
ಬೆಳಗಾವಿ (ಸೆ. 04): ಶ್ರೀರಾಮ ಸೇನೆ ಪದಾಧಿಕಾರಿ ಹಾಗೂ ಕಾರ್ಯಕರ್ತರ ನಡುವೆ ಉಂಟಾದ ಮನಸ್ಥಾಪದಿಂದ ಶ್ರೀರಾಮ ಸೇನೆಯ ಬೆಳಗಾವಿ ಘಟಕದ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿ ಪರ್ಯಾಯವಾಗಿ ಶ್ರೀರಾಮ ಸೇನಾ ಹಿಂದೂಸ್ತಾನ್ ಎಂಬ ಹೊಸ ಸಂಘಟನೆ ಸ್ಥಾಪಿಸಿಕೊಂಡಿದ್ದಾರೆ.
ನಗರದ ಖಾಸಭಾಗದಲ್ಲಿನ ಸಾಯಿಭವನದಲ್ಲಿ ಸೇರಿದ ಕಾರ್ಯಕರ್ತರು ಶ್ರೀರಾಮ ಸೇನೆಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ, ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರಮಾಕಾಂತ್ ಕೊಂಡುಸ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ‘ಶ್ರೀರಾಮ ಸೇನಾ ಹಿಂದೂಸ್ತಾನ್’ ಎನ್ನುವ ಹೊಸ ಸಂಘದ ಮೊದಲ ಸಭೆಯನ್ನು ಭಾನುವಾರ ನಡೆಸಲಾಯಿತು. ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೆಲ್ಲರೂ ನೂತನವಾಗಿ ಸ್ಥಾಪನೆಗೊಂಡ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ, ಶ್ರೀರಾಮ ಸೇನೆ ಯಾವುದೇ ಪಕ್ಷದಡಿ ಕೆಲಸ ಮಾಡುತ್ತಿರಲಿಲ್ಲ. ಆದರೆ, ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದರು. ಸಿಗದೆ ಇದ್ದಾಗ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಇದೇ ರೀತಿ ಮಾಡಿ ಸೇನೆಯ ಕಾರ್ಯಕರ್ತರನ್ನು ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಕಾರಣಕ್ಕೆ ಅವರ ಸಂಘ ತೊರೆದು ಪ್ರತ್ಯೇಕ ಸಂಘ ರಚಿಸಿಕೊಂಡಿದ್ದೇವೆ. ಶ್ರೀರಾಮ ಸೇನೆಯಲ್ಲಿ ಸದಸ್ಯತ್ವ ಬಾಯಿ ಮಾತಿನಲ್ಲೇ ಇರುವುದರಿಂದ ರಾಜೀನಾಮೆ ಪತ್ರ ಕೊಡುವ ಅಗತ್ಯ ಇಲ್ಲ. ಈ ವಿಷಯ ಮುತಾಲಿಕ್ ಅವರಿಗೆ ತಿಳಿಸುವ ಅಗತ್ಯವೂ ಇಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.