ಬೆಂಗಳೂರು(ಸೆ.27): ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್'ಗೆ ಮರುಪರಿಶೀಲನಾ ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ಸರ್ಕಾರ ಸುಪ್ರೀಗೆ ಸಲ್ಲಿಸಿರುವ ಈ ಅರ್ಜಿಯಲ್ಲಿ ಏನಿದೆ?
ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ನಿತ್ಯ ಪೂರೈಸುವಷ್ಟು ನೀರೂ ಇಲ್ಲ . ನಗರ ಪ್ರದೇಶಗಳ ಜನತೆಗೆ ನಿತ್ಯ ತಲಾ 135 ಲೀಟರ್, ಗ್ರಾಮೀಣರಿಗೆ 70 ಲೀಟರ್ ನೀರು ಪೂರೈಸಬೇಕು ಎಂಬುದು ನಿಯಮ. ಆದರೆ, ಮತ್ತೆ ಮಳೆ ಸುರಿಯದಿದ್ದರೆ ಈಗಿರುವ ಸಂಗ್ರಹದಲ್ಲೇ ಬೇಸಿಗೆಯಲ್ಲೂ ನೀರು ಪೂರೈಸಬೇಕು. ತಮಿಳುನಾಡಿಗೆ ನೀರು ಹರಿಸಿದರೆ ಜನತೆಗೆ ಅಗತ್ಯವಾಗಿರುವ ನೀರನ್ನೂ ನೀಡದ ಸ್ಥಿತಿ ಉದ್ಭವವಾಗಲಿದೆ. ಕಾವೇರಿ ಕಣಿವೆಯಲ್ಲಿನ ಒಟ್ಟು 740 ಟಿಎಂಸಿ ಅಡಿ ನೀರಿನಲ್ಲೇ ಆಯಾ ರಾಜ್ಯಗಳಿಗೆ ವಾರ್ಷಿಕ ಹಂಚಿಕೆ ಮಾಡಲಾಗಿದೆ. ಜನವರಿ 31ಕ್ಕೆ ಜಲ ವರ್ಷ ಪೂರ್ಣಗೊಳ್ಳಲಿದ್ದು, ಹಂಚಿಕೆ ಆಗಬೇಕಿರುವ ನೀರಿನ ಲೆಕ್ಕವನ್ನು ಆಗಲೇ ಹಾಕಬೇಕು. ಸಾಂಬಾ ಬೆಳೆಗೆ ವಾರ್ಷಿಕ 63 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಈಗಾಗಲೇ ಕರ್ನಾಟಕ 52 ಟಿಎಂಸಿ ಅಡಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಹರಿಸಿದೆ. ಅಲ್ಲಿ ಈಗ 50 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಸಾಂಬಾ ಬೆಳೆಗೆ ಸಾಕಾಗಲಿದೆ. ಅಕ್ಟೋಬರ್ನಿಂದ ಡಿಸೆಂಬರ್ ಅಂತ್ಯದವರೆಗೆ ಅಲ್ಲಿ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸುವ ಸಾಧ್ಯತೆ ಇದೆ. ಗಡಿಯಲ್ಲಿರುವ ಬಿಳಿಗುಂಡ್ಲುವಿನಿಂದ ಮೆಟ್ಟೂರು ಜಲಾಶಯದವರೆಗೆ ಈಶಾನ್ಯ ಮಾರುತಗಳ ನೆರವಿನಿಂದಲೇ 42 ಟಿಎಂಸಿ ಅಡಿ ನೀರು ದೊರೆಯಲಿದೆ. ಇದನ್ನು ಪರಿಗಣಿಸುವ ಮೂಲಕ ಕರ್ನಾಟಕದಿಂದ ನಿತ್ಯ 6,000 ಕ್ಯುಸೆಕ್ ನೀರು ಹರಿಸುವಂತೆ ಸೆ.20ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡಬೇಕು.