
ಬೆಂಗಳೂರು(ಮೇ.05): ನಗರದ ಟೆಕ್ಕಿಯೊಬ್ಬರು ತಮ್ಮ ಊರು ಮೈಸೂರಿಗೆ ಪ್ರಯಾಣಿಸಲು 2 ದಿನಗಳ ಹಿಂದೆ ಸಿಟಿ ರೈಲ್ವೆ ಸ್ಟೇಷನ್'ನಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಊಬರ್ ಕಾರನ್ನು ಬುಕ್ ಮಾಡಿಕೊಂಡಿದ್ದಾರೆ. ಆಮೇಲೆ ನಡೆದಿದ್ದು ಪಜೀತಿ...
ರೈಲು ನಿಲ್ದಾಣದಿಂದ ಮೈಸೂರು ರಸ್ತೆಗೆ ಕ್ಯಾಬ್'ನಲ್ಲಿ ಪ್ರಯಾಣಿಸಿದ್ದಾರೆ. ಅವರ ಮೊಬೈಲ್' ಆ್ಯಪ್'ನಲ್ಲಿ ಈ ಮೊದಲು 5 ಕಿ.ಮೀ'ಗೆ 103 ರೂ. ಬಿಲ್ ತೋರಿಸಿದೆ. ಆದರೆ ಪ್ರವೀಣ್ ಅವರು ತಮ್ಮ ಸ್ಥಳ ತಲುಪಿದಾಗ 103 ರೂ ಬಿಲ್ ಬದಲಿಗೆ ಅವರಿಗೆ ಕಾಣಿಸಿದ್ದು 5,352 ರೂ. ಈ ಬಾರಿ ಮೊತ್ತವನ್ನು ನೋಡಿದ ಅವರಿಗೆ ದಿಕ್ಕೇ ತೋಚದಂತಾಗಿದೆ. ತಾನು ಹಿಂದೆ ಯಾವುದೇ ಬಾಕಿಯನ್ನಯ ಉಳಿಸಿಕೊಂಡಿಲ್ಲ. ಆದ ಕಾರಣ 103 ರೂ. ಮಾತ್ರವೇ ನೀಡುವುದಾಗಿ ಟೆಕ್ಕಿ ಕ್ಯಾಬ್ ಚಾಲಕನಿಗೆ ಹೇಳಿದ್ದಾರೆ.
ಇದನ್ನು ಕೇಳಿಸಿಕೊಳ್ಳದ ಕ್ಯಾಬ್ ಚಾಲಕ ತಕ್ಷಣ ಬೆಂಗಳೂರಿನ ಊಬರ್ ಸಂಸ್ಥೆ ಕಚೇರಿಗೆ ಕರೆ ಮಾಡಿದ್ದಾನೆ. ಅಲ್ಲಿನ ಸಿಬ್ಬಂದಿ ಬಿಲ್'ನಲ್ಲಿ ಬಂದಿರುವ ಹಣ ಪಡೆದುಕೊ, ನೀಡದಿದ್ದರೆ ಪೊಲೀಸರಿಗೆ ದೂರು ನೀಡು ಎಂದು ತಿಳಿಸಿದ್ದಾರೆ.
ನಂತರ ಇಬ್ಬರಿಗೂ ವಾಗ್ವಾದವುಂಟಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಪ್ರಯಾಣ ಬೆಳಸಿದ್ದಾರೆ. ಬಿಲ್ ಅಧಿಕೃತವಾಗಿ ಬಂದಿರುವ ಕಾರಣ ನೀವು ಚಾಲಕನಿಗೆ 5352 ರೂ. ನೀಡಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ. ಟೆಕ್ಕಿ 5 ಕಿ.ಮೀ'ಗೆ ಇಷ್ಟು ಮೊತ್ತದ ಹಣವಾಗುವುದು ಸಾಧ್ಯವಿಲ್ಲ ಎಂದು ಪರಿಪರಿಯಾಗಿ ವಿವರಿಸಿದರೂ ಅವರು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಟೆಕ್ಕಿಯನ್ನೇ ಗದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಟೆಕ್ಕಿ '103 ರೂ. ನೀಡಿ ಉಳಿದ ಮೊತ್ತವನ್ನು ನಾಳೆ ಬರಿಸುವುದಾಗಿ ಮನವರಿಕೆ ಮಾಡಿ ತಾವು ಕೂಡ ಹೆಚ್ಚುವರಿ ಮೊತ್ತದ ಮೀಟರ್ ಬಂದಿರುವ ಬಗ್ಗೆ ಊಬರ್ ವಿರುದ್ಧ ದೂರನ್ನು ದಾಖಲಿಸಿ ಮೈಸೂರಿಗೆ ಪ್ರಯಾಣ ಬೆಳಸಿದ್ದಾರೆ.
ಇಷ್ಟೆಲ್ಲ ಘಟನೆಗಳು ಘಟಿಸಿದ ನಂತರ ಊಬರ್ ಸಂಸ್ಥೆಯಿಂದ ಟೆಕ್ಕಿಗೆ ಮೇಲ್ ಬಂದಿದ್ದು' ತಾಂತ್ರಿಕ ಕಾರಣಗಳಿಂದಾಗಿ ಈ ರೀತಿ ಸಮಸ್ಯೆಯುಂಟಾಗಿದೆ. ನಿಮಗೆ ತೊಂದರೆಯಾಗಿರುದಕ್ಕೆ ವಿಷಾದಿಸುತ್ತೇವೆ' ಎಂದು ತಿಳಿಸಿದ್ದಾರೆ.
ಇದು ಸ್ವಲ್ಪಮಟ್ಟಿಗೆ ಖುಷಿ ತರುವ ವಿಚಾರವಾದರೂ ಸಮಯ ಪೋಲು ಹಾಗೂ ಪೊಲೀಸರಿಂದ ಆಗಿರುವ ಅಪಮಾನವನ್ನು ವಾಪಸ್ ಪಡೆಯಲು ಸಾಧ್ಯವೆ ಎಂಬುದು ಟೆಕ್ಕಿಯವರ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.