ ನಿರಾಕರಿಸಿದೆ’

By Web DeskFirst Published Jun 16, 2019, 10:59 AM IST
Highlights

ರಾಜ್ ದಂಪತಿಗೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ MLC ಸ್ಥಾನದ ಆಫರ್ ಬಂದಿತ್ತು. ಆದರೆ ಅವರು ನಿರಾಕರಿಸಿದ ಬಳಿಕ ತಮಗೆ ಕೇಳಿದ್ದರು.ಆದರೆ ತಾವು ನಿರಾಕರಿಸಿದ್ದಾಗಿ ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಹೇಳಿಕೊಂಡರು.

ಬೆಂಗಳೂರು [ಜೂ.16] :  ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಕಾರಣಕ್ಕೆ ನಾನೂ ಕೂಡ ಮನಸು ಮಾಡಿದ್ದರೆ ಎಂಎಲ್‌ಸಿ ಆಗುವ ಅವಕಾಶ ಒದಗಿ ಬಂದಿತ್ತು. ಆದರೆ, ನನ್ನ ಅಕ್ಕ (ಪಾರ್ವತಮ್ಮ) ಹಾಗೂ ಭಾವ (ಡಾ.ರಾಜಕುಮಾರ್) ಅವರಿಗೆ ಬೇಡವಾದ ಎಂಎಲ್‌ಸಿ ಪದವಿ ನನಗೆ ಬೇಡ ಎಂದು ನಿರಾಕರಿಸಿಬಿಟ್ಟೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.
ಚಿನ್ನೇಗೌಡ ಹೇಳಿಕೊಂಡರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿ, ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್ಥಿಕ ಸಚಿವ ರಾಗಿದ್ದ ರಾಜಶೇಖರ ಮೂರ್ತಿ ‘ಏನಾದರೂ ಮಾಡಿ ಡಾ.ರಾಜ್‌ಕುಮಾರ್ ಅವರನ್ನು ಒಪ್ಪಿಸಿ, ನಾವು ಅವರನ್ನು ಎಲ್‌ಎಲ್‌ಸಿ ಮಾಡಬೇಕೆಂಬ ಆಸೆ ಇದೆ’ ಎಂದರು. ಆ ವಿಚಾರ ರಾಜ್‌ಕುಮಾರ್ ಅವರಿಗೆ ಹೇಳಿ ದಾಗ ‘ಅವರಿಗೆ ಬೇರೆ ಕೆಲಸ ನೋಡಿಕೊಳ್ಳಕ್ಕೆ ಹೇಳಿ’ ಎಂದು ಎಂಎಲ್‌ಸಿ ಪದವಿಯನ್ನು ತಿರಸ್ಕರಿಸಿದರು. 

Latest Videos

ಕೊನೆಗೆ ಅದೇ ಅವಕಾಶವನ್ನು  ಪಾರ್ವತಮ್ಮ ಕೂಡ ತಿರಸ್ಕರಿಸಿದರು. ಆಗ ನನಗೆ ಆಫರ್ ನೀಡಿದರು. ನನ್ನ ಅಕ್ಕ (ಪಾರ್ವತಮ್ಮ ರಾಜ್‌ಕುಮಾರ್) ಹಾಗೂ ಭಾವ (ಡಾ.ರಾಜ್‌ಕುಮಾರ್) ಅವರಿಗೇ ಬೇಡವಾಗಿದ್ದ ರಾಜಕೀಯ ಪದವಿ ನನಗೇ ಯಾಕೆ ಬೇಕು ಎಂದು ನಾನೂ ನಿರಾಕರಿಸಿಬಿಟ್ಟೆ. ಅಂದಿನಿಂದ ಇಂದಿನ ತನಕ ನಾನು ಏನಾಗಿದ್ದಿನೋ ಅದೆಲ್ಲವೂ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಿಂದಲೇ ಬಂದ ಆಶೀರ್ವಾದ.

ಅವರು ಹಾಕಿಕೊಂಡ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದ ಮತ್ತು ಈಗಲೂ ಹಾಗೆ ನಡೆದು  ಕೊಳ್ಳುತ್ತಿರುವ ನನಗೆ ಅಂದಿನ ಎಂಎಲ್‌ಸಿ ಪದವಿ ಬೇಡವಾಗಿತ್ತು ಎಂದರು. ಶಿಕ್ಷಕ ವೃತ್ತಿ ಬಿಟ್ಟು, ಸಿನಿಮಾ ಲೆಕ್ಕ ಬರೆದೆ: ನಾನು ಬೆಳೆದಿದ್ದು ಸಾಲಿಗ್ರಾಮದಲ್ಲಿ. ನನ್ನ ತಂದೆ ಡ್ರಾಮಾ ಮೇಸ್ಟ್ರು. ಸಂಗೀತ, ಶಾಲೆಯ ಶಿಕ್ಷಕರು. ಅವರಂತೆಯೇ ನಾನು ಕೂಡ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ನನ್ನಲ್ಲಿ ಆಸ್ತಮ ಸಮಸ್ಯೆ ಕಾಣಿಸಿಕೊಂಡಿತು. ಯೋಗದಿಂದ ಈ ಸಮಸ್ಯೆಯಿಂದ ಮುಕ್ತ ಹೊಂದಬಹುದು ಎಂದು .ರಾಜ್‌ಕುಮಾರ್ ಅವರ ಸಲಹೆ ಮೇರೆಗೆ ಬೆಂಗಳೂರಿಗೆ ಬಂದೆ. ಅದೇ ಸಮಯಕ್ಕೆ ಬೆಂಗಳೂರಿನಲ್ಲೊಂದು ಸಿನಿಮಾ ಕಚೇರಿ ತೆರೆದು ತಾವೇ ವಿತರಣೆ, ಸಿನಿಮಾ ನಿರ್ಮಾಣ ಮಾಡಬೇಕು ಎಂದು ಯೋಚಿ ಸುತ್ತಿದ್ದರು ಪಾರ್ವ ತಮ್ಮ ಅವರು. ಆಗ ಹುಟ್ಟಿಕೊಂಡಿದ್ದೇ ವಜ್ರೇಶ್ವರಿ ಕಂಬೈನ್ಸ್. ಅದರ ಸಾರಥ್ಯವನ್ನು ವಿದ್ಯಾವಂತನಾಗಿದ್ದ ನನಗೆ ವಹಿಸಿ ಕೊಟ್ಟರು ಎಂದರು.

ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಶಾಸಕ ಅಶ್ವತ್ಥ್ ನಾರಾಯಣ, ರಾಘವೇಂದ್ರ ರಾಜ್ ಕುಮಾರ್, ಹಿರಿಯ ನಟಿ ಜಯಂತಿ, ಬಿ ಕೆ ಶಿವರಾಂ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು. ‘ಕನ್ನಡಪ್ರಭ’ ಪುರವಣಿ ವಿಭಾಗದ ಸಂಪಾದಕ ಗಿರೀಶ್ ರಾವ್ ಅವರು ಬೆಳ್ಳಿ ಹೆಜ್ಜೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

click me!