ಇನ್ನೂ ನಿಂತಿಲ್ಲ ಕೆಸಿಆರ್ ಟೆಂಪಲ್ ರನ್
ವಿಜಯವಾಡಾದ ಕನಕ ದುರ್ಗ ದೇವಿ ದೇವಸ್ಥಾನ
ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿದ ಸಿಎಂ
ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಸಿಎಂ ನಡೆ
ಹೈದರಾಬಾದ್(ಜೂ.28): ಸರ್ಕಾರಿ ಖರ್ಚಿನಲ್ಲಿ ಹೋಮ ಮಾಡಿ ಜನರ ಕಂಗೆಣ್ಣಿಗೆ ಗುರಿಯಾಗಿದ್ದ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್, ಇದೀಗ ಮತ್ತೆ ಅಂತದ್ದೇ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕೆಸಿಆರ್ ವಿಜಯವಾಡಾದ ದೇವಿ ಕನಕ ದುರ್ಗ ದೇವಸ್ಥಾನಕ್ಕೆ ಮೂಗುತಿ ಅರ್ಪಿಸಿದ್ದಾರೆ. ತೆಲಂಗಾಣ ರಾಜ್ಯ ಆಂಧ್ರದಿಂದ ವಿಭಜನೆಯಾದರೆ ಚಿನ್ನದ ಮೂಗುತಿ ಸಮರ್ಪಿಸುವುದಾಗಿ ಕೆಸಿಆರ್ ಈ ಹಿಂದೆ ದೇವಿ ಕನಕ ದುರ್ಗ ದೇವಸ್ಥಾನದಲ್ಲಿ ಹರಕೆ ಹೊತ್ತಿದ್ದರಂತೆ.
ಅದರಂತೆ ಇದೀಗ ರಾಜ್ಯ ವೀಭಜನೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿದ್ದಾರೆ. ಇಂದು ಕುಟುಂಬ ಸಮೇತರಾಗಿ ವಿಜಯವಾಡಾದ ದೇವಿ ಕನಕ ದುರ್ಗ ದೇವಸ್ಥಾನಕ್ಕೆ ಆಗಮಿಸಿದ ಕೆಸಿಆರ್, ದೇವಿಗೆ ಚಿನ್ನದ ಮೂಗುತಿ ಸಮರ್ಪಿಸಿ ಪುನೀತರಾದರು.
ಕೆಸಿಆರ್ ಈ ಹಿಂದೆ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಚಿನ್ನದ ಆಭರಣ ಸಮರ್ಪಿಸಿದ್ದರು. ಅಲ್ಲದೇ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಸರ್ಕಾರದ ಖಜಾನೆಯಿಂದ ೫ ಕೋಟಿ ರೂ. ದೇಣಿಗೆ ನೀಡಿದ್ದರು. ಕೆಸಿಆರ್ ಈ ರೀತಿ ಸಾವರ್ವಜನಿಕರ ಹಣ ಪೋಲು ಮಾಡುತ್ತಿರುವುದನ್ನು ಹಲವರು ಖಂಡಿಸಿದ್ದು, ಸಿಎಂ ರಾಜ್ಯದ ಅಭಿವೃದ್ಧಿಗೆ ಈ ಹಣ ಖರ್ಚು ಮಾಡಿದ್ದರೆ ಆ ದೇವರೂ ಕೂಡ ಮೆಚ್ಚುತ್ತಿದ್ದ ಎಂದು ಹರಿಹಾಯ್ದಿದ್ದಾರೆ.