ಮಾಧ್ಯಮಗಳ ತಪ್ಪು ವರದಿ ಮಾನ ಹಾನಿಕರವಲ್ಲ: ಸುಪ್ರೀಂಕೋರ್ಟ್

By Suvarna Web DeskFirst Published Jan 10, 2018, 12:57 PM IST
Highlights

 ಹಗರಣಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ತಪ್ಪು ವರದಿ ಮಾನಹಾನಿಕರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾಧ್ಯಮಗಳಿಗೆ ಪರಿಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡಬೇಕೆಂದು  ಎಂದೂ ಪ್ರತಿಪಾದಿಸಿದೆ.

ನವದೆಹಲಿ (ಜ.10):  ಹಗರಣಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ತಪ್ಪು ವರದಿ ಮಾನಹಾನಿಕರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾಧ್ಯಮಗಳಿಗೆ ಪರಿಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡಬೇಕೆಂದು  ಎಂದೂ ಪ್ರತಿಪಾದಿಸಿದೆ.

ಜತೆಗೆ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಮರುಜೀವ ನೀಡಲು ನಿರಾಕರಿಸಿದೆ. ಹಗರಣವೊಂದರ ಬಗ್ಗೆ ಮಾಧ್ಯಮಗಳ ವರದಿಯಲ್ಲಿ ದೋಷ ಇರಬಹುದು ಅಥವಾ ಅತಿ ಉತ್ಸಾಹವೇ ಕಂಡುಬರಬಹುದು. ಆದರೆ, ಮಾಧ್ಯಮಗಳಿಗೆ ನಾವು ಪೂರ್ಣ ಪ್ರಮಾಣದ ವಾಕ್ ಹಾಗೂ ಅಭಿವೃಕ್ತಿ ಸ್ವಾತಂತ್ರ್ಯ ಒದಗಿಸಬೇಕು. ತಪ್ಪಾಗಿ ವರದಿ ಆಗಬಹುದು. ಹಾಗಂತ ಮಾನನಷ್ಟ  ಸಮರಕ್ಕೆ ದೂಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಭೂಮಿ ಮಂಜೂರಾತಿ ಸಂಬಂಧ ತಮ್ಮ ಕುಟುಂಬದ ವಿರುದ್ಧ 2010 ರಲ್ಲಿ ಅಪಮಾನಕಾರಿ ವರದಿ ಪ್ರಸಾರ ಮಾಡಿದ್ದ ಐಬಿಎನ್ ಹಿಂದಿ ವಾಹಿನಿಯ ಆಗಿನ ಮುಖ್ಯಸ್ಥ ರಾಜ್‌ದೀಪ್ ಸರ್ದೇಸಾಯಿ ಹಾಗೂ ವರದಿಗಾರರ ವಿರುದ್ಧ  ಬಿಹಾರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೆ. ಆದರೆ ಅದನ್ನು ಪಟನಾ ಹೈಕೋರ್ಟ್ ೨೦೧೭ರ ಸೆ.೧೨ರಂದು ರದ್ದುಗೊಳಿಸಿದೆ ಎಂದು ಬಿಹಾರದ ಸಚಿವೆ ಹಾಗೂ ಹಿರಿಯ ಅಧಿಕಾರಿಯೊಬ್ಬರ ದಂಪತಿಯ ಪುತ್ರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು  ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದ ನ್ಯಾಯಪೀಠ, ಪ್ರಜಾಪ್ರಭುತ್ವದಲ್ಲಿ  ಅರ್ಜಿದಾರರು ಸಹಿಷ್ಣುತೆಯಿಂದ ಇರುವುದನ್ನು ಕಲಿಯಬೇಕು. 2011 ರಿಂದ ಪ್ರಕರಣ ಮುಂದುವರಿದುಕೊಂಡು ಬಂದಿದೆ. ಸಾಕಷ್ಟು ಸಮಯ ಹಾಗೂ ಹಣ ವೆಚ್ಚವಾಗಿದೆ. ಮಾನನಷ್ಟ ಮೊಕದ್ದಮೆ ಹೂಡಲು ಸಂವಿಧಾನದತ್ತ ಅವಕಾಶ ನಿಮಗಿದೆ. ಆದರೆ, ತಪ್ಪು ಮಾಧ್ಯಮ ವರದಿ ಮಾನನಷ್ಟ ಎಂದು ಪರಿಗಣಿತವಾಗುವುದಿಲ್ಲ ಎಂದು ಹೇಳಿದರು.

 

click me!