
ಬೆಂಗಳೂರು(ಡಿ. 18): ಮುಂಬೈ ಮಾದರಿಯಲ್ಲಿ ನಗರದಲ್ಲೂ ಸಬ್'ಅರ್ಬನ್ ರೈಲು ಸೇವೆ ಒದಗಿಸುತ್ತಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಮೊದಲ ಹಂತದಲ್ಲಿ ಉಪನಗರಗಳಿಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.
ನಗರದ ಎನ್.ಆರ್. ಕಾಲೋನಿಯಲ್ಲಿ ಶನಿವಾರ ನೂತನ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಜನತೆ ಬಹಳ ದಿನಗಳಿಂದ ಉಪನಗರಗಳ ರೈಲು ಸೇವೆ ಕನಸು ಕಟ್ಟಿಕೊಂಡಿದ್ದಾರೆ. ಈ ಸಂಬಂಧ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಬೆಂಗಳೂರು- ಕೆ.ಆರ್.ಪುರ ಹಾಗೂ ಬೆಂಗಳೂರು- ಬಂಗಾರಪೇಟೆ ನಿಲ್ದಾಣಕ್ಕೆ ಮೊದಲ ಹಂತದಲ್ಲಿ ರೈಲು ಸಂಚರಿಸಲಿದೆ. ನಂತರದಲ್ಲಿ ಯಲಹಂಕ, ಯಶವಂತಪುರ, ಕೆಂಗೇರಿ, ಬಿಡದಿ, ರಾಮನಗರ, ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಲು ಜೋಡಿ ಮಾರ್ಗಗಳಾಗಿ ಪರಿವರ್ತಿಸಲಾಗುವುದು ಎಂದರು.
ಅಡುಗೆ ಅನಿಲವನ್ನು ಪೈಪ್'ಗಳ ಮೂಲಕ ನೇರವಾಗಿ ಪೂರೈಕೆ ಮಾಡುವ ಕಾಮಗಾರಿ ನಗರದಲ್ಲಿ ಬಹುತೇಕ ಪೂರ್ಣಗೊಂಡಿದೆ. ಮೂರೂವರೆ ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ ಎಂದು ಹೇಳಿದರು.
ಪ್ರತ್ಯೇಕ ಕೊಠಡಿ: ನಿರ್ಭಯಾ ನಿಧಿಯಲ್ಲಿರುವ ಒಂದು ಸಾವಿರ ಕೋಟಿ ರುಪಾಯಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಕೊಠಡಿ, ಶೌಚಾಲಯಗಳ ನಿರ್ಮಾಣ, ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ರೂ.106 ಕೋಟಿಯನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ದೇಶದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ಸಂಬಂಧ ಕೇಂದ್ರ ಸರ್ಕಾರದ ಫೇಮ್ ಯೋಜನೆಯಲ್ಲಿ 150 ಬಸ್'ಗಳನ್ನು ನಗರಕ್ಕೆ ಒದಗಿಸಲು ಕೇಂದ್ರ ಸಾರಿಗೆ ಸಚಿವರೊಡನೆ ಚರ್ಚಿಸುವುದಾಗಿ ತಿಳಿಸಿದ ಅವರು, ಸಂಚಾರ ಸುರಕ್ಷತೆಗಾಗಿ ರೂ.40 ಕೋಟಿ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.
(ಕನ್ನಡಪ್ರಭ ವಾರ್ತೆ)
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.