
ಡಿ. 31 ರ ರಾತ್ರಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದೆ. ಈ ನಗರದಲ್ಲಿ ಹೆಣ್ಣುಮಕ್ಕಳು ಎಷ್ಟು ಸೇಫ್ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇಡೀ ಮಹಿಳಾ ಸಮಾಜವೇ ಭಯಬೀಳುವಂತಹ ಸ್ಥಿತಿ ಸದ್ಯಕ್ಕಂತೂ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಹೆಣ್ಣುಮಗಳೊಬ್ಬಳು ಎದುರಿಸಿದ ಭಯಾನಕ ಸನ್ನಿವೇಶ ಹಾಗೂ ಧೈರ್ಯವಾಗಿ ಎದುರಿಸಿದ ರೀತಿ ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು.
ಅದ್ಯಾರು ದಿಟ್ಟೆ? ಏನಿದು ಘಟನೆ?
ಮಾಧ್ಯಮವೊಂದರಲ್ಲಿ ಕೆಲಸ ಮಾಡುವ 24 ವರ್ಷದ ಛಾಯಾಚಿತ್ರಗ್ರಾಹಕಿಯೊಬ್ಬಳು ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಕೀಚಕನೊಬ್ಬ ಅಮಾನವೀಯವಾಗಿ ವರ್ತಿಸಲು ಯತ್ನಿಸಿದಾಗ ಅವಳು ನೀಡಿದ ಉತ್ತರವನ್ನು ಅವನು ಜೀವನದಲ್ಲಿ ಮರೆಯುವುದಿಲ್ಲ. ಈ ಘಟನೆ ಬಗ್ಗೆ ಆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ.
"ಹೊಸವರ್ಷದ ದಿನದಂದು ನಾನು ಕೆಲಸ ಮುಗಿಸಿ ರಾತ್ರಿ ಸುಮಾರು 1.30 ರ ಹೊತ್ತಿಗೆ ಮನೆಗೆ ಹಿಂತಿರುಗುತ್ತಿದ್ದೆ. ಸಾಮಾನ್ಯವಾಗಿ ನಾನು ತಡರಾತ್ರಿಯೇ ಬರುವುದರಿಂದ ಪೋಲಿಸರಿರುತ್ತಾರೆನ್ನುವ ಭಂಡ ಧೈರ್ಯದಲ್ಲಿದ್ದೆ. ಹೀಗೆ ಬರುತ್ತಿರುವಾಗ ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ನನ್ನ ಬಳಿ ಬಂದು ಅಸಭ್ಯವಾಗಿ ವರ್ತಿಸಲು ಶುರುಮಾಡಿದ. ರಕ್ಷಣೆಗಾಗಿ ನಾನು ಅವನ ಮರ್ಮಾಂಗಕ್ಕೆ ಜೋರಾಗಿ ಗುದ್ದಿದೆ. ಇದನ್ನು ಅವನು ಜೀವನದಲ್ಲಿ ಮರೆಯುವುದಿಲ್ಲ. ಆಘಾತಕಾರಿ ವಿಚಾರವೆಂದರೆ ಅಲ್ಲಿಯೇ ಇದ್ದ ಪೋಲಿಸರು ಏನೂ ಮಾಡಲಿಲ್ಲ. ನಾನು ತಡರಾತ್ರಿ ಬರುವಾಗ ರಸ್ತೆಯಲ್ಲಿ ಒಬ್ಬನೇ ಒಬ್ಬ ಪೋಲಿಸ್ ಕಾಣಿಸುವುದಿಲ್ಲ. ನಾವು ದೂರು ಕೊಡಲು ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂದು" ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.