ರದ್ದಾಗಲಿದೆಯಾ ಆಧಾರ್ ಕಾರ್ಡ್?

By Web DeskFirst Published Sep 26, 2018, 7:31 AM IST
Highlights

ಆಧಾರ್ ಕಾರ್ಡಿಗೆ ಸಂಬಂಧ ಪಟ್ಟಂತೆ ಮಹತ್ವದ ತೀರ್ಪನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಪ್ರಕಟಿಸಲಿದ್ದು, ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ತಂದಿರುವ 12 ಅಂಕಿಯ ‘ಆಧಾರ್’ ಹಣೆಬರಹವನ್ನು ನಿರ್ಧರಿಸಲಿದೆ.

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಆಧಾರ್ ನಂಬರ್ ದೇಶದಲ್ಲಿ ಇರುವುದೋ, ರದ್ದಾಗುವುದೋ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ. ಆಧಾರ್ ಬಗ್ಗೆ ಮಹತ್ವದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಪ್ರಕಟಿಸಲಿದ್ದು, ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ತಂದಿರುವ 12 ಅಂಕಿಯ ‘ಆಧಾರ್’ ಹಣೆಬರಹವನ್ನು ನಿರ್ಧರಿಸಲಿದೆ. ‘ಆಧಾರ್’ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ 27 ಅರ್ಜಿಗಳ ಗುಚ್ಛದ ವಿಚಾರಣೆ ನಡೆಸಿರುವ ನ್ಯಾಯಾಲಯದ ಸಾಂವಿಧಾನಿಕ ಪೀಠ, ಬೆಳಗ್ಗೆ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ. 

ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಪುಟ್ಟಸ್ವಾಮಿ ಮುಂದಾಳತ್ವದಲ್ಲಿ 27 ಅರ್ಜಿಗಳು ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ದ್ದವು. ಆಧಾರನ್ನು ಸರ್ಕಾರದ ವಿವಿಧ ಪ್ರಯೋಜನ ಪಡೆಯಲು ಕಡ್ಡಾಯ ಮಾಡಿದ್ದನ್ನು ಅರ್ಜಿಗಳಲ್ಲಿ ವಿರೋಧಿಸಲಾಗಿತ್ತು. ಜತೆಗೆ ಆಧಾರ್‌ನ ದತ್ತಾಂಶಗ ಳನ್ನು ಹ್ಯಾಕ್ ಮಾಡಿದರೆ ಅದು ರಾಷ್ಟ್ರೀಯ ಭದ್ರತೆಗೆ ಅಪಾಯ ತರುತ್ತದೆ. 

ಖಾಸಗಿತನಕ್ಕೆ ಭಂಗ ಬರುತ್ತದೆ ಎಂದೂ ಅರ್ಜಿದಾರರು ವಾದಿಸಿದ್ದರು. ಆದರೆ ಸರ್ಕಾರಿ ಸೇವೆಗಳ ದುರುಪಯೋಗ ತಡೆದು, ಅರ್ಹ ಫಲಾನುಭವಿಗಳಿಗೆ ಸವಲತ್ತು ಲಭಿಸುವಂತಾಗಲು ಆಧಾರ್ ಅಗತ್ಯ. ಇದರಿಂದ ಸರ್ಕಾರದ ಬೊಕ್ಕ ಸಕ್ಕೂ ಹಣ ಉಳಿತಾಯವಾಗಿ, ಹಣದ ಪೋಲು ತಪ್ಪಲಿದೆ ಎಂದು ಸರ್ಕಾರ ವಾದ ಮಂಡಿಸಿತ್ತು. ಈ ಅರ್ಜಿಗಳ ಗುಚ್ಛವನ್ನು ನ್ಯಾಯಾಲಯ 4 ತಿಂಗಳ ಅವಧಿಯಲ್ಲಿ ಸುದೀರ್ಘ 38 ದಿವಸಗಳ ಕಾಲ ವಿಚಾರಣೆ ನಡೆಸಿದೆ.

 ಆಧಾರ್ ಸಿಂಧುತ್ವ ರದ್ದಾದರೆ: ಆಧಾರ್‌ನ ಸಾಂವಿಧಾನಿಕ ಸಿಂಧುತ್ವ ರದ್ದಾದರೆ ಸರ್ಕಾರದ ವಿವಿಧ  ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸಿ, ‘ಅರ್ಹ’ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಸರ್ಕಾರದ ಯತ್ನಕ್ಕೆ ಭಾರಿ ಹಿನ್ನಡೆಯಾಗಲಿದೆ. 

ಆಧಾರ್ ಸಿಂಧುತ್ವ ಒಪ್ಪಿದರೆ: ನ್ಯಾಯಾಲಯವು ಆಧಾರ್‌ನ ಸಾಂವಿಧಾನಿಕ ಸಿಂಧುತ್ವ ಒಪ್ಪಿದರೆ ಸರ್ಕಾರದ ವಿವಿಧ ಸೇವೆಗಳು ಹಾಗೂ ಜನಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು, ಬ್ಯಾಂಕ್ ಖಾತೆ/ಪಾನ್ ಕಾರ್ಡ್ ಪಡೆಯಲು, ದೂರವಾಣಿ, ಪಾಸ್‌ಪೋರ್ಟ್, ವಾಹನ ಚಾಲನೆ ಪರವಾನಗಿ ಪಡೆಯಲು ಆಧಾರ್ ಕಡ್ಡಾಯವಾಗಲಿದೆ.

click me!