ಇಂಥ ಕೆಟ್ಟ ಆಡಳಿತವನ್ನು ನಾವು ನೋಡೇ ಇಲ್ಲ: ಹೈ

By Suvarna Web DeskFirst Published Jan 10, 2018, 12:32 PM IST
Highlights

ವಿಧಾನಸೌಧದಲ್ಲಿ ಆಡಳಿತ ಕೆಟ್ಟುಹೋಗಿದೆ. ಇಂತಹ ಆಡಳಿತವನ್ನು ನಾವು ಎಂದೂ ನೋಡಿಯೇ ಇರಲಿಲ್ಲ. ಸರ್ಕಾರವು  ಪ್ರತಿ ಎರಡು ಗಂಟೆಗೆ ಅಧಿಕಾರಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತದೆ. ತದನಂತರ ಹುದ್ದೆ ತೋರಿಸುವುದೇ ಇಲ್ಲ. ಇದರಿಂದ ಅಧಿಕಾರಿಯು ಕೆಲಸ ಮಾಡದೇ  ತಿಂಗಳ ಕೊನೆಯಲ್ಲಿ ಸಂಬಳ ಪಡೆಯುತ್ತಾರೆ ಎಂದು ಹೈಕೋರ್ಟ್  ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು (ಜ.10):  ವಿಧಾನಸೌಧದಲ್ಲಿ ಆಡಳಿತ ಕೆಟ್ಟುಹೋಗಿದೆ. ಇಂತಹ ಆಡಳಿತವನ್ನು ನಾವು ಎಂದೂ ನೋಡಿಯೇ ಇರಲಿಲ್ಲ. ಸರ್ಕಾರವು  ಪ್ರತಿ ಎರಡು ಗಂಟೆಗೆ ಅಧಿಕಾರಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತದೆ. ತದನಂತರ ಹುದ್ದೆ ತೋರಿಸುವುದೇ ಇಲ್ಲ. ಇದರಿಂದ ಅಧಿಕಾರಿಯು ಕೆಲಸ ಮಾಡದೇ  ತಿಂಗಳ ಕೊನೆಯಲ್ಲಿ ಸಂಬಳ ಪಡೆಯುತ್ತಾರೆ ಎಂದು ಹೈಕೋರ್ಟ್  ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರೊಬ್ಬರನ್ನು ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ವರ್ಗಾವಣೆ ಮಾಡಿ, ನಂತರ ಯಾವುದೇ ಹುದ್ದೆಯನ್ನು ತೋರಿಸದ ಪ್ರಕರಣ ಕುರಿತು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಈ ರೀತಿ ಕೆಂಡ ಕಾರಿತು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಆದ ಶಿವಾಜಿ ಎ.ಕಾವಲೆ ಎಂಬುವರನ್ನು 2017 ರ ಜುಲೈ 13 ರಂದು ಕಲಬುರಗಿಯಿಂದ ವಿಧಾನಸೌಧ ಉಪ ವಿಭಾಗ ಸಂಖ್ಯೆ-2 ಗೆ ಈ ಹಿಂದೆ ವರ್ಗಾವಣೆ ಮಾಡಲಾಗಿತು.

ನಂತರ ಜುಲೈ ೧೫ರಂದು ಆ ಆದೇಶವನ್ನು ಪರಿಷ್ಕರಿಸಿ ಮತ್ತೊಬ್ಬರಿಗೆ ಆ ಜಾಗಕ್ಕೆ ವರ್ಗಾಯಿಸಲಾಯಿತು. ತದನಂತರ ಆ.8 ರಂದು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವಿಭಾಗಕ್ಕೆ ವರ್ಗಾಯಿಸಲಾಯಿತು. ಈ ಕ್ರಮ ಪ್ರಶ್ನಿಸಿ ಶಿವಾಜಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಹಂಗಾಮಿ ಸಿಜೆ ಎಚ್.ಜಿ. ರಮೇಶ್ ಅವರು, ರಾಜ್ಯ ಸರ್ಕಾರವು ಕಾನೂನು ಬಾಹಿರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತದೆ. ಪ್ರತಿ ಎರಡು ಗಂಟೆಗೂ ಅಧಿಕಾರಿಗಳ ವರ್ಗಾಣೆ ನಡೆಯುತ್ತದೆ. ಅಧಿಕಾರಿಗಳು ಪ್ರಭಾವಿಯೊಬ್ಬರು ಶಿಫಾರಸು ತಂದರೆ ಸಾಕು ವರ್ಗಾವಣೆ ಮಾಡಲಾಗುತ್ತದೆ. ಅಧಿಕಾರಿಗಳು ಸಹ ವಿಧಾನಸೌದಲ್ಲಿ ತಮ್ಮ ಕರ್ತವ್ಯ ನಿರ್ವಹಿಸದೆ  ಬರೀ ವ್ಯಾಜ್ಯಗಳಲ್ಲಿಯೇ ಮಗ್ನರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

 

click me!