
ಬೆಂಗಳೂರು : ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಜ.8 ಮತ್ತು 9 ರಂದು ಕರೆ ನೀಡಿರುವ ‘ಭಾರತ್ ಬಂದ್’ನಿಂದಾಗಿ ರಾಜ್ಯದಲ್ಲೂ ಕೆಲ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಯಿದೆ. ಎಐಟಿಯುಸಿ, ಸಿಐಟಿಯು, ಎನ್ ಟಿಯುಸಿ, ಎಚ್ಎಂಎಸ್ ಸೇರಿದಂತೆ ರಾಷ್ಟ್ರಮಟ್ಟದ 11 ಸಂಘಟನೆಗಳು ಈ ಎರಡು ದಿನಗಳ ಕಾಲ ದೇಶವ್ಯಾಪ್ತಿ ಬಂದ್ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಕೆಲ ಸಂಘಟನೆಗಳು ನೇರವಾಗಿ ಬಂದ್ನಲ್ಲಿ ಭಾಗವಹಿಸುತ್ತಿವೆ.
ಮತ್ತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ. ಪ್ರಮುಖವಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ, ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ ಅಸೋಸಿಯೇಷನ್, ಓಲಾ, ಟ್ಯಾಕ್ಸಿ ಫಾರ್ ಶೂರ್, ಊಬರ್ ಚಾಲಕರ ಮತ್ತು ಮಾಲೀಕರ ಸಂಘ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿವೆ.
ಭಾರತ್ ಬಂದ್ : ಓಲಾ, ಊಬರ್ ಸೇವೆ ಇರುತ್ತಾ..?
ಹಾಲು, ತರಕಾರಿ, ಔಷಧಿ, ಆಸ್ಪತ್ರೆ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಗಳಿಗೆ ಬಂದ್ ನಿಂದ ವಿನಾಯಿತಿ ನೀಡಿದ್ದು, ಈ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಆಟೋ, ಬಸ್ ಸೇವೆಯಲ್ಲಿ ಕೊಂಚ ವ್ಯತ್ಯವಾಗುವ ಸಾಧ್ಯತೆಯಿದೆ. ಇನ್ನು ಶಾಲಾ-ಕಾಲೇಜುಗಳಿಗೆ ಬಸ್ ಪರಿಸ್ಥಿತಿ ನೋಡಿಕೊಂಡು ಮಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ನಿಗಮದಿಂದ ರಜೆ ಇಲ್ಲ: ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ಸಂಘಟನೆಗಳು ಕರೆ ನೀಡಿವೆಯಾದರೂ, ಕೆಎಸ್ಆರ್ಟಿಸಿ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ. ‘ಬಸ್ ಸಂಚಾರ ಸ್ಥಗಿತಗೊಳಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ಬಸ್ ಸೇವೆ ಮುಂದು ವರಿಯಲಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸೇವೆ ನೀಡಲು ನಿಗಮದಿಂದ ಎಲ್ಲ ಸಿದ್ಧತೆ ನಡೆಸಲಾಗಿದೆ’ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದರು.
‘ಬಿಎಂಟಿಸಿ, ಬಿಎಂಆರ್ಸಿಎಲ್ ಸಂಸ್ಥೆಗಳು ಕೂಡ ಎಂದಿನಂತೆ ಸೇವೆ ಮುಂದುವರಿಸಲು ನಿರ್ಧರಿಸಿವೆ. ಪ್ರಮುಖವಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ಬಂದ್ನಲ್ಲಿ ಭಾಗವಹಿಸಿದರೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದರೆ, ಈಗಾಗಲೇ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಈ ಎರಡೂ ದಿನ ಯಾವುದೇ ನೌಕರರಿಗೆ ರಜೆ ನೀಡದಂತೆ ಖಡಕ್ ಸೂಚನೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ. ಅಂತಿಮವಾಗಿ ಅಂದಿನ ಬಂದ್ ತೀವ್ರತೆಯ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
ಈ ಸೇವೆ ಅನುಮಾನ
ಕೆಎಸ್ಆರ್ಟಿಸಿ, ಬಿಎಂಟಿಸಿ,
ಈಶಾನ್ಯ, ವಾಯುವ್ಯ
ಸಾರಿಗೆ ನಿಗಮದ ಬಸ್ಗಳು,
ಆಟೋ ಗಳು, ಬಿಸಿಯೂಟ
ಸೇವೆ, ಅಂಗನವಾಡಿ
ಈ ಸೇವೆ ಇರುತ್ತೆ
ಮೆಟ್ರೋ ರೈಲು ಸಂಚಾರ,
ಓಲಾ ಹಾಗೂ ಊಬರ್
ಟ್ಯಾಕ್ಸಿ, ಲಾರಿ, ಪೆಟ್ರೋಲ್
ಬಂಕ್, ಪ್ರವಾಸಿ ವಾಹನ
ಗಳು, ಹಾಲು, ತರಕಾರಿ,
ಔಷಧ, ಆಸ್ಪತ್ರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.