
ಬೆಂಗಳೂರು (ಜೂ.22): ಶಾಸಕರ ವಿರುದ್ಧ ಮಾನನಷ್ಟ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ಖ್ಯಾತ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಅನಿಲ್ ರಾಜುಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ಕಾಂಗ್ರೆಸ್ ಶಾಸಕ ಬಿಎಂ ನಾಗರಾಜ್ ಮತ್ತು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ವಿರುದ್ಧ ಮಾನನಷ್ಟ ಲೇಖನಗಳನ್ನು ಪ್ರಕಟಿಸಿ, ಅವರ ಘನತೆಗೆ ಧಕ್ಕೆ ತಂದಿದ್ದಾರೆ. ಸದನ ಹಕ್ಕುಚ್ಯುತಿ ಸಮಿತಿ ಶಿಫಾರಸ್ಸಿನ ಮೇರೆಗೆ ಸ್ಪೀಕರ್ ಕೋಳಿವಾಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಸದನ ಹಕ್ಕುಚ್ಯುತಿ ಸಮಿತಿ ಚೇರ್’ಮನ್ ಕಿಮ್ಮನೆ ರತ್ನಾಕರ್ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ, ಯಲಹಂಕಾ ವಾಯ್ಸ್ ಸಂಪಾದಕ ಅನಿಲ್ ರಾಜುಗೆ ದಂಡ ವಿಧಿಸಲು ಶಾಸಕರು ಸಮ್ಮತಿ ನೀಡಿದರು. ಬಿಜೆಪಿ ಶಾಸಕ ಎಸ್, ಆರ್ ವಿಶ್ವನಾಥ್ ಸದನದಲ್ಲಿ ಮಾತಾನಾಡುತ್ತಾ, ಯಲಹಂಕ ವಾಯ್ಸ್ ಸಂಪಾದಕ ಅನಿಲ್ ರಾಜು ನನ್ನ ವಿರುದ್ಧ ಲೇಖನಗಳನ್ನು ಪ್ರಕಟಿಸಿ ನನ್ನ ಕ್ಷೇತ್ರದಲ್ಲಿ ಹೆಸರನ್ನು ಹಾಳು ಮಾಡಿದರು. ಕ್ಷಮೆಯಾಚಿಸಲು ಸದನ ಹೇಳಿದರೂ ಕೂಡಾ ಅವರು ಅದನ್ನೇ ಮುಂದುವರೆಸಿದ್ದರು ಎಂದಿದ್ದಾರೆ.
ಕಾಂಗ್ರೆಸ್ ಶಾಸಕ ಬಿ.ಎಂ ನಾಗರಾಜ್ ಇದೇ ವಿಚಾರವನ್ನು ಪ್ರಸ್ತಾಪಿಸುತ್ತಾ, ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ನನ್ನ ಕುಟುಂಬದ ಬಗ್ಗೆ ಸುಳ್ಳು ಸುದ್ದಿ ಬರೆದಿದ್ದರು. ಅವರಿಗೆ ಸಮನ್ಸ್ ನೀಡಿದರೂ ಕೂಡಾ ಸದನದ ಮುಂದೆ ಹಾಜರಾಗಿರಲಿಲ್ಲ. ಇದು ಸದನಕ್ಕೆ ತೋರುವ ಅಗೌರವ. ಅವರ ವಿರುದ್ಧ ಹಕ್ಕುಚ್ಯುತಿ ಸಮಿತಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.