ಕಾಶ್ಮೀರಿಗಳಿಗೆ ಭಾರತದಲ್ಲಿ ಭವಿಷ್ಯ ಇಲ್ವಂತೆ| ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ಇತ್ತ ಶಾ ಫೈಜಲ್ ಅಭಿಮತ| ‘ಭಾರತ ಸರ್ಕಾರ ಕಾಶ್ಮೀರಿಗಳ ಜೊತೆ ವರ್ತಿಸುತ್ತಿರುವ ರೀತಿ ಸರಿಯಿಲ್ಲ’| ಕಾಶ್ಮೀರಿ ಯುವಜನತೆ ಭಾರತದಿಂದ ದೂರ ಸರಿಯುತ್ತಿದ್ದಾರೆ ಎಂದ ಫೈಜಲ್| ‘ಯುವಕರ ಮನದಲ್ಲಿ ಮತ್ತೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಬರುವಂತೆ ಮಾಡಬೇಕಿದೆ’| ಸರ್ಕಾರ ಕಾಶ್ಮೀರಿಗಳ ಹಕ್ಕುಗಳನ್ನು ಮರಳಿಸಲು ಆಗ್ರಹ
ಶ್ರೀನಗರ(ಜ.16): ಭಾರತ ಸರ್ಕಾರ ಕಾಶ್ಮೀರಿಗಳ ಜೊತೆ ವರ್ತಿಸುತ್ತಿರುವ ರೀತಿಯಿಂದಾಗಿ ಯುವಜನತೆ ಭಾರತದಿಂದ ದೂರ ಸರಿಯುತ್ತಿದ್ದಾರೆ ಎಂದು ಇತ್ತೀಚಿಗಷ್ಟೇ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 2010ರ ಬ್ಯಾಚ್ನ ಯುಪಿಎಸ್ಸಿ ಟಾಪರ್ ಶಾ ಪೈಜಲ್ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಾ ಫೈಜಲ್, ಕಾಶ್ಮೀರಿ ಯುವಕರು ತಮ್ಮ ಭವಿಷ್ಯವನ್ನು ಭಾರತದಲ್ಲಿ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರಿ ಯುವಕರ ಮನದಲ್ಲಿ ಮತ್ತೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಬರುವಂತೆ ಮಾಡಬೇಕಿದೆ. ಇದು ಬಂದೂಕಿನ ನಳಿಕೆಯಿಂದ ಸಾಧ್ಯವಿಲ್ಲ ಎಂಬುದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಇಂದಿನ ತುರ್ತು ಅವಶ್ಯ ಎಂದು ಶಾ ಫೈಜಲ್ ನುಡಿದಿದ್ದಾರೆ.
ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಮುಂದಾಗಬೇಕಿದ್ದು, ಮೊದಲು ನಾಗರಿಕ ಪ್ರದೇಶಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು. ಅಲ್ಲದೇ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಶಾ ಫೈಜಲ್ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ ರೀತಿಯ ಪ್ರತಿಭಟನೆಗಳನ್ನು ಹತ್ತಿಕ್ಕಿರುವ ಪರಿಣಾಮವಾಗಿ ಕಣಿವೆಯಲ್ಲಿ ಜನತೆ ಹಿಂಸಾತ್ಮಕ ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದಾರೆ. ಸರ್ಕಾರ ಮೊದಲು ಅವರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಆಗ್ರಹಿಸಿದ್ದಾರೆ.
ಐಎಎಸ್ ಟಾಪರ್ ರಾಜೀನಾಮೆ: ಮೋದಿ ವಿರುದ್ಧ ಆರೋಪಗಳ ಸುರಿಮಳೆ!