ಕುಣಿಗಲ್'ನ ಗೋಲ್ಡನ್ ಬಾಬಾ ಅಸಲಿಯತ್ತು ಬಟಾಬಯಲು

By Suvarna Web DeskFirst Published May 25, 2017, 11:03 AM IST
Highlights

ಆತನೊಬ್ಬ ಸಾಮಾನ್ಯ ಬಾಬಾ. ಆದ್ರೆ ಆತನಲ್ಲಿ ಅಗಾಧವಾದ ಶಕ್ತಿಯಿದೆ. ಭಕ್ತರ ಮುಖ ನೋಡಿದ್ರೆ ಸಾಕು ಅವರ  ಕಷ್ಟಗಳೇನು ಅನ್ನೋದನ್ನ ಬಾಬಾನೇ ಹೇಳಿ ಬಿಡ್ತಾನಂತೆ. ಆದ್ರೆ ಭಕ್ತರ ಸಮಸ್ಯೆ ನಿವರಣೆಯಾಗಬೇಕೆಂದ್ರೆ ಬಾಬಾಗೆ ಲಕ್ಷಾಂತರ ರೂಪಾಯಿ ದುಡ್ಡು ಕೊಡಲೇಬೇಕು. ಹಾಗಿದ್ರೆ ಏನದು, ಬಾಬಾನ ಕತೆ? ಸುವರ್ಣನ್ಯೂಸ್'ನ "ಎಲ್ಲಾ ಮಾಯವೋ" ತಂಡ ಈತನ ಅಸಲಿಯತ್ತನ್ನು ಬಹಿರಂಗಪಡಿಸಿದೆ. ಇಲ್ಲಿದೆ ನೋಡಿ ಆ ಸ್ಟೋರಿ.

ನಾವಿಂದು ನಿಮಗೆ ಪರಿಚಯಿಸಲಿರೋದು ಸಾಮಾನ್ಯರಲ್ಲೆ ಸಾಮಾನ್ಯನಾಗಿರೋ ಒಬ್ಬ ಮಹಾನ್ ಪುರುಷನನ್ನ. ಆತ ಸಾವಿರಾರು ಭಕ್ತರ ಪಾಲಿನ ಆಶಾಕಿರಣ. ಆ ಮಹಾನ್ ಪುರುಷನನ್ನ ಕಾಣಲು ಬರುತ್ತಾರೆ ನೂರಾರು ಜನ.

ಈ ಗೋಲ್ಡನ್ ಬಾಬಾನನ್ನ ನೀವು ಭೇಟಿಯಾಗ್ಬೇಕು ಅಂದ್ರೆ ಬೆಂಗಳೂರಿನಿಂದ 70 ಕಿ.ಮಿ ದೂರದಲ್ಲಿರುವ ತುಮಕೂರು ಜಿಲ್ಲೆಯ ಕುಣಿಗಲ್'ಗೆ ಹೋಗ್ಬೇಕು. ಕುಣಿಗಲ್'ಗೆ ಹತ್ತಿರದಲ್ಲೇ ಇರುವ ಬಿದನಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಈ ಬಾಬಾನ ಪುಣ್ಯ ಕ್ಷೇತ್ರವಿದೆ. ಈ ಕ್ಷೇತ್ರದ ಹೆಸರು ಶ್ರೀ ಸತ್ಯ ಶನೇಶ್ವರಸ್ವಾಮಿ ಪುಣ್ಯಕ್ಷೇತ್ರ. ಈ ಶನೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರೇ ಈ ಧನಂಜಯ್ ಸ್ವಾಮಿಗಳು. ಭಕ್ತರ ಸಮಸ್ಯೆಗಳು ಏನೇ ಇದ್ದರೂ ಅದನ್ನ ನಿವಾರಿಸೋ ಶಕ್ತಿ ಇವರಲ್ಲಿದೆಯಂತೆ.

ಹಿಂದೆ ಹೇಗಿದ್ದರು?
ಆರೇಳು ವರ್ಷಗಳ ಹಿಂದೆ ಧನಂಜಯ್ ಫುಟ್ಪಾತ್'ನಲ್ಲಿ ಸಾಮಾನ್ಯ ವ್ಯಾಪಾರಿಯಾಗಿ ಬದುಕು ಸವೆಸುತ್ತಿರುತ್ತಾನೆ. ಈತನೇ ಹೇಳಿಕೊಂಡಿರುವ ಪ್ರಕಾರ, ಫುಟ್ಬಾತ್'ನಲ್ಲಿ ಈತ ಚಪ್ಪಲಿ, ವಡೆ-ಬೋಂಡ, ಬಜ್ಜಿ ಇತ್ಯಾದಿ ಹಲವು ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಇಂತಹ ಒಬ್ಬ ಸಾಮಾನ್ಯ ವ್ಯಕ್ತಿ ಕೇವಲ ಆರು ವರ್ಷಗಳಲ್ಲಿ ಇಷ್ಟೊಂದು ಬೆಳೆಯಲು ಹೇಗೆ ಸಾಧ್ಯವಾಯ್ತು ಅನ್ನೋದನ್ನ ತಿಳಿಯಲು ನಮ್ಮ ಚಾನಲ್'ನ ಎಲ್ಲ ಮಾಯವೋ ತಂಡ ಮುಂದಾಗುತ್ತೆ.

ಈತನ ಖೆಡ್ಡಾ ಹೇಗಿರುತ್ತೆ?
ಈ ಸ್ವಾಮಿ ಟಾರ್ಗೆಟ್​ ಮಾಡೋದು ಬರೀ ದುಡ್ಡಿದ್ದ ಕುಳಗಳನ್ನೆ. ದುಡ್ಡಿದ್ದ ಭಕ್ತರು ಈ ದೇವಸ್ಥಾನಕ್ಕೆ ಬಂದ್ರೆ ಸಾಕು ಅವರಿಗೆ ಇಲ್ಲದಿರುವ ಕಥೆ ಕಟ್ಟಿ, ನಿಮ್ಮ ಮನೆಗೆ ಯಾರೋ ಮಾಟ ಮಾಡಿಸಿದ್ದಾರೆ. ಅದ್ರಿಂದ ನಿಮಗೆ ತುಂಬಾ ತೊಂದ್ರೆಯಾಗಲಿದೆ ಎಂದು ಹೆದರಿಸ್ತಾನೆ. ಹೆದರಿದ ಭಕ್ತರು ಹಾಗಿದ್ರೆ ಏನು ಮಾಡಬೇಕೆಂದು ಈ ಸ್ವಾಮಿಯನ್ನೇ ಕೇಳ್ತಾರೆ. ಆಗ ಈ ಸ್ವಾಮಿ ಹೇಳೋದು ಹೋಮ ಮಾಡಿಸ್ಬೇಕು ನಿಮ್ಮ ಮನೆಯಲ್ಲಿರೋ ಮಾಟ-ಮಾಂತ್ರವನ್ನ ತೆಗೆಯಬೇಕು ಅಂದು. ಇಲ್ಲಿ ಅಚ್ಚರಿ ಏನ್ ಗೊತ್ತಾ ಆ ಹೋಮ, ಮಾಟ ಮಾಂತ್ರವನ್ನ ತೆಗೆಯೋದು, ಹಾಗೆ ಹೋಮವನ್ನ ಈತನೇ ಮಾಡ್ತಾನೆ. ಹೋಮಕ್ಕೆ ಈತ ತೆಗೆದುಕೊಳ್ಳುವ ದುಡ್ಡು ಬರೋಬ್ಬರಿ 5-6 ಲಕ್ಷ ರೂಪಾಯಿ.  ಲಕ್ಷ ಲಕ್ಷ ದುಡ್ಡು ಕೀಳದೇ ಯಾವುದೇ ಮನೆಯಲ್ಲಿ ಹೋಮ ಕುಂಡವನ್ನ ಹೊತ್ತಿಸೋದಿಲ್ಲವಂತೆ. ಹೋಮ ಮಾಡಿದ ಮೇಲೆ ಭಕ್ತರ ಮನೆಯಲ್ಲಿ ಅಂತ್ರದ ಕುಡಿಕಿಗಳನ್ನ ಕಟ್ಟಿ ಹೋಗ್ತಾನೆ. ತೆಗೆದು ನೋಡಿದ್ರೆ ಅದ್ರಲ್ಲಿದ್ದದ್ದು ಬರೀ ಕಸ-ಕಡ್ಡಿಯಿತ್ತು.

ಮೋದಿಯನ್ನೇ ಕರೆಸುತ್ತಾನಂತೆ:
ಧನಂಜಯ್ ಸ್ವಾಮಿ ಭಕ್ತರನ್ನು ಯಾಮಾರಿಸಲು ಏನು ಬೇಕಾದರೂ ಹೇಳಲು ಸಿದ್ಧನಿರುತ್ತಾನೆ. ಈತನನ್ನು ಭೇಟಿಯಾದ ಎಲ್ಲಾ ಮಾಯವೋ ತಂಡದ ಸದಸ್ಯರಿಗೆ ಈ ಬಾಬಾ ತಾನು ಪ್ರಧಾನಿ ಮೋದಿಯನ್ನೇ ಕರೆಸುತ್ತೇನೆಂದು ಜಂಬ ಕೊಚ್ಚಿಕೊಂಡಿರುತ್ತಾನೆ. 150 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ಉದ್ಘಾಟನೆಗೆ ನರೇಂದ್ರ ಮೋದಿಯನ್ನ ಕರೆಸುತ್ತೇನೆ ಎಂದು ಧನಂಜಯ್ ಹೇಳಿಕೊಳ್ಳುತ್ತಾನೆ.

ಅಷ್ಟೇ ಅಲ್ಲ, ಝೀ ವಾಹಿನಿಯಲ್ಲಿ ಪ್ರಸಾರವಾಗುವ "ವೀಕೆಂಡ್ ವಿತ್ ರಮೇಶ್" ಕಾರ್ಯಕ್ರಮದ 4ನೇ ಸೀಸನ್'ನಲ್ಲಿ ಈತನಿಗೆ ಆಹ್ವಾನ ನೀಡಲಾಗಿದೆಯಂತೆ. ತಾನು ನಡೆದು ಬಂದ ದಾರಿ ಇತ್ಯಾದಿ ಎಲ್ಲವನ್ನೂ ಕಾರ್ಯಕ್ರಮಕ್ಕಾಗಿ ಶೂಟ್ ಮಾಡಿಕೊಂಡೂ ಹೋಗಿದ್ದಾರೆ ಎಂದು ಧನಂಜಯ್ ಕೊಚ್ಚಿಕೊಳ್ಳುತ್ತಾನೆ.

ಹೀಗೆ, ಆರು ವರ್ಷಗಳಿಂದ ಈ ಗೋಲ್ಡನ್ ಬಾಬಾ ಸಾವಿರಾರು ಮುಗ್ಧ ಭಕ್ತರಿಗೆ ಮೋಸ ಮಾಡುತ್ತಲೇ ಬಂದಿದ್ದಾನೆ. ಮೋಸ ಹೋದವರೆಲ್ಲ ಈಗ ಇವನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವರದಿ: ಮಂಜುನಾಥ್, ಸುವರ್ಣನ್ಯೂಸ್

click me!