
ನವದೆಹಲಿ: ಡೋಕ್ಲಾಮ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಲು ಭಾರತ ಸಿದ್ಧವಿದೆ. ಆದರೆ ಮಾತುಕತೆಗೆ ಹೊರತಾಗಿ ಚೀನಾ ಯಾವುದೇ ಕ್ರಮಕ್ಕೆ ಮುಂದಾದಲ್ಲಿ ಅದನ್ನು ಸೂಕ್ತವಾಗಿ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿಗೆ ಭರವಸೆ ನೀಡಿದ್ದಾರೆ.
ಕಳೆದೊಂದು ತಿಂಗಳನಿಂದ ಉಭಯ ದೇಶಗಳ ನಡುವೆ ಉಂಟಾಗಿರುವ ವಿವಾದದ ಕುರಿತು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವೆ ಸುಷ್ಮಾ ಸ್ವರಾಜ್, ಗಡಿಯಲ್ಲಿನ ಬಿಕ್ಕಟ್ಟು ಕೊನೆಗಾಣಿಸಲು ಚೀನಾದೊಂದಿಗೆ ಮಾತುಕತೆಗೆ ಭಾರತ ಸಿದ್ಧವಿದೆ. ಆದರೆ ಎರಡೂ ದೇಶಗಳು ತಮ್ಮ ಸೇನೆಗಳನ್ನು ಮೊದಲು ಹಿಂಪಡೆಯಬೇಕು ಎಂಬುದು ನಮ್ಮ ನಿಲುವು. ಭಾರತ- ಚೀನಾ- ಭೂತಾನ್ ದೇಶಗಳ ಗಡಿಭಾಗಗಳು ಕೂಡುವ ಪ್ರದೇಶದಲ್ಲಿ, ಗಡಿ ನಿರ್ಣಯವನ್ನು ಮೂರೂ ದೇಶಗಳು ಒಂದಾಗಿ ನಿರ್ಧರಿಸಬೇಕು ಎಂದು 2012ರಲ್ಲಿ ಲಿಖಿತ ಒಪ್ಪಂದವಾಗಿದೆ. ಆದರೆ ಇದೀಗ ಚೀನಾ, ಭೂತಾನ್ಗೆ ಸೇರಿದ ಪ್ರದೇಶದವನ್ನು ಆಕ್ರಮಿಸಿಕೊಳ್ಳಲು ಯತ್ನಿಸುವ ಮೂಲಕ ಭಾರತದ ಭದ್ರತೆಗೆ ಧಕ್ಕೆ ತರುತ್ತಿದೆ. ಏಕಪಕ್ಷೀಯವಾಗಿ ತ್ರಿವಳಿ ಸಂಗಮ ಪ್ರದೇಶದಲ್ಲಿ ಗಡಿರೇಖೆ ಬದಲಿಸುವ ಮೂಲಕ ವಿವಾದ ಹುಟ್ಟುಹಾಕಿದೆ. ಹೀಗಾಗಿ ಭೂತಾನ್ ದೇಶದ ಕೋರಿಕೆಯಂತೆ ಆ ಪ್ರದೇಶದಲ್ಲಿ ಭಾರತ ತನ್ನ ಸೇನೆಯನ್ನು ನಿಯೋಜಿಸಿದೆ ಎಂದು ಭಾರತದ ಕ್ರಮವನ್ನು ಸುಷ್ಮಾ ಸಮರ್ಥಿಸಿಕೊಂಡರು. ವಿವಾದ ಇತ್ಯರ್ಥಕ್ಕೆ ಉಭಯ ದೇಶಗಳು ಮೊದಲು ವಿವಾದಿತ ಪ್ರದೇಶದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ. ಆದರೆ ಚೀನಾ, ನೀವು ಮಾತ್ರ ಹಿಂದೆ ಸರಿಯಬೇಕು ಎಂದು ನಮಗೆ ಸೂಚಿಸುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ನೆರೆ ದೇಶದ ಜೊತೆಗೆ ವಿವಾದ ನಮಗೆ ಬೇಕಿಲ್ಲ. ಶಾಂತಿಯುತವಾಗಿ ವಿವಾದ ಇತ್ಯರ್ಥಕ್ಕೆ ನಾವು ಬದ್ಧ. ಒಂದು ವೇಳೆ ಚೀನಾ ಇದಕ್ಕೆ ವಿರುದ್ಧ ನಿಲುವು ಕೈಗೊಂಡರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಾವು ಅಣಿಯಾಗಿದ್ದೇವೆ ಎಂದು ಸುಷ್ಮಾ ಸದನಕ್ಕೆ ಭರವಸೆ ನೀಡಿದರು.
ಚೀನಾ ಭೂತಾನ್'ನೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂಬುದು ಎಲ್ಲ ದೇಶಗಳಿಗೂ ಅರಿವಾಗಿರುವುದರಿಂದ, ಭಾರತ ತೆಗೆದುಕೊಂಡಿರುವ ನಿರ್ಧಾರದಲ್ಲಿ ತಪ್ಪಿಲ್ಲ ಎಂಬುದನ್ನು ಅವು ಅರ್ಥಮಾಡಿಕೊಂಡಿವೆ. ಹೀಗಾಗಿ ಎಲ್ಲ ದೇಶಗಳು ನಮ್ಮನ್ನು ಬೆಂಬಲಿಸುತ್ತಿವೆ. ಕಾನೂನು ನಮ್ಮ ಪರವಾಗಿದೆ ಮತ್ತು ಎಲ್ಲರೂ ಅದನ್ನು ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಸುಷ್ಮಾ ವಿವರಿಸಿದರು.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.