
ಶಿವಮೊಗ್ಗ(ಮೇ.27): ಆತ ಕಷ್ಟ ಪಟ್ಟು ಓದಿ ಹೆಚ್ಚು ಅಂಕ ಪಡೆದಿದ್ದ ಗ್ರಾಮೀಣ ವಿದ್ಯಾರ್ಥಿ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮೈಸೂರು ವಿವಿ ಘಟಿಕೋತ್ಸವದಲ್ಲಿ ಬಂಗಾರದ ಪದಕ ಪಡೆಯಬೇಕಿತ್ತು. ಆದರೆ ಯಾರದೋ ತಪ್ಪಿಗೆ ಆತ ಪಡೆಯಬೇಕಿದ್ದ ಗೋಲ್ಡ್ ಮೆಡಲ್ ಬೇರೊಬ್ಬರ ಪಾಲಾಗಿದೆ. ಯಾರು ಆ ವಿದ್ಯಾರ್ಥಿ? ಅಸಲಿಗೆ ಆಗಿದ್ದೇನು? ಇಲ್ಲಿದೆ ವಿವರ.
ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಆನವೇರಿ ಗ್ರಾಮದ ಸೂರ್ಯತೇಜ, ಮೈಸೂರಿನ ಮಹಾಜನ ಕಾಲೇಜಿನಲ್ಲಿ 2016 ರ ಜೂನ್ ಅಂತ್ಯಕ್ಕೆ 10 ಸೆಮಿಸ್ಟರ್'ಗಳ MTA ಕೋರ್ಸ್ ಮುಗಿಸಿದ್ದ. ಮೊದಲ 9 ಸೆಮಿಸ್ಟರ್'ಗಳಲ್ಲೂ ಇಡೀ ಕಾಲೇಜಿಗೆ ಪ್ರಥಮ ರ್ಯಾಂಕ್ ಗಳಿಸಿದ್ದ ಸೂರ್ಯತೇಜ 10ನೇ ಸೆಮಿಸ್ಟರ್ನಲ್ಲಿ ಎರಡನೇ ಸ್ಥಾನ ಪಡೆದಿದ್ದ. ವಿವಿ ನೀಡಿದ ಅಂಕಪಟ್ಟಿಯಲ್ಲಿ ಈತನ ಪರ್ಸಂಟೇಜ್ 70.45 ಎಂದು ನಮೂದಾಗಿದ್ದು, ಒಟ್ಟು ಅಂಕಗಳನ್ನು ಲೆಕ್ಕಮಾಡಿದಾಗ 77.9 ಪರ್ಸಂಟೇಜ್ ಆಗಿತ್ತು. ಇದರಿಂದ ಗಾಬರಿಗೆ ಬಿದ್ದ ವಿದ್ಯಾರ್ಥಿ ಸೂರ್ಯತೇಜ ವಿವಿಯ ಪರೀಕ್ಷಾಂಗ ವಿಭಾಗಕ್ಕೆ ಅಂಕಪಟ್ಟಿಯ ಪರ್ಸಂಟೇಜ್ ವ್ಯತ್ಯಾಸ ಸರಿಪಡಿಸಿಕೊಡುವಂತೆ ಅರ್ಜಿ ನೀಡಿದ್ದ. ಕೊನೆಗೂ ತನ್ನ ತಪ್ಪನ್ನು ಸರಿಪಡಿಸಿಕೊಂಡ ವಿವಿ ಹಳೆಯ ಅಂಕಪಟ್ಟಿ ಹಿಂಪಡೆದು, 77.9 ಪರ್ಸಂಟೇಜಿನ ಹೊಸ ಅಂಕಪಟ್ಟಿಯನ್ನು ನೀಡಿತು. ಈ ವೇಳೆಗಾಗಲೇ ಸೂರ್ಯ ತೇಜನ ರ್ಯಾಂಕ್ ಕನಸು ನುಚ್ಚು ನೂರಾಗಿತ್ತು. ಯಾಕಂದ್ರೆ 77.3 ಪರ್ಸಂಟೇಜ್ ಪಡೆದ ಶರತ್ ಚಿನ್ನಪ್ಪ ಎಂಬ ವಿದ್ಯಾರ್ಥಿಗೆ MTA ವಿಭಾಗದಲ್ಲಿ ಮೊದಲ ರ್ಯಾಂಕ್ ಜೊತೆಗೆ ಬಂಗಾರದ ಪದಕವನ್ನು ವಿವಿ ಪ್ರದಾನ ಮಾಡಿತ್ತು.
ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಅನುಮಾನದ ಹುತ್ತ ಹುಟ್ಟಿಕೊಳ್ಳುತ್ತದೆ. 77.3 ಪರ್ಸಂಟೇಜ್ನೊಂದಿಗೆ ಗೋಲ್ಡ್ ಮೆಡಲ್ ಪಡೆದಿದ್ದ ಶರತ್ ಚಿನ್ನಪ್ಪ ಮೈಸೂರು ವಿವಿಯ ಪ್ರಾಧ್ಯಾಪಕರೊಬ್ಬರ ಪುತ್ರ. ಶರತ್'ಗೆ ರ್ಯಾಂಕ್ ಬರಲೆಂದೇ ಸೂರ್ಯತೇಜನ ಅಂಕಪಟ್ಟಿಯಲ್ಲಿ ತಪ್ಪೆಸಗಲಾಗಿದೆ ಎನ್ನುವುದು ರ್ಯಾಂಕ್ ವಂಚಿತ ವಿದ್ಯಾರ್ಥಿ ತಂದೆಯ ಆರೋಪ.
ಇನ್ನು ಸೂರ್ಯತೇಜ ತನಗೆ ಸಿಗಬೇಕಾದ ಹಾಗೂ ಚಿನ್ನದ ಪದಕಕ್ಕಾಗಿ ವಿವಿಯ ರಿಜಿಸ್ಟ್ರಾರ್'ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿ ವಾಲಾ, ಪ್ರಧಾನಿ ಮೋದಿಗೂ ಸಹ ದೂರು ನೀಡಿದ್ದಾನೆ. ಅದೇನೇ ಇರಲಿ ವಿವಿ ಮಾಡಿದ ತಪ್ಪಿನಿಂದಾಗಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ರ್ಯಾಂಕ್ ಹಾಗೂ ಚಿನ್ನದ ಪದಕ ವಂಚಿತನಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.